ರಥಕೆ ಬಂದು ಪಸಾಯವನು ಸಾ
ರಥಿಗೆ ಕೊಟ್ಟನು ಚಾಪಶರವನು
ರಥದೊಳಗೆ ತುಂಬಿದನು ನಂಬಿಸಿದನು ಸುಯೋಧನನ
ಪೃಥೆಯ ಮಕ್ಕಳ ರಣಪರಾಕ್ರಮ
ವ್ಯಥೆ ಕಣಾ ಕರ್ಣಾದಿ ಸುಭಟ
ವ್ಯಥೆಯ ನಿಲಿಸುವೆನೆನುತ ಮೂದಲಿಸಿದನು ಧರ್ಮಜನ (ಶಲ್ಯ ಪರ್ವ, ೩ ಸಂಧಿ, ೬೧ ಪದ್ಯ)
ತಾತ್ಪರ್ಯ:
ಶಲ್ಯನು ರಥವನ್ನೇರಿ ಸಾರಥಿಗೆ ಉಡುಗೊರೆಯನ್ನು ಕೊಟ್ಟು ಬಿಲ್ಲು ಬಾಣಗಳನ್ನು ರಥದಲ್ಲಿ ತುಂಬಿಸಿ, ಸುಯೋಧನನಿಗೆ ನಂಬುಗೆ ಕೊಟ್ಟು, ಕುಂತಿಯ ಮಕ್ಕಳದು ವೃಥಾ ಪರಾಕ್ರಮ, ಕರ್ಣಾದಿ ವೀರರ ಮರಣದ ವ್ಯಥೆಯನ್ನು ನಿಲ್ಲಿಸುತ್ತೇನೆ ಎಂದು ಧರ್ಮಜನನ್ನು ಮೂದಲಿಸಿದನು.
ಅರ್ಥ:
ರಥ: ಬಂಡಿ; ಪಸಾಯ: ಉಡುಗೊರೆ, ಬಹುಮಾನ; ಸಾರಥಿ: ಸೂತ; ಕೊಡು: ನೀಡು; ಚಾಪ: ಬಿಲ್ಲು; ಶರ: ಬಾಣ; ರಥ: ಬಂಡಿ; ತುಂಬು: ಭರ್ತಿಮಾಡು; ನಂಬು: ವಿಶ್ವಾಸವಿಡು; ಪೃಥೆ: ಕುಂತಿ; ಮಕ್ಕಳು: ಪುತ್ರರು; ರಣ: ಯುದ್ಧ; ಪರಾಕ್ರಮ: ಶೂರ; ವ್ಯಥೆ: ದುಃಖ; ಆದಿ: ಮುಂತಾದ; ಸುಭಟ: ಪರಾಕ್ರಮಿ; ನಿಲಿಸು: ತಡೆ; ಮೂದಲಿಸು: ಹಂಗಿಸು;
ಪದವಿಂಗಡಣೆ:
ರಥಕೆ +ಬಂದು +ಪಸಾಯವನು +ಸಾ
ರಥಿಗೆ +ಕೊಟ್ಟನು +ಚಾಪ+ಶರವನು
ರಥದೊಳಗೆ +ತುಂಬಿದನು +ನಂಬಿಸಿದನು +ಸುಯೋಧನನ
ಪೃಥೆಯ +ಮಕ್ಕಳ +ರಣ+ಪರಾಕ್ರಮ
ವ್ಯಥೆ +ಕಣಾ +ಕರ್ಣಾದಿ +ಸುಭಟ
ವ್ಯಥೆಯ +ನಿಲಿಸುವೆನೆನುತ +ಮೂದಲಿಸಿದನು +ಧರ್ಮಜನ
ಅಚ್ಚರಿ:
(೧) ಪಾಂಡವರನ್ನು ಮೂದಲಿಸುವ ಪರಿ – ಪೃಥೆಯ ಮಕ್ಕಳ ರಣಪರಾಕ್ರಮ ವ್ಯಥೆ ಕಣಾ