ಮರಹ ಪಡೆಯರು ಘಾಯ ಖಂಡಿಗೆ
ತೆರಹುಗಾಣರು ಹೊಯ್ಲ ಹೋರಟೆ
ಹೊರಗೆ ಬಿದ್ದವು ಕದ್ದವಿಬ್ಬರ ದೃಷ್ಟಿ ಮನಮನವ
ಇರಿವ ಗದೆ ನೆಗ್ಗಿದವು ರೋಷದಿ
ಜರೆವ ನುಡಿ ತಾಗಿದವು ಹೊಗಳುವ
ಡರಿಯೆನಗ್ಗದ ಭೀಮ ದುರಿಯೋಧನರ ರಣರಸವ (ಗದಾ ಪರ್ವ, ೬ ಸಂಧಿ, ೨೭ ಪದ್ಯ)
ತಾತ್ಪರ್ಯ:
ಒಂದು ಕ್ಷಣವೂ ಎಚ್ಚರವನ್ನು ಕಳೆದುಕೊಳ್ಳಲಿಲ್ಲ. ಹೊಡೆದು ಗಾಯಗೊಳಿಸಲು ಒಂದು ಕ್ಷಣವೂ ತಪ್ಪಲಿಲ್ಲ. ಗದೆಗದೆಗಳು ತಾಕಿ ಹಿಂದಕ್ಕೆ ಸರಿದವು. ಅವರಿಬ್ಬರ ನೋಟಗಳು ಪರಸ್ಪರರ ಮನಸ್ಸನ್ನು ಕದ್ದು ಕಂಡು ಹಿಡಿದು ಬಿಡುತ್ತಿದ್ದವು. ಗದೆಗಳು ನೆಗ್ಗಿದವು. ಮೂದಲಿಕೆಗಳು ಗಾಯಗೊಳಿಸಿದವು. ಅವರ ಕದನವನ್ನು ಸಾರವನ್ನು ವರ್ಣಿಸಲಾರೆ.
ಅರ್ಥ:
ಮರಹ: ಮರೆತುಹೋಗು, ಜ್ಞಾಪಕವಿಲ್ಲದ ಸ್ಥಿತಿ; ಪಡೆ: ದೊರಕಿಸು; ಘಾಯ: ಪೆಟ್ಟು; ಖಂಡಿಗಳೆ: ಭೇದಿಸು; ತೆರಹು: ಬಿಚ್ಚು, ತೆರೆ; ಕಾಣು: ತೋರು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ; ಹೊರಗೆ: ಆಚೆ; ಬಿದ್ದು: ಬೀಳು, ಜಾರು; ಕದ್ದು: ಕಳ್ಳತನ; ದೃಷ್ಟಿ: ನೋಟ; ಮನ: ಮನಸ್ಸು; ಇರಿ: ಚುಚ್ಚು; ಗದೆ: ಮುದ್ಗರ; ನೆಗ್ಗು:ಕುಗ್ಗು, ಕುಸಿ; ರೋಷ: ಕೋಪ; ಜರೆ: ಬಯ್ಯು; ನುಡಿ: ಮಾತು; ತಾಗು: ಮುಟ್ಟು; ಹೊಗಳು: ಪ್ರಶಂಶಿಸು; ಅಗ್ಗ: ಶ್ರೇಷ್ಠ; ರಣ: ಯುದ್ಧ; ರಸ: ಸಾರ;
ಪದವಿಂಗಡಣೆ:
ಮರಹ +ಪಡೆಯರು +ಘಾಯ +ಖಂಡಿಗೆ
ತೆರಹುಗಾಣರು +ಹೊಯ್ಲ+ ಹೋರಟೆ
ಹೊರಗೆ +ಬಿದ್ದವು+ ಕದ್ದವಿಬ್ಬರ+ ದೃಷ್ಟಿ+ ಮನಮನವ
ಇರಿವ +ಗದೆ +ನೆಗ್ಗಿದವು+ ರೋಷದಿ
ಜರೆವ+ ನುಡಿ +ತಾಗಿದವು +ಹೊಗಳುವ
ಡರಿಯೆನ್+ಅಗ್ಗದ+ ಭೀಮ +ದುರಿಯೋಧನರ +ರಣ+ರಸವ
ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಯ್ಲ ಹೋರಟೆ ಹೊರಗೆ