ಪದ್ಯ ೩೦: ಭೀಮನು ತನ್ನ ಸಂತಸವನ್ನು ಹೇಗೆ ವ್ಯಕ್ತಪಡಿಸಿದನು?

ತೀದುದೆಮಗೆ ವನಪ್ರವಾಸದ
ಖೇದವರ್ಜುನನಗಲಿಕೆಯ ದು
ರ್ಭೇದ ವಿಷವಿಂದಿಳಿದು ಹೋದುದು ಹರಮಹಾದೇವ
ಹೋದ ರಾಜ್ಯಭ್ರಂಶ ಬಹಳ ವಿ
ಷಾದ ಬೀತುದು ನಿಮ್ಮ ಕಾರು
ಣ್ಯೋದಯವು ನಮಗಾಯ್ತಲಾ ಚರಿತಾರ್ಥರಾವೆಂದ (ಅರಣ್ಯ ಪರ್ವ, ೧೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಮಗೆ ವನವಾಸದ ದುಃಖವು ತೀರಿತು, ಸಹಿಸಲಾಗದ ಅರ್ಜುನನ ಅಗಲಿಕೆಯ ವಿಷವೂ ಕಡಿಮೆಯಾಯಿತು, ರಾಜ್ಯವನ್ನು ಕಳೆದುಕೊಂಡ ಖೇದವು ಇಲ್ಲವಾಯಿತು, ನಿಮ್ಮ ದರ್ಶನದಿಂದ ನಾವು ಪಡೆಯಬೇಕಾದುದೆಲ್ಲವನ್ನೂ ಪಡೆದಂತಾಯಿತು ಎಂದು ಭೀಮನು ಹೇಳಿದನು.

ಅರ್ಥ:
ತೀದು: ತೀರಿತು; ವನ: ಕಾಡು; ಪ್ರವಾಸ: ಸಂಚಾರ; ಖೇದ; ದುಃಖ; ಅಗಲಿಕೆ: ಬೇರೆ ಹೋಗು, ತೊರೆ; ದುರ್ಭೇದ: ಒಡೆಯಲು ಕಷ್ಟವಾದ; ವಿಷ: ಗರಲ; ಇಳಿ: ಕಡಿಮೆಯಾಗು; ಹರ: ಶಿವ; ಮಹಾದೇವ: ಶಂಕರ; ರಾಜ್ಯಭ್ರಂಶ: ರಾಜ್ಯದ ಅಗಲಿಕೆ; ವಿಷಾದ: ದುಃಖ; ಬೀತು: ಕಳೆದುಹೋಯಿತು; ಕಾರುಣ್ಯ: ದಯೆ; ಚರಿತಾರ್ಥ: ಕೃತಾರ್ಥ, ಧನ್ಯ;

ಪದವಿಂಗಡಣೆ:
ತೀದುದ್+ಎಮಗೆ +ವನ+ಪ್ರವಾಸದ
ಖೇದವ್+ಅರ್ಜುನನ್+ಅಗಲಿಕೆಯ +ದು
ರ್ಭೇದ +ವಿಷವಿಂದ್+ಇಳಿದು +ಹೋದುದು +ಹರ+ಮಹಾದೇವ
ಹೋದ +ರಾಜ್ಯಭ್ರಂಶ +ಬಹಳ +ವಿ
ಷಾದ +ಬೀತುದು +ನಿಮ್ಮ +ಕಾರು
ಣ್ಯೋದಯವು +ನಮಗಾಯ್ತಲಾ +ಚರಿತಾರ್ಥರಾವೆಂದ

ಅಚ್ಚರಿ:
(೧) ಖೇದ, ವಿಷಾದ – ಸಾಮಾರ್ಥ ಪದ

ಪದ್ಯ ೨೫: ಭೀಮನು ತನ್ನ ಪರಿಚಯವನ್ನು ಹೇಗೆ ಮಾಡಿಕೊಂಡನು?

ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾಂಡುವಾತನ
ತನುಜರಾವು ಯುಧಿಷ್ಠಿರಾರ್ಜುನ ಭೀಮಯಮಳರಲೆ
ಬನಕೆ ಬಂದೆವು ನಮ್ಮ ದಾಯಾ
ದ್ಯನ ವಿಕಾರದ್ಯೂತಕೇಳೀ
ಜನಿತ ಕಿಲ್ಭಿಷದಿಂದ ರಾಜ್ಯಭ್ರಂಶವಾಯ್ತೆಂದ (ಅರಣ್ಯ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಾವು ಮನುಷ್ಯರು, ಚಂದ್ರವಂಶದಲ್ಲಿ ಶ್ರೇಷ್ಠನಾದ ಪಾಂಡು ಮಹಾರಾಜನಿಗೆ ನಾವು ಜನಿಸಿದೆವು. ನಾವು ಐವರು ಅವನ ಮಕ್ಕಳು, ಯುಧಿಷ್ಠಿರ, ಅರ್ಜುನ, ಭೀಮ ಮತ್ತು ನಕುಲ ಸಹದೇವರು. ನಮ್ಮ ದಾಯಾದನ ಕಪಟ ದ್ಯೂತಕ್ಕೆ ಬಲಿಯಾಗಿ ಆ ಕೇಡಿನಿಂದ ನಾವು ರಾಜ್ಯವನ್ನು ಕಳೆದುಕೊಂಡು ಕಾಡಿಗೆ ಬಂದೆವು ಎಂದು ಭೀಮನು ಹೇಳಿದನು.

ಅರ್ಥ:
ಮನುಜ: ನರ; ಸೋಮ: ಚಂದ್ರ; ಕುಲ: ವಂಶ; ಜನಿಸು: ಹುಟ್ಟು; ವರ: ಶ್ರೇಷ್ಠ; ತನುಜ: ಮಕ್ಕಳು; ಯಮಳ: ಅಶ್ವಿನಿ ದೇವತೆಗಳು; ಬನ: ಕಾಡು; ಬಂದೆವು: ಆಗಮಿಸು; ದಾಯಾದಿ: ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು; ವಿಕಾರ: ಮನಸ್ಸಿನ ವಿಕೃತಿ; ದ್ಯೂತ: ಪಗಡೆ; ಕೇಳಿ: ಕ್ರೀಡೆ, ವಿನೋದ; ಜನಿತ: ಹುಟ್ಟಿದ; ಕಿಲ್ಬಿಷ: ಪಾಪ;ರಾಜ್ಯಭ್ರಂಶ: ರಾಜ್ಯವನ್ನು ಕಳೆದುಕೊಂಡು;

ಪದವಿಂಗಡಣೆ:
ಮನುಜರಾವ್ +ಸೋಮಾಭಿ+ಕುಲದಲಿ
ಜನಿಸಿದನು +ವರ +ಪಾಂಡುವ್+ಆತನ
ತನುಜರಾವು+ ಯುಧಿಷ್ಠಿರ+ಅರ್ಜುನ +ಭೀಮ+ಯಮಳರಲೆ
ಬನಕೆ+ ಬಂದೆವು +ನಮ್ಮ +ದಾಯಾ
ದ್ಯನ +ವಿಕಾರ+ದ್ಯೂತ+ಕೇಳೀ
ಜನಿತ+ ಕಿಲ್ಭಿಷದಿಂದ +ರಾಜ್ಯಭ್ರಂಶವಾಯ್ತೆಂದ

ಅಚ್ಚರಿ:
(೧) ಭೀಮನು ತನ್ನ ಪರಿಚಯವನ್ನು ಮಾಡಿದ ಪರಿ – ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾಂಡುವಾತನ ತನುಜರಾವು