ನೃಪನ ಕಾಣಿಸಿಕೊಂಬುದನಿಬರ
ನುಪಚರಿಸುವುದು ನಿನ್ನ ಮಕ್ಕಳ
ಕೃಪಣತೆಯನಾರೈವರಲ್ಲವರೈವರುತ್ತಮರು
ಉಪಹತಿಯ ನೆನೆಯದಿರು ದುರ್ಜನ
ರಪಕೃತಿಗೆ ಫಲವಾಯ್ತೆ ಧರ್ಮವೆ
ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ (ಗದಾ ಪರ್ವ, ೧೧ ಸಂಧಿ, ೩೪ ಪದ್ಯ)
ತಾತ್ಪರ್ಯ:
ಎಲೈ ಧೃತರಾಷ್ಟ್ರ, ಪಾಂಡವರನ್ನು ಉಚಿತವಾಗಿ ಸತ್ಕರಿಸು, ನಿನ್ನ ಮಕ್ಕಳ ದುರಾಶೆ, ದುರ್ವರ್ತೆನೆಗಳನ್ನು ಅವರು ನೆನಪಿಡುವವರಲ್ಲ. ಅವರು ಐವರೂ ಉತ್ತಮರು. ಅವರಿಗೆ ಕೇಡನ್ನು ಬಯಸಬೇಡ. ದುಷ್ಟರು ಮಾಡಿದ ದುಷ್ಕೃತಕ್ಕೆ ತಕ್ಕ ಫಲವಾಯಿತು. ಇಹಕ್ಕೂ ಪರಲೋಕಕ್ಕೂ ಧರ್ಮದ ಮಾರ್ಗದಿ ನಡೆವುದೇ ಸಾಧನ ಎಂದು ವ್ಯಾಸರು ನುಡಿದರು.
ಅರ್ಥ:
ನೃಪ: ರಾಜ; ಕಾಣಿಸು: ತೋರು; ಅನಿಬರ: ಅಷ್ಟುಜನ; ಉಪಚರಿಸು: ಸಲಹು, ಸತ್ಕರಿಸು; ಮಕ್ಕಳು: ಪುತ್ರರು; ಕೃಪಣ: ದೈನ್ಯದಿಂದ ಕೂಡಿದುದು, ದುಷ್ಟ; ಅರಿ: ತಿಳಿ; ಉತ್ತಮ: ಶ್ರೇಷ್ಠ; ಉಪಹತಿ: ಹೊಡೆತ, ತೊಂದರೆ; ನೆನೆ: ಜ್ಞಾಪಿಸು; ದುರ್ಜನ: ದುಷ್ಟ; ಅಪಕೃತಿ: ಅಪಕಾರ; ಫಲ: ಪ್ರಯೋಜನ; ಧರ್ಮ: ಧಾರಣೆ ಮಾಡಿದುದು; ರಪಣ: ಆಸ್ತಿ, ಐಶ್ವರ್ಯ; ಇಹಪರ: ಈ ಲೋಕ ಮತ್ತು ಪರಲೋಕ; ಕೇಳು: ಆಲಿಸು;
ಪದವಿಂಗಡಣೆ:
ನೃಪನ+ ಕಾಣಿಸಿಕೊಂಬುದ್+ಅನಿಬರನ್
ಉಪಚರಿಸುವುದು +ನಿನ್ನ+ ಮಕ್ಕಳ
ಕೃಪಣತೆಯನ್+ಆರೈವರಲ್+ಅವರ್+ಐವರ್+ಉತ್ತಮರು
ಉಪಹತಿಯ +ನೆನೆಯದಿರು+ ದುರ್ಜನರ್
ಅಪಕೃತಿಗೆ+ ಫಲವಾಯ್ತೆ+ ಧರ್ಮವೆ
ರಪಣವ್+ಇಹ+ಪರಲೋಕಕ್+ಎಲೆ +ಧೃತರಾಷ್ಟ್ರ +ಕೇಳೆಂದ
ಅಚ್ಚರಿ:
(೧) ನೀತಿ ನುಡಿ – ಧರ್ಮವೆ ರಪಣವಿಹಪರಲೋಕಕೆಲೆ ಧೃತರಾಷ್ಟ್ರ ಕೇಳೆಂದ
(೨) ಒಂದೇ ಪದವಾಗಿ ರಚನೆ – ಕೃಪಣತೆಯನಾರೈವರಲ್ಲವರೈವರುತ್ತಮರು