ಪದ್ಯ ೪: ಅರ್ಜುನ ಅಶ್ವತ್ಥಾಮರ ಯುದ್ಧವು ಹೇಗಿತ್ತು?

ಕೆಣಕಿದಡೆ ಗುರುಸುತನನಡಹಾ
ಯ್ದಣೆದನಂಬಿನಲರ್ಜುನನ ಮಾ
ರ್ಗಣಮಹಾರಣ್ಯದಲಿ ನಡೆದುದು ಕಡಿತ ಗುರುಸುತನ
ರಣವಿಶಾರದರಹಿರಲೇ ನೀ
ವಣಕವೇತಕೆ ರಾಜಗುರುಗಳು
ಸೆಣಸುವರೆ ಸೈರಿಸಿರೆ ನೀವೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನು ಅಶ್ವತ್ಥಾಮನನ್ನು ಅಡ್ಡಗಟ್ಟಿ ಬಾಣಗಳಿಂದ ತಿವಿದನು. ಅರ್ಜುನನ ಬಾಣಗಳ ಮಹಾರಣ್ಯವನ್ನು ಅಶ್ವತ್ಥಾಮನು ಕಡಿದನು. ಅರ್ಜುನನು ನೀವು ರಾಜಗುರುಗಳು, ಯುದ್ಧ ವಿಶಾರದರು, ಯುದ್ಧ ಮಾಡುವಿರಾದರೆ ಈ ಹೊಡೆತವನ್ನು ಸೈರಿಸಿರಿ ಎಂದು ಬಾಣ ಪ್ರಯೋಗ ಮಾಡಿದನು.

ಅರ್ಥ:
ಕೆಣಕು: ರೇಗಿಸು; ಸುತ: ಮಗ; ಗುರು: ಆಚಾರ್ಯ; ಅಡಹಾಯ್ದು: ಅಡ್ಡ ಬಂದು, ಮಧ್ಯ ಪ್ರವೇಶಿಸು; ಅಂಬು: ಬಾಣ; ಮಾರ್ಗನ: ಬಾಣ; ಅರಣ್ಯ: ಕಾಡು; ನಡೆ: ಚಲಿಸು; ಕಡಿ: ಸೀಳು; ರಣ: ಯುದ್ಧ; ವಿಶಾರದ: ಪ್ರವೀಣ; ಅಣಕ: ಸೋಗು; ರಾಜ: ನೃಪ; ಸೆಣಸು: ಹೋರಾಡು; ಸೈರಿಸು: ತಾಳು; ಎಚ್ಚು: ಬಾಣ ಪ್ರಯೋಗ ಮಾಡು; ಅಣೆ: ತಿವಿ, ಹೊಡೆ;

ಪದವಿಂಗಡಣೆ:
ಕೆಣಕಿದಡೆ +ಗುರುಸುತನನ್+ಅಡಹಾಯ್ದ್
ಅಣೆದನ್+ಅಂಬಿನಲ್+ಅರ್ಜುನನ +ಮಾ
ರ್ಗಣ+ಮಹಾರಣ್ಯದಲಿ+ ನಡೆದುದು +ಕಡಿತ +ಗುರುಸುತನ
ರಣವಿಶಾರದರ್+ಅಹಿರಲೇ +ನೀವ್
ಅಣಕವೇತಕೆ +ರಾಜಗುರುಗಳು
ಸೆಣಸುವರೆ +ಸೈರಿಸಿರೆ +ನೀವೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಅಂಬು, ಮಾರ್ಗಣ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ಅರ್ಜುನನ ಮಾರ್ಗಣಮಹಾರಣ್ಯದಲಿ ನಡೆದುದು
(೩) ಅಶ್ವತ್ಥಾಮನನ್ನು ಹೊಗಳುವ ಪರಿ – ರಣವಿಶಾರದ