ದೇವ ನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾವಿಳಾಸದೊಳೊಪ್ಪವಿಟ್ಟರು ತಮ್ಮ ನಗರಿಗಳ
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿಕೇರಿಗಳು (ವಿರಾಟ ಪರ್ವ, ೧೧ ಸಂಧಿ, ೪೭ ಪದ್ಯ)
ತಾತ್ಪರ್ಯ:
ಕುದುರೆ ಆನೆಯ ಲಾಯಗಳ ಸಿದ್ಧತೆಯಿಂದ ಸೈನ್ಯವು ಮುಂದುವರಿದು ಬಂದುದನ್ನು ಖಚಿತಪಡಿಸಿಕೊಂಡು ದೂತರು, ಶ್ರೀಕೃಷ್ಣನು ಇಗೋ ಬಂದನು ಎಂದು ಹೇಳಿದರು. ಉಪಪ್ಲಾವ್ಯ ನಗರಿಯನ್ನು ಉತ್ತಮವಾಗಿ ಅಲಂಕರಿಸಿದ್ದರು, ಬೀದಿಗಳಲ್ಲಿ ಪುಷ್ಪಾಲಂಕಾರ, ನವರತ್ನಗಲ ಕುಚ್ಚುಗಳು, ಅಲಂಕೃತವಾದ ಛಾವಣಿಯ ಮುಂಭಾಗಗಳು, ಉಪಪ್ಲಾವ್ಯದ ಬೀದಿ ಬೀದಿಗಳಲ್ಲೂ ಕಂಡು ಬಂದವು.
ಅರ್ಥ:
ದೇವ: ಭಗವಂತ; ಬಹನೆಂದು: ಬರುವೆಯೆಂದು; ಬಂದು: ಆಗಮಿಸು; ದಾವಣಿ: ಗುಂಪು, ಸಮೂಹ; ಹವಣ: ಸಿದ್ಧತೆ, ಪ್ರಯತ್ನ; ಅರಿ: ತಿಳಿದು; ಬಳಿಕ: ನಂತರ; ವಿಲಾಸ: ಅಂದ, ಸೊಬಗು; ನಗರ: ಪಟ್ಟಣ; ಹೂವಲಿ: ರಂಗವಲ್ಲಿಯಂತೆ ರಚಿಸಿದ ಹೂವುಗಳ ಅಲಂಕಾರ; ವೀಧಿ: ಬೀದಿ, ರಸ್ತೆ; ನವ: ಹೊಸ; ರತ್ನಾವಳಿ: ವಜ್ರ, ಮಾಣಿಕ್ಯಗಳ ಗುಂಪು; ಸೂಸಕ: ಒಂದು ಬಗೆಯ ಆಭರಣ, ಬೈತಲೆ ಬೊಟ್ಟು; ಭದ್ರ: ಮಂಗಳಕರವಾದ, ಶುಭಕರವಾದ; ಲೋವೆ: ಛಾವಣಿಯ ಚೌಕಟ್ಟು; ಲಂಬಳ: ತೂಗಾಡುವ; ಎಸೆ: ತೋರು; ಕೇರಿ: ಬೀದಿ;
ಪದವಿಂಗಡಣೆ:
ದೇವ+ ನೀ +ಬಹನೆಂದು+ ಬಂದರು
ದಾವಣಿಯ+ ಹವಣರಿದು+ ಬಳಿಕ+ ಮ
ಹಾ+ವಿಳಾಸದೊಳ್+ ಒಪ್ಪವಿಟ್ಟರು +ತಮ್ಮ +ನಗರಿಗಳ
ಹೂವಲಿಯ +ವೀಧಿಗಳ+ ನವ +ರ
ತ್ನಾವಳಿಯ +ಸೂಸಕದ +ಭದ್ರದ
ಲೋವೆಗಳ +ಲಂಬಳದಲ್+ಎಸೆದವು+ ಕೇರಿ+ಕೇರಿಗಳು
ಅಚ್ಚರಿ:
(೧) ನಗರವನ್ನು ಸಿಂಗರಿಸಿದ ಪರಿ – ಹೂವಲಿಯ ವೀಧಿಗಳ ನವ ರತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು