ಪದ್ಯ ೪: ಅರ್ಜುನ ಅಶ್ವತ್ಥಾಮರ ಯುದ್ಧವು ಹೇಗಿತ್ತು?

ಕೆಣಕಿದಡೆ ಗುರುಸುತನನಡಹಾ
ಯ್ದಣೆದನಂಬಿನಲರ್ಜುನನ ಮಾ
ರ್ಗಣಮಹಾರಣ್ಯದಲಿ ನಡೆದುದು ಕಡಿತ ಗುರುಸುತನ
ರಣವಿಶಾರದರಹಿರಲೇ ನೀ
ವಣಕವೇತಕೆ ರಾಜಗುರುಗಳು
ಸೆಣಸುವರೆ ಸೈರಿಸಿರೆ ನೀವೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನು ಅಶ್ವತ್ಥಾಮನನ್ನು ಅಡ್ಡಗಟ್ಟಿ ಬಾಣಗಳಿಂದ ತಿವಿದನು. ಅರ್ಜುನನ ಬಾಣಗಳ ಮಹಾರಣ್ಯವನ್ನು ಅಶ್ವತ್ಥಾಮನು ಕಡಿದನು. ಅರ್ಜುನನು ನೀವು ರಾಜಗುರುಗಳು, ಯುದ್ಧ ವಿಶಾರದರು, ಯುದ್ಧ ಮಾಡುವಿರಾದರೆ ಈ ಹೊಡೆತವನ್ನು ಸೈರಿಸಿರಿ ಎಂದು ಬಾಣ ಪ್ರಯೋಗ ಮಾಡಿದನು.

ಅರ್ಥ:
ಕೆಣಕು: ರೇಗಿಸು; ಸುತ: ಮಗ; ಗುರು: ಆಚಾರ್ಯ; ಅಡಹಾಯ್ದು: ಅಡ್ಡ ಬಂದು, ಮಧ್ಯ ಪ್ರವೇಶಿಸು; ಅಂಬು: ಬಾಣ; ಮಾರ್ಗನ: ಬಾಣ; ಅರಣ್ಯ: ಕಾಡು; ನಡೆ: ಚಲಿಸು; ಕಡಿ: ಸೀಳು; ರಣ: ಯುದ್ಧ; ವಿಶಾರದ: ಪ್ರವೀಣ; ಅಣಕ: ಸೋಗು; ರಾಜ: ನೃಪ; ಸೆಣಸು: ಹೋರಾಡು; ಸೈರಿಸು: ತಾಳು; ಎಚ್ಚು: ಬಾಣ ಪ್ರಯೋಗ ಮಾಡು; ಅಣೆ: ತಿವಿ, ಹೊಡೆ;

ಪದವಿಂಗಡಣೆ:
ಕೆಣಕಿದಡೆ +ಗುರುಸುತನನ್+ಅಡಹಾಯ್ದ್
ಅಣೆದನ್+ಅಂಬಿನಲ್+ಅರ್ಜುನನ +ಮಾ
ರ್ಗಣ+ಮಹಾರಣ್ಯದಲಿ+ ನಡೆದುದು +ಕಡಿತ +ಗುರುಸುತನ
ರಣವಿಶಾರದರ್+ಅಹಿರಲೇ +ನೀವ್
ಅಣಕವೇತಕೆ +ರಾಜಗುರುಗಳು
ಸೆಣಸುವರೆ +ಸೈರಿಸಿರೆ +ನೀವೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಅಂಬು, ಮಾರ್ಗಣ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ಅರ್ಜುನನ ಮಾರ್ಗಣಮಹಾರಣ್ಯದಲಿ ನಡೆದುದು
(೩) ಅಶ್ವತ್ಥಾಮನನ್ನು ಹೊಗಳುವ ಪರಿ – ರಣವಿಶಾರದ

ಪದ್ಯ ೧೪: ಕರ್ಣನು ಕೃಪಾಚಾರ್ಯರನ್ನು ಹೇಗೆ ಹಂಗಿಸಿದನು?

ಬಲ್ಲಿರೈ ಕೌರವನ ಧನವನು
ಹೊಳ್ಳಿಸಲು ಮೃಷ್ಟಾನ್ನದಿಂದವೆ
ಡೊಳ್ಳ ಬೆಳೆಸಿಯೆ ರಾಜಗುರುತನದಿಂದ ಬೆರೆತಿಹಿರಿ
ಬಿಲ್ಲವಿದ್ಯಾ ವಿಷಯ ರಿಪುಭಟ
ಮಲ್ಲರೊಡನೆಯ ಕದನವಿದು ಜಡ
ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ (ವಿರಾಟ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕೌರವನ ಧನವನ್ನು ಬಾಚಿಕೊಂಡು, ಮೃಷ್ಟಾನ್ನ ಭೋಜನವನ್ನುಂಡು, ಡೊಳ್ಳು ಹೊಟ್ಟೆ ಬೆಳೆಸಿ, ರಾಜಗುರುಗಳೆಂದು ಬಿಂಕದಿಂದ ಬೀಗುತ್ತಿದ್ದೀರಿ, ಆದರಿದು ಧನುರ್ವಿದ್ಯೆಯ ವಿಷಯ, ಮಹಾವೀರರಾದ ಶತ್ರುಭಟರೊಡನೆ ಹೋರಾಟ, ನಿಮ್ಮಂತಹ ಜಡರಿಂದೇನು ಸಾಧ್ಯ? ಇದು ಜಪ, ಅನುಷ್ಠಾನ ಇದ್ದ ಹಾಗಲ್ಲ ಎಂದು ಕೃಪಾಚಾರ್ಯರನ್ನು ಕರ್ಣನು ಹಂಗಿಸಿದನು.

ಅರ್ಥ:
ಬಲ್ಲಿರಿ: ತಿಳಿದಿರುವಿರಿ; ಧನ: ಐಶ್ವರ್ಯ; ಹೊಳ್ಳಿಸು: ಖಾಲಿಮಾಡು; ಮೃಷ್ಟಾನ್ನ: ಹಬ್ಬದ ಊಟ; ಡೊಳ್ಳು: ಬೊಜ್ಜು ಬೆಳೆದ ಹೊಟ್ಟೆ; ಬೆಳೆಸು: ವೃದ್ಧಿಸು; ಗುರು: ಆಚಾರ್ಯ; ಬೆರೆ: ಸೇರು,ಸೊಕ್ಕು, ಗರ್ವಿಸು; ಬಿಲ್ಲು: ಚಾಪ; ವಿಷಯ: ವಿಚಾರ; ರಿಪುಭಟ: ವೈರಿ ಸೈನ್ಯ; ಮಲ್ಲ: ಜಟ್ಟಿ; ಕದನ: ಯುದ್ಧ; ಜಡ: ಆಲಸ್ಯ; ಸುಲಭ: ಕಷ್ಟವಲ್ಲದುದು; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಅನುಷ್ಠಾನ: ಆಚರಣೆ;

ಪದವಿಂಗಡಣೆ:
ಬಲ್ಲಿರೈ +ಕೌರವನ +ಧನವನು
ಹೊಳ್ಳಿಸಲು +ಮೃಷ್ಟಾನ್ನದಿಂದವೆ
ಡೊಳ್ಳ+ ಬೆಳೆಸಿಯೆ +ರಾಜಗುರುತನದಿಂದ +ಬೆರೆತಿಹಿರಿ
ಬಿಲ್ಲವಿದ್ಯಾ+ ವಿಷಯ +ರಿಪು+ಭಟ
ಮಲ್ಲರೊಡನೆಯ +ಕದನವಿದು +ಜಡ
ರೆಲ್ಲರಿಗೆ +ಸುಲಭವೆ +ಜಪಾನುಷ್ಠಾನವ್+ಅಲ್ಲೆಂದ

ಅಚ್ಚರಿ:
(೧) ಕೃಪಾಚಾರ್ಯರನ್ನು ಹಂಗಿಸುವ ಪರಿ – ಮೃಷ್ಟಾನ್ನದಿಂದವೆ ಡೊಳ್ಳ ಬೆಳೆಸಿಯೆ ರಾಜಗುರುತನದಿಂದ ಬೆರೆತಿಹಿರಿ