ಪದ್ಯ ೩೧ : ಅರ್ಜುನನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು -೩?

ರಣದ ಘಾರಾಘಾರಿಯಾರೋ
ಗಣೆಯ ಮನೆಯಲ್ಲರಸ ಶಿರದಲಿ
ಕುಣಿದಡಾಯ್ದಕೆ ಸುಳಿವ ಸುರಗಿಗೆ ತಿವಿದ ಬಲ್ಲೆಹಕೆ
ಹಣಿವ ಲೌಡಿಗೆ ಪಾಯ್ದು ಬೀಳುವ
ಕಣೆಗೆ ಖಂಡದ ರುಧಿರ ರಣದೌ
ತಣವ ರಚಿಸದೆ ಬರಿದೆ ರಾಜ್ಯವ ಕೊಂಬೆ ನೀನೆಂದ (ಕರ್ಣ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬೈಗಳನ್ನು ಮುಂದುವರೆಸುತ್ತಾ, ರಾಜ ಯುದ್ಧವೆಂದರೆ ಊಟದ ಮನೆಯಲ್ಲ. ತಲೆಯ ಮೇಲೆರಗುವ ಕತ್ತಿಗೆ ಸುಳಿಯುವ ಸುರಗಿಗೆ, ತಿವಿಯುವ ಬಲ್ಲೆಯಹಕ್ಕೆ, ಹೊಡೆಯುವ ಲೌಡಿಗೆ, ಹಾರಿಬಂದು ತಾಗುವ ಬಾಣಕ್ಕೆ ಯುದ್ಧದಲ್ಲಿ ರಕ್ತದ ಮೃಷ್ಟಾನ ಭೋಜನವನ್ನು ಮಾಡಿಸದೇ ಸುಮ್ಮನಿದ್ದು ರಾಜ್ಯವನ್ನು ಪಡೆಯುವೆಯಾ ಎಂದು ಕೇಳಿದನು.

ಅರ್ಥ:
ರಣ: ಯುದ್ಧ; ಘಾರಾಘಾರಿ: ಕಡೆತದಿಂದ ಉಂಟಾದ ಹಿಂಸೆ; ಆರೋಗಣೆ: ಊಟ, ಭೋಜನ; ಮನೆ: ಆಲಯ; ಅರಸ: ರಾಜ; ಶಿರ: ತಲೆ; ಕುಣಿ: ನರ್ತಿಸು, ಆಡು; ಸುಳಿ: ತಿರುಗು; ಸುರಗಿ: ಸಣ್ಣ ಕತ್ತಿ, ಚೂರಿ; ತಿವಿ: ಚುಚ್ಚು; ಹಣಿವ: ಬಲ್ಲೆಹ: ಈಟಿ, ಆಯುಧದ ಬಗೆ; ಹಣಿತ: ಹೊಡೆಯುವ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ, ದೊಣ್ಣೆಯಂತಹ ಸಾಧನ; ಹಾಯ್ದು: ಮೇಲೆ ಬಿದ್ದು; ಬೀಳು: ಕೆಳಕ್ಕೆ ಕುಸಿ; ಕಣೆ:ಬಾಣ; ಖಂಡ: ತುಂಡು, ಚೂರು; ರುಧಿರ: ರಕ್ತ; ಔತಣ:ವಿಶೇಷವಾದ ಊಟ; ರಚಿಸು: ತಯಾರಿಸು; ಬರಿ: ಕೇವಲ; ರಾಜ್ಯ: ರಾಷ್ಟ್ರ; ಕೊಂಬೆ: ಪಡೆ;

ಪದವಿಂಗಡಣೆ:
ರಣದ +ಘಾರಾಘಾರಿ+ಆರೋ
ಗಣೆಯ +ಮನೆಯಲ್ಲ್+ಅರಸ +ಶಿರದಲಿ
ಕುಣಿದಡ್+ಆಯ್ದಕೆ +ಸುಳಿವ +ಸುರಗಿಗೆ +ತಿವಿದ +ಬಲ್ಲೆಹಕೆ
ಹಣಿವ +ಲೌಡಿಗೆ +ಪಾಯ್ದು +ಬೀಳುವ
ಕಣೆಗೆ +ಖಂಡದ +ರುಧಿರ +ರಣದೌ
ತಣವ +ರಚಿಸದೆ +ಬರಿದೆ +ರಾಜ್ಯವ +ಕೊಂಬೆ +ನೀನೆಂದ

ಅಚ್ಚರಿ:
(೧) ರಣರಂಗವನ್ನು ಅಡುಗೆಮನೆಗೆ ಹೋಲಿಕೆ ನೀಡಿರುವ ಪದ್ಯ
(೨) ರ ಕಾರದ ತ್ರಿವಳಿ ಪದ – ರುಧಿರ ರಣದೌತಣವ ರಚಿಸದೆ
(೩) ಆಯುಧಗಳ ಪದಗಳು – ಸುರಗಿ, ಬಲ್ಲೆಹ, ಲೌಡಿ,ಕಣೆ