ಪದ್ಯ ೨೬: ಋಷಿಮುನಿಗಳು ಯಾವ ಅಭಿಪ್ರಾಯಕ್ಕೆ ಬಂದರು?

ಅರಸನಪಗತನಾದನಾ ನೃಪ
ನರಸಿ ಬಾಲಕಿ ಮಕ್ಕಳೈವರು
ಭರತ ಕುಲಜರು ನಾವು ತಪಸಿಗಳಿರ್ಪುದಾರಣ್ಯ
ಅರಿಗಳಾ ರಾಕ್ಷಸರು ನಾವಿ
ನ್ನಿರಿಸುವುದು ಮತವಲ್ಲ ಹಸ್ತಿನ
ಪುರದೊಳೊಪ್ಪಿಸಿ ಬಹುದು ಮತವೆಂದುದು ಮುನಿಸ್ತೋಮ (ಆದಿ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಆಶ್ರಮದಲ್ಲಿದ್ದ ಋಷಿಗಳು, ಅರಸನು ಸ್ವರ್ಗಸ್ಥನಾದನು. ಅವನ ಪತ್ನಿಯು ಇನ್ನೂ ಬಾಲಕಿ, ಐವರು ಮಕ್ಕಳು ಭರತಕುಲದವರು, ನಾವು ನೋಡಿದರೆ ತಪಸ್ವಿಗಳು. ಇರುವ ಜಾಗವು ಅರಣ್ಯ. ರಾಕ್ಷಸರು ನಮ್ಮ ಶತ್ರುಗಳು, ಆದುದರಿಂದ ಇವರನ್ನು ಇಲ್ಲಿಟ್ಟುಕೊಳ್ಳುವುದು ಸರಿಯಲ್ಲ. ಇವರನ್ನು ಹಸ್ತಿನಾಪುರಕ್ಕೆ ಕರೆದೊಯ್ದು ಒಪ್ಪಿಸಿಬರುವುದು ಸರಿ ಎಂಬ ಅಭಿಪ್ರಾಯಕ್ಕೆ ಬಂದರು.

ಅರ್ಥ:
ಅರಸ: ರಾಜ; ಅಪಗತ: ಮರಣ ಹೊಂದು, ಸ್ವರ್ಗಸ್ಥನಾಗು; ನೃಪ: ರಾಜ; ಅರಸಿ: ರಾಣಿ; ಬಾಲಕಿ: ಚಿಕ್ಕ ಹುಡುಗಿ; ಕುಲ: ವಂಶ; ತಪಸಿ: ಋಷಿ; ಅರಣ್ಯ: ಕಾಡು;ಅರಿ: ವೈರಿ; ರಾಕ್ಷಸ: ಅಸುರ; ಇರಿಸು: ನೆಲೆಸು; ಮತ: ವಿಚಾರ; ಒಪ್ಪು: ಸಮ್ಮತಿ; ಮತ: ವಿಚಾರ; ಮುನಿ: ಋಷಿ; ಸ್ತೋಮ: ಗುಂಪು;

ಪದವಿಂಗಡಣೆ:
ಅರಸನ್+ಅಪಗತನಾದನ್+ಆ+ ನೃಪನ್
ಅರಸಿ +ಬಾಲಕಿ +ಮಕ್ಕಳೈವರು
ಭರತ +ಕುಲಜರು +ನಾವು +ತಪಸಿಗಳ್+ಇರ್ಪುದ್+ಅರಣ್ಯ
ಅರಿಗಳಾ +ರಾಕ್ಷಸರು+ ನಾವಿನ್
ಇರಿಸುವುದು +ಮತವಲ್ಲ+ ಹಸ್ತಿನ
ಪುರದೊಳ್+ಒಪ್ಪಿಸಿ +ಬಹುದು +ಮತವೆಂದುದು +ಮುನಿಸ್ತೋಮ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಅಪಗತನಾದ ಪದದ ಪ್ರಯೊಗ
(೨) ಅರಸ, ನೃಪ – ಸಮಾನಾರ್ಥಕ ಪದ – ೧ ಸಾಲಿನ ಮೊದಲ ಹಾಗು ಕೊನೆ ಪದ
(೩) ಅರಸ, ಅರಸಿ – ಜೋಡಿ ಪದಗಳು

ಪದ್ಯ ೨೩: ಗಂಧರ್ವರು ಕರ್ಣನ ಜೊತೆ ಹೇಗೆ ಯುದ್ಧ ಮಾಡಿದರು?

ಕಡಿದು ಗಂಧರ್ವನ ಶರೌಘವ
ನಡಸಿ ನೆಟ್ಟವು ಕರ್ಣಶರ ಸೈ
ಹೆಡಹಿದವು ಕಿಂಪುರುಷ ಗುಹ್ಯಕ ಯಕ್ಷರಾಕ್ಷಸರ
ಹೊಡಕರಿಸಿ ಹೊದರೆದ್ದು ಬಲ ಸಂ
ಗಡಸಿ ತಲೆವರಿಗೆಯಲಿ ಕರ್ಣನ
ಬಿಡು ಸರಳ ಬೀದಿಯಲಿ ಬೆದರದೆ ನೂಕಿತಳವಿಯಲಿ (ಅರಣ್ಯ ಪರ್ವ, ೨೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಗಂಧರ್ವನ ಬಾಣಗಳನ್ನು ಕಡಿದ ಕರ್ಣನ ಬಾಣಗಳು ಗಂಧರ್ವನ ಪಡೆಯಲ್ಲಿದ್ದ ಕಿಂಪುರುಷ, ಗುಹ್ಯಕ, ರಾಕ್ಷಸರನ್ನು ಸಂಹರಿಸಿದವು. ಆದರೆ ಗಂಧರ್ವ ಸೈನ್ಯವು ಕರ್ಣನ ಬಾಣಗಳಿಗೆ ಹೆದರದೆ ತಲೆಗಳನ್ನೇ ಗುರಾಣಿಯಾಗಿ ಒಡ್ಡಿ ಯುದ್ಧ ಮಾಡಿದರು.

ಅರ್ಥ:
ಕಡಿ: ಸೀಳು; ಗಂಧರ್ವ: ಖಚರ, ದೇವತೆಗಳ ವರ್ಗ; ಶರ: ಬಾಣ; ಔಘ: ಗುಂಪು, ಸಮೂಹ; ಅಡಸು: ಬಿಗಿಯಾಗಿ ಒತ್ತು, ತುರುಕು; ನೆಟ್ಟು: ಹೂಳು, ನಿಲ್ಲಿಸು; ಕೆಡಹು: ಹಾಳುಮಾಡು; ಹೊಡಕರಿಸು: ಕಾಣಿಸು, ಬೇಗಬೆರೆಸು; ತಲೆ: ಶಿರ; ಹೊದರು: ತೊಡಕು, ತೊಂದರೆ; ಬಲ: ಶಕ್ತಿ, ಸೈನ್ಯ; ಸಂಗಡ: ಜೊತೆ; ಬಿಡು: ತೊರೆ; ಸರಳ: ಬಾಣ; ಬೀದಿ: ಮಾರ್ಗ; ಬೆದರು: ಹೆದರು, ಅಂಜಿಕೆ; ನೂಕು: ತಳ್ಳು; ತಳ: ಸಮತಟ್ಟಾದ ಪ್ರದೇಶ;

ಪದವಿಂಗಡಣೆ:
ಕಡಿದು +ಗಂಧರ್ವನ +ಶರೌಘವನ್
ಅಡಸಿ +ನೆಟ್ಟವು +ಕರ್ಣ+ಶರ+ ಸೈ
ಹೆಡಹಿದವು +ಕಿಂಪುರುಷ +ಗುಹ್ಯಕ +ಯಕ್ಷ+ರಾಕ್ಷಸರ
ಹೊಡಕರಿಸಿ+ ಹೊದರೆದ್ದು+ ಬಲ+ ಸಂ
ಗಡಸಿ+ ತಲೆವರಿಗೆಯಲಿ +ಕರ್ಣನ
ಬಿಡು+ ಸರಳ+ ಬೀದಿಯಲಿ +ಬೆದರದೆ +ನೂಕಿ+ತಳವಿಯಲಿ

ಅಚ್ಚರಿ:
(೧) ಗಂಧರ್ವರ ಸೈನ್ಯದಲ್ಲಿದ್ದ ಪಂಗಡಗಳು – ಕಿಂಪುರುಷ, ಗುಹ್ಯಕ, ಯಕ್ಷ, ರಾಕ್ಷಸ

ಪದ್ಯ ೨೬: ಧರ್ಮಜನು ಮಾತಲಿಯನ್ನು ಏನು ಕೇಳಿದನು?

ಕುಶಲವೇ ದೇವೆಂದ್ರನಾತನ
ಶಶಿವದನೆಯರು ಸುಖಿಗಳೇ ರಾ
ಕ್ಷಸರು ವಶವರ್ತಿಗಳೆ ನಿರ್ಜರನಗರಿ ನಿರ್ಭಯವೆ
ದೆಸೆಯವರು ಮೂಲೆಗಳವರು ಮ
ನ್ನಿಸುವರೇ ಸುರಲೋಕ ಸುಖವನು
ವ್ಯಸನಭರ ಭಂಗಿಸದಲೇ ಹೇಳೆಂದನಾ ಭೂಪ (ಅರಣ್ಯ ಪರ್ವ, ೧೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಇಂದ್ರನು ಚೆನ್ನಾಗಿದ್ದಾನೆಯೇ? ಆತನ ಪತ್ನಿಯರು ಸುಖವಾಗಿದ್ದಾರೆಯೇ? ರಾಕ್ಷಸರು ದೇವತೆಗಳ ಅಧೀನದಲ್ಲಿದ್ದಾರೆಯೇ? ಅಮರಾವತಿಗೆ ಯಾವ ಭಯವೂ ಇಲ್ಲ ತಾನೇ? ದಿಕ್ಪಾಲಕರೆಲ್ಲರೂ ಅವನ ಅಧೀನದಲ್ಲಿರುವರೇ? ದೇವಲೋಕದ ಸೌಖ್ಯವನ್ನು ಅತಿಶಯವಾದ ಇಂದ್ರಿಯ ಸುಖಮಗ್ನತೆಯು ಕೆಡಿಸುತ್ತಿಲ್ಲ ತಾನೇ? ಎಂದು ಧರ್ಮಜನು ಮಾತಲಿಯನ್ನು ಕೇಳಿದನು.

ಅರ್ಥ:
ಕುಶಲ: ಕ್ಷೇಮ; ದೇವೇಂದ್ರ: ಇಂದ್ರ; ಶಶಿವದನೆ: ಚಂದ್ರನಂತ ಮುಖವುಳ್ಳವರು; ಸುಖ: ನೆಮ್ಮದಿ; ರಾಕ್ಷಸ: ದಾನವ; ವಶ: ಅಧೀನ; ನಿರ್ಜರ: ದೇವತೆ; ನಗರ: ಪುರ; ನಿರ್ಭಯ: ನಿರ್ಭೀತಿ; ದೆಸೆ: ದಿಕ್ಕು; ಮೂಲೆ: ಅಂಚು, ಕೊನೆ; ಮನ್ನಿಸು: ಗೌರವಿಸು; ಸುರಲೋಕ: ಸ್ವರ್ಗ; ವ್ಯಸನ: ಗೀಳು, ಚಟ; ಭರ: ಹೆಚ್ಚಳ; ಭಂಗಿಸು: ಕೆಡಿಸು; ಭೂಪ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ಕುಶಲವೇ +ದೇವೆಂದ್ರನ್+ಆತನ
ಶಶಿವದನೆಯರು+ ಸುಖಿಗಳೇ +ರಾ
ಕ್ಷಸರು +ವಶವರ್ತಿಗಳೆ+ ನಿರ್ಜರ+ನಗರಿ +ನಿರ್ಭಯವೆ
ದೆಸೆಯವರು +ಮೂಲೆಗಳವರು +ಮ
ನ್ನಿಸುವರೇ +ಸುರಲೋಕ+ ಸುಖವನು
ವ್ಯಸನಭರ+ ಭಂಗಿಸದಲೇ +ಹೇಳೆಂದನಾ +ಭೂಪ

ಅಚ್ಚರಿ:
(೧) ಹೆಂಡತಿಯರು ಎಂದು ಹೇಳುವ ಪರಿ – ಶಶಿವದನೆಯರು
(೨) ನಿ ಕಾರದ ಜೋಡಿ ಪದ – ನಿರ್ಜರನಗರಿ ನಿರ್ಭಯವೆ
(೩) ನಿರ್ಜರನಗರಿ, ಸುರಲೋಕ – ಸಮನಾರ್ಥಕ ಪದ

ಪದ್ಯ ೨೪: ದ್ರೌಪದಿಯ ಸ್ವಯಂವರವನ್ನು ಆಗಸದಿಂದ ಯಾರು ನೋಡುತ್ತಿದ್ದರು?

ಅರಸ ಕೇಳೈ ಮೇಲೆ ವಿದ್ಯಾ
ಧರ ಮಹೋರಗ ಯಕ್ಷರಾಕ್ಷಸ
ಗರುಡ ಕಿನ್ನರ ಸಿದ್ಧ ವಸುಗಂಧರ್ವ ಭೂತಗಣ
ವರಮರುದ್ಗಣ ರುದ್ರ ಮನು ಭಾ
ಸ್ಕರ ಸುಧಾಕರ ತಾರಕಾಗ್ರಹ
ಸುರಮುನಿಪ ದಿಕ್ಪಾಲತತಿ ನೆರೆದುದು ವಿಮಾನದಲಿ (ಆದಿ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಆ ದ್ರೌಪದಿಯ ಸ್ವಯಂವರ ಭೂಮಿಜನಗಳನ್ನು ಆಕರ್ಷಿಸಿದಂತೆ ಆಗಸದಲ್ಲಿ ದೇವತೆಗಳನ್ನು ಆಕರ್ಷಿಸಿತ್ತು. ಆಕಾಶದಲ್ಲಿ, ವಿದ್ಯಾಧರರು, ಹಾವುಗಳು, ಯಕ್ಷರು, ರಾಕ್ಷಸರು, ಗರುಡರು, ಕಿನ್ನರರು, ಸಿದ್ಧರು, ವಸುಗಳು, ಗಂಧರ್ವರು, ಭೂತಗಳು, ಮರುದ್ಗಣ, ರುದ್ರರು, ಮನುಗಳು, ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು, ದೇವರ್ಷಿಗಳು, ದಿಕ್ಪಾಲಕರು, ಎಲ್ಲರೂ ತಮ್ಮ ವಿಮಾನಗಳಲ್ಲಿ ಕುಳಿತು ನೋಡುತ್ತಿದ್ದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮೇಲೆ:ತುದಿ, ಅಗ್ರಭಾಗ; ವಿದ್ಯಾಧರ: ದೇವತೆಗಳ ಒಂದು ವರ್ಗ; ಮಹ: ದೊಡ್ಡ; ಉರಗ: ಹಾವು; ಯಕ್ಷ: ದೇವತೆಗಳ ಒಂದು ವರ್ಗ; ರಾಕ್ಷಸ: ರಕ್ಕಸ, ದನುಜ, ದೈತ್ಯ; ಗರುಡ: ವಿಷ್ಣುವಿನ ವಾಹನ; ಕಿನ್ನರ: ಕುದುರೆಯ ತಲೆ ಮನುಷ್ಯನ ಮುಖ ವಿರುವ ದೇವತೆ; ಸಿದ್ಧ: ಸಾಧಿಸಿದವನು, ದೇವತೆಗಳ ಒಂದು ವರ್ಗ; ವಸು: ದೇವತೆಗಳ ಒಂದು ವರ್ಗ;ಭೂತ: ಪಿಶಾಚಿ; ಗಣ: ಗುಂಪು; ಗಂಧರ್ವ: ದೇವಲೋಕದ ಸಂಗೀತಗಾರ; ಮರುದ್ಗಣ: ದೇವತೆಗಳ, ವಾಯುಗಳ ಸಮೂಹ; ರುದ್ರ: ಭಯಂಕರವಾದ, ಹನ್ನೊಂದು ಗಣದೇವತೆಗಳು; ಮನು: ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ; ಭಾಸ್ಕರ: ಸೂರ್ಯ; ಸುಧಾಕರ: ಚಂದ್ರ; ತಾರಕ: ತಾರೆ, ನಕ್ಷತ್ರ; ಗ್ರಹ: ಹಿಡಿಯುವುದು, ಹಿಡಿತ, ನವಗ್ರಹಗಳನ್ನು ಸೂಚಿಸುವ ಪದ; ಸುರ: ದೇವತೆಗಳು; ಸುರಮುನಿ: ದೇವರ್ಷಿಗಳು; ದಿಕ್ಕು: ದಿಶೆ, ಎಂಟು ಎಂಬ ಸಂದೇಶ; ಪಾಲಕ: ಅಧಿಪತಿ; ನೆರೆದು: ಸೇರು; ವಿಮಾನ: ಹಾರಾಡುವ ಯಂತ್ರ;

ಪದವಿಂಗಡಣೆ:
ಅರಸ +ಕೇಳೈ +ಮೇಲೆ +ವಿದ್ಯಾ
ಧರ +ಮಹೋರಗ+ ಯಕ್ಷ+ರಾಕ್ಷಸ
ಗರುಡ+ ಕಿನ್ನರ +ಸಿದ್ಧ +ವಸು+ಗಂಧರ್ವ +ಭೂತಗಣ
ವರಮರುದ್ಗಣ +ರುದ್ರ+ ಮನು +ಭಾ
ಸ್ಕರ+ ಸುಧಾಕರ+ ತಾರಕಾ+ಗ್ರಹ
ಸುರ+ಮುನಿಪ+ ದಿಕ್ಪಾಲತತಿ +ನೆರೆದುದು +ವಿಮಾನದಲಿ

ಅಚ್ಚರಿ:
(೧) ಎಲ್ಲಾ ರೀತಿಯ ದೇವತೆಗಳ ಹೆಸರನ್ನು ಉಲ್ಲೇಖಿಸಿರುವುದು
(೨) ವಿಮಾನದ ಕಲ್ಪನೆ, ಈ ಹಿಂದೆ ಪದ್ಯ ೧೭ ರಲ್ಲಿ ರೊಬೋಟ್ ಕಲ್ಪನೆ ಇತ್ತು (ಯಂತ್ರಮಯ ಪುತ್ಥಳಿ)