ಪದ್ಯ ೨೬: ಕುರುಸೇನೆಯು ಶಲ್ಯನನ್ನು ಹೇಗೆ ಕೊಂಡಾಡಿತು?

ದಳಪತಿಯ ಸುಮ್ಮಾನಮುಖ ಬೆಳ
ಬೆಳಗುತದೆ ಗಂಗಾಕುಮಾರನ
ಕಳಶಜನ ರಾಧಾತನೂಜನ ರಂಗಭೂಮಿಯಿದು
ಕಳನನಿದನಾಕ್ರಮಿಸುವಡೆ ವೆ
ಗ್ಗಳೆಯ ಮಾದ್ರಮಹೀಶನಲ್ಲದೆ
ಕೆಲರಿಗೇನಹುದೆನುತ ಕೊಂಡಾಡಿತ್ತು ಕುರುಸೇನೆ (ಶಲ್ಯ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕುರುಸೇನೆಯು ಸೈನಿಕರು ಶಲ್ಯನನ್ನು ನೋಡಿ ಉತ್ಸಾಹಭರಿತರಾದರು. ಸೇನಾಧಿಪತಿಯ ಮುಖ ತೇಜಸ್ಸಿನಿಂದ ಹೊಳೆ ಹೊಳೆಯುತ್ತಿದೆ. ಭೀಷ್ಮ ದ್ರೋಣ ಕರ್ಣರು ಕಾದಿದ ರಣರಂಗವನ್ನಾಕ್ರಮಿಸಲು ಶಲ್ಯನಿಗಲ್ಲದೆ ಇನ್ನಾರಿಗೆ ಸಾಧ್ಯ ಎಂದು ಶಲ್ಯನನ್ನು ಕೊಂಡಾಡಿತು.

ಅರ್ಥ:
ದಳಪತಿ: ಸೇನಾಧಿಪತಿ; ಸುಮ್ಮಾನ: ಸಂತೋಷ, ಹಿಗ್ಗು; ಮುಖ: ಆನನ; ಬೆಳಗು: ಹೊಳಪು, ಕಾಂತಿ; ಕುಮಾರ: ಮುಗ; ಕಳಶಜ: ದ್ರೋಣ; ರಾಧಾತನೂಜ: ರಾಧೆಯ ಮಗ (ಕರ್ಣ); ಭೂಮಿ: ಇಳೆ; ಕಳ: ರಣರಂಗ; ಆಕ್ರಮಿಸು: ಮೇಲೆ ಬೀಳುವುದು; ವೆಗ್ಗಳೆ: ಶ್ರೇಷ್ಠ; ಮಹೀಶ: ರಾಜ; ಕೊಂಡಾಡು: ಹೊಗಳು

ಪದವಿಂಗಡಣೆ:
ದಳಪತಿಯ +ಸುಮ್ಮಾನ+ಮುಖ +ಬೆಳ
ಬೆಳಗುತದೆ+ ಗಂಗಾಕುಮಾರನ
ಕಳಶಜನ +ರಾಧಾ+ತನೂಜನ +ರಂಗ+ಭೂಮಿಯಿದು
ಕಳನನಿದನ್+ಆಕ್ರಮಿಸುವಡೆ +ವೆ
ಗ್ಗಳೆಯ +ಮಾದ್ರ+ಮಹೀಶನಲ್ಲದೆ
ಕೆಲರಿಗ್+ಏನಹುದೆನುತ +ಕೊಂಡಾಡಿತ್ತು +ಕುರುಸೇನೆ

ಅಚ್ಚರಿ:
(೧) ದ್ರೋಣರನ್ನು ಕಳಶಜ, ಕರ್ಣನನ್ನು ರಾಧಾತನೂಜ, ಭೀಷ್ಮರನ್ನು ಗಂಗಾಕುಮಾರ ಎಂದು ಕರೆದಿರುವುದು
(೨) ಕಳ, ರಂಗಭೂಮಿ – ರಣರಂಗವನ್ನು ಸೂಚಿಸುವ ಪದ