ಪದ್ಯ ೪೭: ಕರ್ಣನೇಕೆ ದುಃಖಿಸಿದನು?

ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೆಡಗಿದೆವು ದೈವದಲಿ ಕಲಹವನೆಂದನಾ ಕರ್ಣ (ದ್ರೋಣ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಆರ್ಭಟಿಸುವ ಸಮುದ್ರದ ಬೆಟ್ಟದಮ್ತಹ ಅಲೆಗಳೂ, ದ್ರೋಣನು ರಚಿಸಿದ್ದ ವ್ಯೂಹ ಪರ್ವತದ ಮುಮ್ದೆ ಅಲ್ಲ, ದ್ರೋಣನು ರಚಿಸಿದ್ದ ವ್ಯೂಹ ಪರ್ವತವನ್ನು ಸಹಸ್ರಯುಗಗಳಾದರೂ ಒಡೆಯಲಾಗುತ್ತಿತ್ತೇ? ಕಟ್ಟೆ ಒಡೆದು ಹೋಯಿತು, ಸೈಂಧವನ ತಲೆ ದೇಹವನ್ನು ಬಿಟ್ಟು ಹೋಯಿತು ಅಯ್ಯೋ ನಾವು ದೈವದೊಡನೆ ಕಲಹಕ್ಕಿಳಿದೆವು ಎಂದು ಕರ್ಣನು ದುಃಖಿಸಿದನು.

ಅರ್ಥ:
ಕಡಲು: ಸಾಗರ; ಮೊರಹು: ಬಾಗು, ಕೋಪ; ಲಹರಿ: ಅಲೆ; ಲಘು: ಕ್ಷುಲ್ಲಕವಾದುದು; ಪಡೆ: ಸೈನ್ಯ; ಒಡೆ: ಚೂರಾಗು; ಯುಗ: ಕಾಲದ ಪ್ರಮಾಣ; ಸಹಸ್ರ: ಸಾವಿರ; ವ್ಯೂಹ: ಗುಂಪು, ಸೈನ್ಯ; ಪರ್ವತ: ಬೆಟ್ಟ; ಒಡ್ಡು: ಅಡ್ಡ ಗಟ್ಟೆ; ಒಡಲು: ದೇಹ; ನೀಗು: ನಿವಾರಿಸಿಕೊಳ್ಳು; ತಲೆ: ಶಿರ; ಅಕಟ: ಅಯ್ಯೋ; ದೈವ: ಭಗವಂತ; ಕಲಹ: ಯುದ್ಧ;

ಪದವಿಂಗಡಣೆ:
ಕಡಲ +ಮೊರಹಿನ +ಲಹರಿ +ಲಘುವೀ
ಪಡೆಯನ್+ಒಡೆಯಲು +ಯುಗ+ಸಹಸ್ರದೊಳ್
ಒಡೆಯಬಹುದೇ +ದ್ರೋಣ +ರಚಿಸಿದ +ವ್ಯೂಹ +ಪರ್ವತವ
ಒಡೆದು +ಹೋಯಿತ್+ಒಡ್ಡು +ಸೈಂಧವನ್
ಒಡಲು +ನೀಗಿತು +ತಲೆಯನ್+ಅಕಟಾ
ತೆಡಗಿದೆವು +ದೈವದಲಿ +ಕಲಹವನೆಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ಮೊರಹಿನ ಲಹರಿ ಲಘುವೀಪಡೆಯನೊಡೆಯಲು
(೨) ದ್ರೋಣನ ವ್ಯೂಹದ ಶಕ್ತಿ – ಯುಗಸಹಸ್ರದೊಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ

ಪದ್ಯ ೩೩: ಹನುಮನು ಯುಗದ ಗುಣಧರ್ಮದ ಬಗ್ಗೆ ಏನು ಹೇಳಿದನು?

ಈ ಯುಗದ ಗುಣಧರ್ಮವಾ ತ್ತೇ
ತಾಯುಗದವರಿಗಿಅದದಾ ತ್ರೇ
ತಾಯುಗವು ಸರಿಯಲ್ಲ ಕೃತಯುಗದೇಕ ದೇಶದಲಿ
ಆ ಯುಗದಲಾ ಮನುಜರಾ ಸ
ತ್ವಾಯುವಾ ಸಾಮರ್ಥ್ಯವಾತರು
ವಾಯ ಯುಗದಲಿ ಸಲ್ಲದೆಂದನು ನಗುತ ಹನುಮಂತ (ಅರಣ್ಯ ಪರ್ವ, ೧೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಹನುಮಂತನು ಭೀಮನ ಕೋರಿಕೆಯನ್ನು ಕೇಳಿ, ಈ ದ್ವಾಪರ ಯುಗದ ಗುಣಧರ್ಮಗಳು ತ್ರೇತಾಯುಗದ ಗುಣಧರ್ಮಗಳಿಗೆ ಸಮನಲ್ಲ. ಕೃತಯುಗದ ಒಂದು ಪಾದದ ಗುಣ ಧರ್ಮಗಳು ತ್ರೇತಾಯುಗದವರಲ್ಲಿ ಕಡಿಮೆ, ಆಯಾ ಯುಗದ ಮನುಷ್ಯರ ಸತ್ವ, ಆಯಸ್ಸು, ಸಾಮರ್ಥ್ಯಗಳು ಮುಂದಿನ ಯುಗದವರಲ್ಲಿರುವುದಿಲ್ಲ ಎಂದು ಯುಗಗಳ ಗುಣಧರ್ಮದ ಬಗ್ಗೆ ತಿಳಿಸಿದನು.

ಅರ್ಥ:
ಯುಗ: ಕಾಲವನ್ನು ಅಳೆಯುವ ಪ್ರಮಾಣ; ಗುಣ: ನಡತೆ, ಸ್ವಭಾವ; ಧರ್ಮ: ಧಾರಣೆ ಮಾಡಿದುದು; ಐದೆ: ವಿಶೇಷವಾಗಿ; ದೇಶ: ರಾಷ್ಟ್ರ; ಮನುಜ: ಮನುಷ್ಯ; ಸತ್ವ: ಶಕ್ತಿ, ಬಲ; ಸಾಮರ್ಥ್ಯ: ದಕ್ಷತೆ, ಯೋಗ್ಯತೆ; ತರುವಾಯ: ರೀತಿ, ಕ್ರಮ; ಸಲ್ಲು: ನೆರವೇರು; ನಗುತ: ಸಂತಸ;

ಪದವಿಂಗಡಣೆ:
ಈ +ಯುಗದ +ಗುಣಧರ್ಮವಾ+ ತ್ರೇ
ತಾ+ಯುಗದವರಿಗ್+ಐದದ್+ಆ+ ತ್ರೇ
ತಾ+ಯುಗವು+ ಸರಿಯಲ್ಲ+ ಕೃತ+ಯುಗದೇಕ+ ದೇಶದಲಿ
ಆ +ಯುಗದಲಾ +ಮನುಜರಾ +ಸತ್ವ
ಆಯುವ್+ಆ+ ಸಾಮರ್ಥ್ಯವ್+ಆ+ತರು
ವಾಯ +ಯುಗದಲಿ+ ಸಲ್ಲದೆಂದನು +ನಗುತ +ಹನುಮಂತ

ಅಚ್ಚರಿ:
(೧) ಯುಗ – ೧-೪ ಸಾಲಿನ ೨ ಪದವಾಗಿ ಬಳಕೆ
(೨) ೧-೨ ಸಾಲಿನ ಕೊನೆ ಪದ ತ್ರೇ ಆಗಿರುವುದು

ಪದ್ಯ ೬೧: ಶಿಶುಪಾಲನು ಎಲ್ಲಿಗೆ ಹೋಗುತ್ತಾನೆ ಎಂದು ಭೀಷ್ಮರು ನುಡಿದರು?

ಆಯುಗದಲಾಯುಗದಲನಿಬರು
ಬೀಯವಾದರು ದೈತ್ಯದಾನವ
ರೀ ಯುಗದಲೆನಿತಸುರರನಿಬರು ದುಷ್ಟದಾನವರು
ರಾಯರನಿಬರು ದಿವಿಜರಾಯನ
ಲಾಯದಲಿ ಲಂಬಿಸಿದರಾ ತರು
ವಾಯ ನಿನಗೀಗಳೆ ವಿಘಾತದೊಳೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೬೧ ಪದ್ಯ)

ತಾತ್ಪರ್ಯ:
ಆಯಾ ಯುಗದಲ್ಲಿ ಅದೆಷ್ಟೋಜನ ಶ್ರೀಕೃಷ್ಣನಿಂದ ಹತರಾದರು. ಈ ಯುಗದಲ್ಲಿ ಅದೆಷ್ಟೋಜನ ಅಸುರರು, ದುಷ್ಟ ರಾಕ್ಷಸರು, ಖಳ ರಾಜರು ಇವನಿಂದ ಹತರಾಗಿ ಇಂದ್ರನ ಅಶ್ವಶಾಲೆಯಲ್ಲಿ ಸಾಲಾಗಿ ನಿಂತಿದ್ದಾರೆ. ಅದಾದ ಮೇಲೆ ಈಗಲೇ ಹೆಚ್ಚಿನ ಹೊದೆತಬಿದ್ದು ನೀನೂ ಅಲ್ಲಿಗೆ ಹೋಗುತ್ತಿಯ ಎಂದು ಭೀಷ್ಮರು ನುಡಿದರು.

ಅರ್ಥ:
ಯುಗ: ಕಾಲದ ಪ್ರಮಾಣ; ಅನಿಬರು: ಅಷ್ಟು; ಬೀಯ: ವ್ಯಯ, ನಷ್ಟ, ಖರ್ಚು; ದೈತ್ಯ: ರಾಕ್ಷಸ; ಅಸುರ: ರಾಕ್ಷಸ; ದುಷ್ಟ: ಕೆಟ್ಟ, ಖಳ; ದಾನವ: ರಾಕ್ಷಸ; ರಾಯ: ರಾಜ; ದಿವಿಜ: ಸುರರು; ಲಾಯ: ಅಶ್ವಶಾಲೆ; ಲಂಬಿಸು: ಉದ್ದ; ತರುವಾಯ: ಅವಕಾಶ, ಅನುಕೂಲ; ವಿಘಾತ: ನಾಶ, ಧ್ವಂಸ;

ಪದವಿಂಗಡಣೆ:
ಆ+ಯುಗದಲ್+ಆ+ಯುಗದಲ್+ಅನಿಬರು
ಬೀಯವಾದರು +ದೈತ್ಯ+ದಾನವರ್
ಈ+ ಯುಗದಲ್+ಎನಿತ್+ಅಸುರರ್+ಅನಿಬರು +ದುಷ್ಟ+ದಾನವರು
ರಾಯರ್+ಅನಿಬರು +ದಿವಿಜ+ರಾಯನ
ಲಾಯದಲಿ +ಲಂಬಿಸಿದರ್+ಆ+ ತರು
ವಾಯ +ನಿನಗ್+ಈಗಳೆ +ವಿಘಾತದೊಳ್+ಎಂದನಾ +ಭೀಷ್ಮ

ಅಚ್ಚರಿ:
(೧) ಅಸುರ, ದಾನವ – ಸಮನಾರ್ಥಕ ಪದ
(೨) ಅನಿಬರು – ೩ ಬಾರಿ ಪ್ರಯೋಗ
(೩) ಇಂದ್ರನನ್ನು ದಿವಿಜರಾಯ ಎಂದು ಕರೆದಿರುವುದು
(೪) ಸತ್ತರು ಎಂದು ಹೇಳಲು – ದಿವಿಜರಾಯನ ಲಾಯದಲಿ ಲಂಬಿಸಿದರಾ

ಪದ್ಯ ೨೦: ಧರ್ಮವು ಯುಧಿಷ್ಠಿರನ ರಾಜ್ಯದಲ್ಲಿ ಯಾವ ಸ್ಥಿತಿಯಲ್ಲಿತ್ತು?

ಆದಿಯುಗದೊಳು ಧರ್ಮವಿದ್ದುದು
ಪಾದ ನಾಲ್ಕರ ಗಾಢಗತಿಯಲಿ
ಪಾದವೂಣೆಯವಾದುದಾ ತ್ರೇತಾಪ್ರಭಾವದಲಿ
ಪಾದವೆರಡಡಗಿದುದು ದ್ವಾಪರ
ದಾದಿಯಲ್ಲಿ ಯುಧಿಷ್ಠಿರನ ರಾ
ಜ್ಯೋದಯದಲಂಕುರಿಸಿ ಸುಳಿದುದು ನಾಲ್ಕು ಪಾದದಲಿ (ಆದಿ ಪರ್ವ, ೧೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ನಾಲ್ಕು ಯುಗಗಳಲ್ಲಿ ಮೊದಲಾದ ಕೃತಯುಗದಲ್ಲಿ ಧರ್ಮವು ನಾಲ್ಕು ಕಾಲುಗಳಲ್ಲಿ ನಿಂತಿತ್ತು, ತ್ರೇತಾಯುಗದ ಪ್ರಭಾವದಿಂದ ಧರ್ಮಕ್ಕೆ ಒಂದು ಕಾಲು ಹೋಗಿ ಮೂರೆ ಕಾಲುಗಳಮೇಲೆ ನಿಂತಿತು, ದ್ವಾಪರದ ಆದಿಯಲ್ಲಿ ಇನ್ನೊಂದು ಕಾಲು ಸಹ ಹೋಗಿ, ಎರಡೇ ಕಾಲುಗಳ ಮೇಲೆ ನಿಂತಿತು,ಆದರೆ ಯುಧಿಷ್ಠಿರನ ರಾಜ್ಯದಲ್ಲಿ ಧರ್ಮಕ್ಕೆ ಹೋಗಿದ್ದ ಎರಡು ಪಾದಗಳು ಚಿಗುರಿ ಅದು ಮತ್ತೆ ನಾಲ್ಕು ಪಾದಗಳ ಮೇಲೆ ನಿಂತಿತು.

ಅರ್ಥ:
ಆದಿ: ಪ್ರಾರಂಭ; ಯುಗ: ದೀರ್ಘವಾದ ಕಾಲಖಂಡ; ಧರ್ಮ: ಧಾರಣ ಮಾಡಿದುದು, ಶ್ರದ್ಧೆ; ಪಾದ: ಚರಣ; ಗಾಢಗತಿ:ವೇಗವಾದ ನಡಿಗೆ; ಊಣೆ: ಊನ, ಅಂಗಹೀನತೆ; ಪ್ರಭಾವ: ಪ್ರಾಬಲ್ಯ; ಅಡಗು: ಮರೆಯಾಗು; ಉದಯ: ಹುಟ್ಟು; ಅಲಂಕರಿಸು: ಶೃಂಗಾರಗೊಳ್ಳು; ಸುಳಿದು:ಕಾಣಿಸಿಕೊಳ್ಳು;

ಪದವಿಂಗಡಣೆ:
ಆದಿ+ಯುಗದೊಳು +ಧರ್ಮವಿದ್ದುದು
ಪಾದ +ನಾಲ್ಕರ +ಗಾಢಗತಿಯಲಿ
ಪಾದ+ವೂಣೆಯವ್+ಆದುದಾ +ತ್ರೇತಾ+ಪ್ರಭಾವದಲಿ
ಪಾದವೆರಡ್+ಅಡಗಿದುದು +ದ್ವಾಪರದ್
ಆದಿಯಲ್ಲಿ +ಯುಧಿಷ್ಠಿರನ+ ರಾ
ಜ್ಯೋದಯದಲ್+ಅಲಂಕುರಿಸಿ+ ಸುಳಿದುದು +ನಾಲ್ಕು +ಪಾದದಲಿ

ಅಚ್ಚರಿ:
(೧) ಯುಧಿಷ್ಠಿರನ ರಾಜ್ಯದಲ್ಲಿ ಧರ್ಮವು ಹೇಗೆ ತನ್ನ ಹಿರಿಮೆಯನ್ನು ಪಡೆಯಿತು ಎಂದು ಸೂಕ್ತವಾಗಿ ವರ್ಣಿಸಲಾಗಿದೆ
(೨)ಆದಿ – ೧, ೫ ಸಾಲಿನ ಮೊದಲ ಪದ, ಪಾದ – ೨,೩, ೪ ಸಾಲಿನ ಮೊದಲ ಪದ (ಒಟ್ಟು ನಾಲ್ಕು ಬಾರಿ ಪ್ರಯೋಗ)
(೩) ಊಣೆ, ಅಡಗು – ಸಮಾನ ಅರ್ಥ ಕೊಡುವ ಪದಗಳ ಬಳಕೆ