ಆಯಿತಿದು ದಮವಾವುದೈ ಸ್ವಾ
ಧ್ಯಾಯವೆಂಬುದದೇನು ಸತ್ಯದ
ಕಾಯವಾವುದಹಿಂಸೆ ಪರಿತೋಷಂಗಳಿಂದೇನು
ರಾಯ ಹೇಳಿದರರಿವ ನಿಜಗುಣ
ದಾಯತವನೆನೆ ಧರ್ಮವತಿ ರಮ
ಣೀಯವೆನೆ ನಹುಷಂಗೆ ವಿವರಿಸಿದನು ಮಹೀಪಾಲ (ಅರಣ್ಯ ಪರ್ವ, ೧೪ ಸಂಧಿ, ೫೦ ಪದ್ಯ)
ತಾತ್ಪರ್ಯ:
ಸರಿ, ಬ್ರಾಹ್ಮಣ್ಯದ ಬಗ್ಗೆ ನಿನ್ನ ವಿಚಾರ ತಿಳಿಯಿತು, ದಮ, ಸ್ವಾಧ್ಯಾಯ, ಸತ್ಯದ ತಿರುಳು, ಅಹಿಂಸೆ, ಸಂತೋಷ ಇವುಗಳೇನು? ಇವುಗಳ ಗುಣ ವಿಸ್ತಾರವನ್ನು ತಿಳಿಸು ಎಂದು ನಹುಷನು ಕೇಳಲು, ಧರ್ಮಜನು ಅತಿರಮಣೀಯವಾದ ಧರ್ಮ ವಿಚಾರವನ್ನು ಹೇಳಿದನು.
ಅರ್ಥ:
ಆಯಿತು: ತಿಳಿಯಿತು, ಸರಿ; ದಮ: ಇಂದ್ರಿಯ ನಿಗ್ರಹ, ಸಂಯಮ; ಸ್ವಾಧ್ಯಾಯ: ತಾನೇ ಸ್ವಂತವಾಗಿ ಓದಿ ತಿಳಿಯುವ ಜ್ಞಾನ; ಸತ್ಯ: ನಿಜ; ಕಾಯ: ದೇಹ; ಅಹಿಂಸೆ: ತೊಂದರೆ ಕೊಡದ; ಪರಿತೋಷ: ಸಂತುಷ್ಟಿ, ಅಧಿಕವಾದ ಆನಂದ; ರಾಯ: ಒಡೆಯ; ಹೇಳು: ತಿಳಿಸು; ಗುಣ: ನಡತೆ; ಆಯತ:ನೆಲೆ; ಧರ್ಮ: ಧಾರಣೆ ಮಾಡಿದುದು; ರಮಣೀಯ: ಸುಂದರವಾದ, ಚೆಲುವಾದ; ವಿವರಿಸು: ತಿಳಿಸು; ಮಹೀಪಾಲ: ರಾಜ; ಮಹೀ: ಭೂಮಿ;
ಪದವಿಂಗಡಣೆ:
ಆಯಿತಿದು +ದಮವ್ +ಆವುದೈ+ ಸ್ವಾ
ಧ್ಯಾಯ+ವೆಂಬುದದೇನು+ ಸತ್ಯದ
ಕಾಯವಾವುದ್+ಅಹಿಂಸೆ +ಪರಿತೋಷಂಗಳಿಂದೇನು
ರಾಯ +ಹೇಳಿದರ್+ಅರಿವ +ನಿಜಗುಣದ್
ಆಯತವನ್+ಎನೆ +ಧರ್ಮವತಿ +ರಮ
ಣೀಯವೆನೆ+ ನಹುಷಂಗೆ +ವಿವರಿಸಿದನು +ಮಹೀಪಾಲ
ಅಚ್ಚರಿ:
(೧)ಧರ್ಮವತಿ ರಮಣೀಯವೆನೆ – ಪದದ ಬಳಕೆ