ನೋವು ಮನದೊಳಗುಳ್ಳಡಾ ರಾ
ಜೀವಲೋಚನನಾಣೆ ಮಗನೇ
ಜೀವ ಕೌರವನಲ್ಲಿ ಕರಗುವುದೇನ ಹೇಳುವೆನು
ಆವನಾತನ ಬಂಧುವಾತನೆ
ಜೀವವೆನ್ನಯ ದೆಸೆಯ ಭಯ ಬೇ
ಡಾವ ಪರಿಯಿಂದವನನುಳುಹುವ ಹದನ ಮಾಡೆಂದ (ದ್ರೋಣ ಪರ್ವ, ೧ ಸಂಧಿ, ೨೭ ಪದ್ಯ)
ತಾತ್ಪರ್ಯ:
ಭೀಷ್ಮನು ಕರ್ಣನ ಮಾತನ್ನು ಕೇಳಿ, ನಿನ್ನ ಮಾತುಗಳಿಂದ ನನ್ನ ಮನಸ್ಸಿಗೆ ಶ್ರೀಕೃಷ್ಣನಾಣೆಗೂ ಸ್ವಲ್ಪವೂ ನೋವಾಗಿಲ್ಲ. ಮಗನೇ ಕರ್ಣ, ನನ್ನ ಜೀವವು ಕೌರವನಿಗಾಗಿ ಕನಿಕರ ಪಡುತ್ತದೆ, ಏನು ಹೇಳಲಿ, ಕೌರವನ ಬಂಧುವನಾರೊ ಅವನೇ ನನ್ನ ಜೀವ, ನಾನು ನೊಂದೆನೆಂಬ ಭಯ ನಿನಗೆ ಬೇಡ, ಹೇಗಾದರೂ ಮಾಡಿ ಕೌರವನನ್ನುಳಿಸು ಎಂದು ಭೀಷ್ಮರು ಹೇಳಿದರು.
ಅರ್ಥ:
ನೋವು: ಬೇನೆ; ಮನ: ಮನಸ್ಸು; ರಾಜೀವಲೋಚನ: ಕಮಲದಂತ ಕಣ್ಣುಳ್ಳವನು (ಕೃಷ್ಣ); ಆಣೆ: ಪ್ರಮಾಣ; ಮಗ: ಸುತ; ಜೀವ: ಪ್ರಾಣ; ಕರಗು: ಕನಿಕರ ಪಡು; ಬಂಧು: ಸಂಬಂಧಿ; ದೆಸೆ: ದಿಕ್ಕು; ಭಯ: ಅಂಜಿಕೆ; ಬೇಡ: ತ್ಯಜಿಸು; ಪರಿ: ರೀತಿ; ಉಳುಹು: ಬದುಕು, ಜೀವಿಸು; ಹದ: ಸ್ಥಿತಿ;
ಪದವಿಂಗಡಣೆ:
ನೋವು +ಮನದೊಳಗ್+ಉಳ್ಳಡಾ +ರಾ
ಜೀವಲೋಚನನ್+ಆಣೆ +ಮಗನೇ
ಜೀವ +ಕೌರವನಲ್ಲಿ+ ಕರಗುವುದ್+ಏನ +ಹೇಳುವೆನು
ಆವನ್+ಆತನ +ಬಂಧುವ್+ಆತನೆ
ಜೀವವ್+ಎನ್ನಯ +ದೆಸೆಯ +ಭಯ +ಬೇಡ್
ಆವ+ ಪರಿಯಿಂದ್+ಅವನನ್+ಉಳುಹುವ +ಹದನ +ಮಾಡೆಂದ
ಅಚ್ಚರಿ:
(೧) ಭೀಷ್ಮರ ಮನವಿ – ಆವ ಪರಿಯಿಂದವನನುಳುಹುವ ಹದನ ಮಾಡೆಂದ
(೨) ಜೀವ ಪದದ ಬಳಕೆ – ೨,೩, ೫ ಸಾಲಿನ ಮೊದಲ ಪದ