ಕಾದುವರೆ ನಮ್ಮುತ್ಸವಕೆ ನೆರ
ವಾದವರು ಸೈರಿಸುವರಗ್ಗದ
ಯಾದವೇಂದ್ರನ ನಿಂದೆ ಮೇಲಧ್ವರ ವಿಸಂಘಟನ
ಈ ದುರಂತದ ಚಿಂತೆಯಲಿ ಬೇ
ಳಾದುದೆನ್ನಯ ಚಿತ್ತವದ್ದೆನು
ಖೇದ ಪಂಕದೊಳೆನ್ನನುದ್ಧರಿಸೆಂದನಾ ಭೂಪ (ಸಭಾ ಪರ್ವ, ೧೧ ಸಂಧಿ, ೭ ಪದ್ಯ)
ತಾತ್ಪರ್ಯ:
ಭೀಷ್ಮ ಪಿತಾಮಹರೇ, ಯುದ್ಧವಾದರೆ ನಾವು ನಮ್ಮ ಮಿತ್ರರೊಡನೆ ಯುದ್ಧವನ್ನು ಎದುರಿಸಬಲ್ಲೆವು, ಆದರೆ ಶ್ರೀಕೃಷ್ಣನಿಗೆ ಅಪಮಾನ, ಯಜ್ಞಧ್ವಂಸ ಇಂತಹ ದುರಂತವನ್ನು ನೆನೆದು ನನ್ನ ಮನಸ್ಸು ಕಳವಳಗೊಂಡಿದೆ. ದುಃಖದ ಕೆಸರಿನಲ್ಲಿ ಹೊರಳುತ್ತಿರುವ ನನ್ನನ್ನು ಮೇಲಕ್ಕೆತ್ತಿ ಎಂದು ಯುಧಿಷ್ಠಿರನು ಭೀಷ್ಮರನ್ನು ಬೇಡಿಕೊಂಡನು.
ಅರ್ಥ:
ಕಾದು: ಹೋರಾಡು; ಉತ್ಸವ: ಸಮಾರಂಭ; ನೆರವು: ಸಹಾಯ; ಸೈರಿಸು: ಸಮಾಧಾನಪಡು; ಅಗ್ಗ: ಶ್ರೇಷ್ಠ; ಯಾದವೇಂದ್ರ: ಕೃಷ್ಣ; ನಿಂದೆ: ತೆಗಳು, ಬಯ್ಯು; ಅಧ್ವರ: ಯಜ್ಞ; ಸಂಘಟ: ಘರ್ಷಣೆ, ಯುದ್ಧ; ದುರಂತ: ದುರ್ಘಟನೆ; ಚಿಂತೆ: ಯೋಚನೆ; ಬೇಳಾಗು: ತಳಮಳಗೊಳ್ಳು; ಚಿತ್ತ: ಮನಸ್ಸು; ಖೇದ: ದುಃಖ; ಪಂಕ: ಕೆಸರು; ಉದ್ಧರಿಸು: ಮೇಲಕ್ಕೆ ಎತ್ತುವುದು; ಭೂಪ: ರಾಜ; ಅದ್ದು: ಮುಳುಗು;
ಪದವಿಂಗಡಣೆ:
ಕಾದುವರೆ +ನಮ್ಮ್+ಉತ್ಸವಕೆ +ನೆರ
ವಾದವರು +ಸೈರಿಸುವರ್+ಅಗ್ಗದ
ಯಾದವೇಂದ್ರನ +ನಿಂದೆ ಮೇಲ್+ಅಧ್ವರ +ವಿಸಂಘಟನ
ಈ +ದುರಂತದ +ಚಿಂತೆಯಲಿ +ಬೇ
ಳಾದುದ್+ಎನ್ನಯ +ಚಿತ್ತವ್+ಅದ್ದೆನು
ಖೇದ +ಪಂಕದೊಳ್+ಎನ್ನನ್+ಉದ್ಧರಿಸೆಂದನಾ +ಭೂಪ
ಅಚ್ಚರಿ:
(೧) ಉಪಮಾನದ ಪ್ರಯೋಗ – ಚಿತ್ತವದ್ದೆನು ಖೇದ ಪಂಕದೊಳ್
(೨) ಕೃಷ್ಣನನ್ನು ಯಾದವೇಂದ್ರ ಎಂದು ಕರೆದಿರುವುದು