ಪದ್ಯ ೨೬: ಭೀಷ್ಮನು ವೇಗವಾಗಿ ಎಲ್ಲಿಗೆ ಬಂದನು?

ವಿರಹ ದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ (ಆದಿ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ವಿರಹದ ಕುಲುಮೆಯ ಬೆಂಕಿಯು ಅವನನ್ನು ಆವರಿಸಿತು. ಆ ತಾಪವನ್ನು ಬಣ್ಣಿಸಲಾರೆ. ಏಳೋ, ಎಂಟೋ, ಒಂಬತ್ತು ದಿನಗಳಲ್ಲಿ ಇವನ ಮರಣವು ನಿಶ್ಚಿತವೆಂದು ಜನರು ಗುಜುಗುಜು ಮಾತನಾಡಿದರು. ಅದನ್ನು ಕೇಳಿ ಭೀಷ್ಮನು ಯಮುನಾ ನದಿಯ ತೀರಕ್ಕೆ ವೇಗದಿಂದ ಬಂದನು.

ಅರ್ಥ:
ವಿರಹ: ಅಗಲಿಕೆ, ವಿಯೋಗ; ದಾವು: ತಾಪ, ಧಗೆ; ಕಿಚ್ಚು: ಬೆಂಕಿ; ಭೂಮೀಶ್ವರ: ರಾಜ; ಮುಸುಕು: ಆವರಿಸು; ಬಲಿ: ಹೆಚ್ಚಾ, ಗಟ್ಟಿ; ಅವಸ್ಥೆ: ಸ್ಥಿತಿ; ಅರಸ: ರಾಜ; ಬಣ್ಣಿಸು: ವಿವರಿಸು; ಅರಿ: ತಿಳಿ; ಬಳಿ: ನಂತರ; ಮರಣ: ಸವು; ಉಬ್ಬರ: ಅತಿಶಯ; ಗುಜುಗುಜು: ಮಾತು; ಅರಿ: ತಿಳಿ; ನದಿ: ಸರೋವರ; ತೀರ: ದಡ; ಬಂದು: ಆಗಮಿಸು; ವಹಿಲ: ವೇಗ;

ಪದವಿಂಗಡಣೆ:
ವಿರಹ +ದಾವುಗೆ +ಕಿಚ್ಚು +ಭೂಮೀ
ಶ್ವರನ +ಮುಸುಕಿತು +ಬಲಿದ್+ಅವಸ್ಥೆಯನ್
ಅರಸ +ಬಣ್ಣಿಸಲ್+ಅರಿಯೆನ್+ಏಳೆಂಟೊಂಬತರ +ಬಳಿಯ
ಮರಣವ್+ಈತಂಗ್+ಎಂಬ +ಜನದ್
ಉಬ್ಬರದ +ಗುಜುಗುಜುವ್+ಅರಿದು +ಯಮುನಾ
ವರ+ನದಿಯ +ತೀರಕ್ಕೆ+ ಬಂದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ವಿರಹದ ತೀವ್ರತೆಯನ್ನು ಹೇಳುವ ಪರಿ – ವಿರಹ ದಾವುಗೆ ಕಿಚ್ಚು ಭೂಮೀಶ್ವರನ ಮುಸುಕಿತು

ಪದ್ಯ ೧೫: ಧರ್ಮಜನು ಋಷಿಯ ಮಾತನ್ನು ಹೇಗೆ ಅಂಗೀಕರಿಸಿದನು?

ಆವ ಜನ್ಮದ ಸುಕೃತ ಫಲ ಸಂ
ಭಾವಿಸಿದುದೋ ನಿಮ್ಮ ಬರವನ
ದಾವ ಪಡೆವನು ಕೊಟ್ಟೆನೆಂದನು ನೃಪತಿ ಕೈಮುಗಿದು
ಆ ವಿಗಡಮುನಿ ಬಳಿಕನುಷ್ಠಾ
ನಾವಲಂಬನಕತ್ತ ಯಮುನಾ
ದೇವಿಯರ ಹೊಗಲಿತ್ತ ನೃಪ ಕರೆಸಿದನು ದ್ರೌಪದಿಯ (ಅರಣ್ಯ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ನಾನು ಯಾವ ಜನ್ಮದಲ್ಲಿ ಮಾಡಿದ ಪುಣ್ಯದ ಫಲವೋ ಏನೋ, ಈಗ ಒದಗಿದೆ, ನಿಮ್ಮ ಬರವಿನ ಪುಣ್ಯ ಇನ್ಯಾರಿಗೆ ಸಿಕ್ಕೀತು? ನಿಮ್ಮ ಭೋಜನಕ್ಕೆ ವ್ಯವಸ್ಥೆಯುಂಟು ಎಂದನು ಆಗಾ ಮಹರ್ಷಿಯು ಅನುಷ್ಠಾನಕ್ಕಾಗಿ ಯಮುನಾ ನದಿಗೆ ಹೋಗಲು, ಇತ್ತ ಧರ್ಮಜನು ದ್ರೌಪದಿಯನ್ನು ಕರೆದನು.

ಅರ್ಥ:
ಜನ್ಮ: ಹುಟ್ಟು; ಸುಕೃತ: ಒಳ್ಳೆಯ ಕೆಲಸ; ಫಲ: ಪ್ರಯೋಜನ; ಸಂಭಾವಿಸು: ಉಂಟಾಗು; ಬರವು: ಆಗಮನ; ಪಡೆ: ದೊರಕು; ಕೊಡು: ನೀಡು; ನೃಪತಿ: ರಾಜ; ಕೈಮುಗಿ: ನಮಸ್ಕರಿಸು; ವಿಗಡ: ಉಗ್ರವಾದ; ಬಳಿಕ: ನಂತರ; ಅನುಷ್ಠಾನ: ಆಚರಣೆ; ಅವಲಂಬನ: ಆಸರೆ; ನೃಪ: ರಾಜ; ಕರೆಸು: ಬರೆಮಾಡು;

ಪದವಿಂಗಡಣೆ:
ಆವ +ಜನ್ಮದ +ಸುಕೃತ +ಫಲ +ಸಂ
ಭಾವಿಸಿದುದೋ +ನಿಮ್ಮ +ಬರವನದ್
ಆವ+ ಪಡೆವನು+ ಕೊಟ್ಟೆನೆಂದನು +ನೃಪತಿ +ಕೈಮುಗಿದು
ಆ +ವಿಗಡಮುನಿ +ಬಳಿಕ್+ಅನುಷ್ಠಾನ
ಅವಲಂಬನಕ್+ಅತ್ತ+ ಯಮುನಾ
ದೇವಿಯರ +ಹೊಗಲ್+ಇತ್ತ +ನೃಪ +ಕರೆಸಿದನು +ದ್ರೌಪದಿಯ

ಅಚ್ಚರಿ:
(೧) ಧರ್ಮಜನು ತಾನು ಭಾಗ್ಯವಂತನೆಂದು ಹೇಳುವ ಪರಿ – ಆವ ಜನ್ಮದ ಸುಕೃತ ಫಲ ಸಂ
ಭಾವಿಸಿದುದೋ

ಪದ್ಯ ೩೩: ಆಸ್ಥಾನವು ಹೇಗೆ ಕಂಗೊಳಿಸುತ್ತಿತ್ತು?

ಹರಹಿನಲಿ ಹಿರಿದಾಯ್ತು ಕೆಂದಾ
ವರೆಯ ವನ ಬೇರೊಂದು ತಾಣದೊ
ಳುರವಣೆಯ ಬೆಳದಿಂಗಳೌಕಿದುದೊಂದು ತಾಣದಲಿ
ಹರಿವ ಯಮುನಾ ನದಿಯನಲ್ಲಿಗೆ
ತರಸಿದವರಾರೆನಲು ಮಣಿ ಬಂ
ಧುರದ ಬೆಳಗಿನಲಹರಿ ಮುರಿದುದು ತನ್ನ ಜಾಣುಮೆಯ (ಸಭಾ ಪರ್ವ, ೧೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥದಲ್ಲಿ ದುರ್ಯೋಧನನು ಕಂಡ ಆಲಯದ ವರ್ಣನೆಮಾಡಲು ಶುರುಮಾಡಿದ, ಒಂದು ಬದಿಯಲ್ಲಿ ಬಹಳ ವಿಶಾಲವಾದ ಕೆಂದಾವರೆಯ ವನವು ಕಾಣಿಸುತ್ತಿತ್ತು. ಇನ್ನೊಂದು ಕಡೆ ಬೆಳದಿಂಗಳು ಹರಡಿತ್ತು. ಹಸ್ತಿನಾಪುರದ ಬಳಿ ಹರಿಯುವ ಯಮುನಾ ನದಿಯನ್ನು ಇಲ್ಲಿಗೆ ಯಾರು ತರಿಸಿದರು ಎನ್ನುವ ಅನುಮಾನಬರುವಂತೆ ದಿವ್ಯರತ್ನಗಳ ಬೆಳಕು ಒಂದು ಕಡೆ ಬಿದ್ದಿರಲು, ನನ್ನ ಜಾಣ್ಮೆಯನ್ನು ನಾನು ಕಳೆದುಕೊಂಡೆ ಎಂದು ಹೇಳಿದನು.

ಅರ್ಥ:
ಹರಹು: ವಿಸ್ತಾರ, ವೈಶಾಲ್ಯ; ಹಿರಿ: ಹೆಚ್ಚು; ಕೆಂದಾವರೆ: ಕೆಂಪಾದ ಕಮಲ; ವನ: ಕಾಡು; ತಾಣ: ನೆಲೆ, ಬೀಡು; ಉರವಣೆ: ಆತುರ, ಆಧಿಕ್ಯ; ಬೆಳದಿಂಗಳು: ಪೂರ್ಣಚಂದ್ರ, ಹುಣ್ಣಿಮೆ; ಔಕು: ನೂಕು; ಹರಿವ: ಚಲಿಸುವ; ನದಿ: ಸರೋವರ; ತರಸು: ಬರೆಮಾಡು; ಮಣಿ: ಮುತ್ತು, ರತ್ನ; ಬಂಧುರ: ಬಾಗಿರುವುದು, ಮಣಿದಿರುವುದು; ಬೆಳಗಿನ: ದಿನದ; ಲಹರಿ: ರಭಸ, ಆವೇಗ; ಮುರಿ: ಸೀಳು; ಜಾಣು: ಬುದ್ಧಿವಂತಿಕೆ;

ಪದವಿಂಗಡಣೆ:
ಹರಹಿನಲಿ +ಹಿರಿದಾಯ್ತು +ಕೆಂದಾ
ವರೆಯ +ವನ +ಬೇರೊಂದು +ತಾಣದೊಳ್
ಉರವಣೆಯ +ಬೆಳದಿಂಗಳ್+ಔಕಿದುದ್+ಒಂದು +ತಾಣದಲಿ
ಹರಿವ+ ಯಮುನಾ +ನದಿಯನ್+ಇಲ್ಲಿಗೆ
ತರಸಿದವರ್+ಆರೆನಲು +ಮಣಿ +ಬಂ
ಧುರದ +ಬೆಳಗಿನಲಹರಿ+ ಮುರಿದುದು +ತನ್ನ +ಜಾಣುಮೆಯ

ಅಚ್ಚರಿ:
(೧) ಹಿರಿದು, ಉರವಣೆ – ಸಾಮ್ಯಾರ್ಥ ಪದಗಳು
(೨) ದುರ್ಯೋಧನನು ತನ್ನ ಜಾಣ್ಮೆಯನ್ನು ಕಳೆದುಕೊಂಡ ಪರಿ – ಮಣಿ ಬಂಧುರದ ಬೆಳಗಿನಲಹರಿ ಮುರಿದುದು ತನ್ನ ಜಾಣುಮೆಯ