ಪದ್ಯ ೭೪: ಧೃತರಾಷ್ಟ್ರ ವಿದುರನಿಗೆ ಏನು ಹೇಳಿದ?

ವಿದುರ ಕೇಳೈ ಪಾಂಡವರ ಸಂ
ಪದಕೆ ಸರಿಯೋ ಮಿಗಿಲೊ ಸಭೆ ತಾ
ನಿದು ವಿಶೇಷವಲಾ ಸಮಸ್ತ ಕ್ಷತ್ರ ವಿಭವದಲಿ
ಇದರೊಳೋಲಗವಿತ್ತು ಹರ್ಷಾ
ಸ್ಪದರು ಕುರು ನೃಪರಲ್ಲಿ ಸುಖ ದ್ಯೂ
ತದಲಿ ರಮಿಸಲಿ ಕರೆದು ತಾ ಕುಂತೀಕುಮಾರಕರ (ಸಭಾ ಪರ್ವ, ೧೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ವಿದುರನನ್ನು ಕರೆದು, ಕೇಳು ವಿದುರಾ, ಈ ಸಭಾಭವನವು ಪಾಂಡವರ ಆಸ್ಥಾನ ಭವನಕ್ಕೆ ಸರಿಯೋ, ಹೆಚ್ಚೋ ಹೇಳು, ಈ ಆಸ್ಥಾನಭವನದಲ್ಲಿ ಓಲಗವನ್ನಿತ್ತು, ಕೌರವರು ಪಾಂಡವರೊಡನೆ ಸುಖದ್ಯೂತವನಾಡಲಿ, ಅವರನ್ನು ಕರೆದುಕೊಂಡು ಬಾ ಎಂದು ಹೇಳಿದನು.

ಅರ್ಥ:
ಕೇಳು: ಆಲಿಸು; ಸಂಪದ: ಐಶ್ವರ್ಯ, ಸಂಪತ್ತು; ಸರಿ: ಸಮಾನ; ಮಿಗಿಲು: ಹೆಚ್ಚು; ಸಭೆ: ಓಲಗ; ವಿಶೇಷ: ಅಸಾಮಾನ್ಯವಾದ, ವಿಶಿಷ್ಟವಾದ; ಸಮಸ್ತ: ಎಲ್ಲಾ; ಕ್ಷತ್ರ; ಕ್ಷತ್ರಿಯ; ವಿಭವ: ಸಿರಿ, ಸಂಪತ್ತು; ಓಲಗ: ದರ್ಬಾರು; ಹರ್ಷ: ಸಂತೋಷ; ನೃಪ: ರಾಜ; ಸುಖ: ಸಂತಸ; ದ್ಯೂತ: ಪಗಡೆ, ಜೂಜು; ರಮಿಸು: ಆನಂದಿಸು; ಕರೆ: ಬರೆಮಾಡು; ಕುಮಾರ: ಮಕ್ಕಳು;

ಪದವಿಂಗಡಣೆ:
ವಿದುರ+ ಕೇಳೈ +ಪಾಂಡವರ +ಸಂ
ಪದಕೆ +ಸರಿಯೋ +ಮಿಗಿಲೊ +ಸಭೆ+ ತಾ
ನಿದು +ವಿಶೇಷವಲಾ+ ಸಮಸ್ತ +ಕ್ಷತ್ರ +ವಿಭವದಲಿ
ಇದರೊಳ್+ಓಲಗವಿತ್ತು +ಹರ್ಷಾ
ಸ್ಪದರು +ಕುರು +ನೃಪರಲ್ಲಿ +ಸುಖ +ದ್ಯೂ
ತದಲಿ +ರಮಿಸಲಿ +ಕರೆದು +ತಾ +ಕುಂತೀಕುಮಾರಕರ

ಅಚ್ಚರಿ:
(೧) ಸಂಪದ, ವಿಭವ – ಸಾಮ್ಯಾರ್ಥ ಪದ