ಪದ್ಯ ೧೦: ಅಂತಃಪುರದಲ್ಲಿ ಯಾವ ಭೀತಿ ಹಬ್ಬಿತು?

ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ (ಗದಾ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾಳೆಯದ ಅರಮನೆಗೆ ಸಂಜಯನು ಬಂದು, ಮಂತ್ರಿಗಳನ್ನು ಅಕ್ರೆಸಿ, ಕೌರವನ ಸರ್ವವೂ ಇಲ್ಲದಂತಾಗಿದೆ. ಅರಸನು ಓಡಿಹೋಗಿದ್ದಾನೆ ಎಂಬ ಗುಟ್ಟನ್ನು ಅವರಿಗೆ ತಿಳಿಸಿದನು. ಭಾನುಮತಿಗೆ ಇದು ತಿಳಿಯಿತು, ಅವಳು ಉಳಿದ ರಾಣಿಯರಿಗೆ ತಿಳಿಸಿದಳು. ಅಂತಃಪುರದಲ್ಲಿ ಯುದ್ಧದಲ್ಲಿ ಸೋಲಾದ ಭೀತಿ ಹಬ್ಬಿತು.

ಅರ್ಥ:
ಅರಮನೆ: ರಾಜರ ಆಲಯ; ಬಂದು: ಆಗಮಿಸು; ಅಖಿಳ: ಎಲ್ಲಾ; ಸಚಿವ: ಮಂತ್ರಿ; ಕರಸು: ಬರೆಮಾಡು; ರಹಸ್ಯ: ಗುಟ್ಟು; ವಿಸ್ತರಿಸು: ವಿಸ್ತಾರವಾಗಿ ತಿಳಿಸು; ಸರ್ವ: ಎಲ್ಲವೂ; ಅಪಹಾರ: ಕಿತ್ತುಕೊಳ್ಳುವುದು; ನೃಪ: ರಾಜ; ಪಲಾಯನ: ಓಡಿಹೋಗು; ಅರಸಿ: ರಾಣಿ; ಅರಿ: ತಿಳಿ; ಮಿಕ್ಕ: ಉಳಿದ; ಅರುಹು: ತಿಳಿಸು; ಅಂತಃಪುರ: ರಾಣಿಯರ ವಾಸಸ್ಥಾನ; ಹರೆದು: ವ್ಯಾಪಿಸು; ರಣ: ಯುದ್ಧ; ಭೀತಿ: ಭಯ;

ಪದವಿಂಗಡಣೆ:
ಅರಮನೆಗೆ +ಬಂದ್+ಅಖಿಳ +ಸಚಿವರ
ಕರಸಿದನು +ಸರಹಸ್ಯವನು +ವಿ
ಸ್ತರಿಸಿದನು +ಸರ್ವ+ಅಪಹಾರವ +ನೃಪ+ಪಲಾಯನವ
ಅರಸಿ+ಅರಿದಳು +ಭಾನುಮತಿ +ಮಿ
ಕ್ಕರಸಿಯರಿಗ್+ಅರುಹಿಸಿದಳ್+ಅಂತಃ
ಪುರದೊಳ್+ಅಲ್ಲಿಂದಲ್ಲಿ +ಹರೆದುದು +ಕೂಡೆ +ರಣಭೀತಿ

ಅಚ್ಚರಿ:
(೧) ಅರಸಿ, ಮಿಕ್ಕರಸಿ, ಕರಸಿ, ವಿಸ್ತರಿಸಿ – ಪ್ರಾಸ ಪದ

ಪದ್ಯ ೩೮: ಶಕುನಿ ದ್ಯೂತವು ಕ್ಷತ್ರಿಯರಿಗೇಕೆ ಒಳಿತೆಂದು ಹೇಳಿದನು?

ದ್ಯೂತವಿದು ದುರ್ವ್ಯಸನವೆಂಬವ
ನೀತಿವಿದನೇ ಶ್ರೋತ್ರಿಯರಿಗ
ಖ್ಯಾತಿಯದು ಯತಿಗಳಿಗೆ ಮೇಣ್ರಣಭೀತಿ ಭೂಪರಿಗೆ
ದ್ಯೂತ ಮೃಗಯಾ ಸ್ತ್ರೀವ್ಯಸನನೃಪ
ಜಾತಿಗೋಸುಗರಾದ ವಿದರರ
ಸಾತಿಶಯವರಿಯದವ ನರಮೃಗವೆಂದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ದ್ಯೂತವು ದುರ್ವ್ಯಸನವೆಂದು ಹೇಳುವವನು ನೀತಿಯನ್ನು ತಿಳಿದವನೇ? ಬ್ರಾಹ್ಮಣರಿಗೆ, ಯತಿಗಳಿಗೆ, ಯುದ್ಧಕ್ಕೆ ಹೆದರುವ ರಾಜರಿಗೆ ಜೂಜಾಡುವುದರಿಂದ ಅಪಕೀರ್ತಿ ಬರುತ್ತದೆ. ದ್ಯೂತ, ಬೇಟೆ, ಸ್ತ್ರೀವ್ಯಸನಗಳು ಕ್ಷತ್ರಿಯಜಾತಿಗೆ ಹೇಳಿಮಾಡಿಸಿದ ಪ್ರವೃತ್ತಿಗಳು. ಇವುಗಳ ರಸವನ್ನು ಅರಿಯದವನು ನರನಾದರೂ ಮೃಗವೇ ಸರಿ ಎಂದು ಶಕುನಿ ಹೇಳಿದನು.

ಅರ್ಥ:
ದ್ಯೂತ: ಜೂಜು; ದುರ್ವ್ಯಸನ: ಕೆಟ್ಟ ಚಟ; ನೀತಿ: ಒಳ್ಳೆಯ ನಡತೆ, ಶಿಷ್ಟಾಚಾರ; ಶ್ರೋತ್ರಿ: ಬ್ರಾಹ್ಮಣ; ಅಖ್ಯಾತಿ: ಅಪ್ರಸಿದ್ಧಿ; ಯತಿ: ಋಷಿ; ಮೇಣ್: ಅಥವ; ಭೀತ: ಭಯ; ಭೂಪ: ರಾಜ; ಮೃಗ: ಬೇಟೆ; ಸ್ತ್ರೀವ್ಯಸನ: ಹೆಣ್ಣಿನ ಸಹವಾಸ; ನೃಪಜಾತಿ: ಕ್ಷತ್ರಿಯಜಾತಿ; ಅತಿಶಯ: ಹೆಚ್ಚು; ಅರಿ: ತಿಳಿ; ನರ: ಮನುಷ್ಯ; ಮೃಗ: ಪ್ರಾಣಿ;

ಪದವಿಂಗಡಣೆ:
ದ್ಯೂತವಿದು+ ದುರ್ವ್ಯಸನವ್+ಎಂಬವ
ನೀತಿವಿದನೇ+ ಶ್ರೋತ್ರಿಯರಿಗ್
ಅಖ್ಯಾತಿಯದು+ ಯತಿಗಳಿಗೆ+ ಮೇಣ್+ರಣಭೀತಿ +ಭೂಪರಿಗೆ
ದ್ಯೂತ+ ಮೃಗಯಾ +ಸ್ತ್ರೀ+ವ್ಯಸನ+ನೃಪ
ಜಾತಿಗೋಸುಗರಾದವ್ + ಇದರರ
ಸ+ಅತಿಶಯವ್+ಅರಿಯದವ +ನರ+ಮೃಗವ್+ಎಂದನಾ +ಶಕುನಿ

ಅಚ್ಚರಿ:
(೧) ಶಕುನಿಯ ಮಾತು – ದ್ಯೂತ ಮೃಗಯಾ ಸ್ತ್ರೀವ್ಯಸನನೃಪ ಜಾತಿಗೋಸುಗರಾದ ವಿದರರ
ಸಾತಿಶಯವರಿಯದವ ನರಮೃಗವೆಂದನಾ ಶಕುನಿ