ಪದ್ಯ ೩೯: ಯಾವ ಖಡ್ಗಗಳನ್ನು ಯುದ್ಧದಲ್ಲಿ ಬಳಸಲಾಯಿತು?

ಖಡುಗ ತೋಮರ ಪರಶುಗಳ ಕ
ಕ್ಕಡೆಯ ಕುಂತದ ಪಿಂಡಿವಾಳದ
ಕಡುಗಲಿಗಳುರೆ ಮಗ್ಗಿದರು ತಗ್ಗಿದುದು ಯಮಲೋಕ
ಬಿಡದೆ ನಾಯಕವಾಡಿ ಚೂಣಿಯ
ಹಿಡಿದು ಕಾದಿತ್ತು ಭಯರಾಯರು
ದಡಿಯಕೈಯವರಿಂದ ಕವಿಸಿದರಂದು ಸಬಳಿಗರ (ಭೀಷ್ಮ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಖಡ್ಗ, ತೋಮರ, ಗಂಡುಕೊಡಲಿ, ಕಕ್ಕಡೆ, ಕುಂತ, ಭಿಂಡಿವಾಳಗಳನ್ನು ಹಿಡಿದ ವೀರರು ಹೋರಾಡಿ ಸತ್ತರು, ಯಮಲೋಕವು ಅವರ ಭಾರದಿಂದ ಕುಸಿಯಿತು. ನಾಯಕರು ತಮ್ಮ ಎದುರಿನಲ್ಲಿದ್ದವರೊಡನೆ ಕಾದಿದರು, ಆಗ ಎರಡೂ ಸೈನ್ಯಗಳ ರಾಜರು ಕೈಗೋಲು ಹಿಡಿದ ದೂತರ ಮುಖಾಂತರ ಈಟಿಯನ್ನು ಹಿಡಿದ ಯೋಧರು ಮುನ್ನುಗ್ಗಲು ಅಪ್ಪಣೆಯನ್ನು ನೀಡಿದರು.

ಅರ್ಥ:
ಖಡುಗ: ಕತ್ತಿ, ಕರವಾಳ; ತೋಮರ: ಈಟಿ; ಪರಶು: ಕೊಡಲಿ, ಕುಠಾರ; ಕಕ್ಕಡೆ: ಗರಗಸ; ಕುಂತ: ಈಟಿ, ಭರ್ಜಿ; ಪಿಂಡಿವಾಳ: ಈಟಿ; ಕಲಿ: ಶೂರ; ಉರೆ: ಅಧಿಕ; ಮಗ್ಗು: ಕುಂದು, ಕುಗ್ಗು; ತಗ್ಗು: ಕುಗ್ಗು, ಕುಸಿ; ಯಮಲೋಕ: ಅಧೋಲೋಕ; ಬಿಡು: ತೊರೆ; ನಾಯಕ: ಒಡೆಯ; ಚೂಣಿ: ಮೊದಲು; ಹಿಡಿ: ಬಂಧಿಸು; ಕಾದು: ಹೋರಾಡು; ಭಯ: ಅಂಜಿಕೆ; ರಾಯ: ರಾಜ; ದಡಿ: ಕೋಲು, ಜೀನು; ಕವಿಸು: ಆವರಿಸು, ಮುಸುಕು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಖಡುಗ +ತೋಮರ +ಪರಶುಗಳ +ಕ
ಕ್ಕಡೆಯ +ಕುಂತದ +ಪಿಂಡಿವಾಳದ
ಕಡುಗಲಿಗಳ್+ಉರೆ +ಮಗ್ಗಿದರು+ ತಗ್ಗಿದುದು +ಯಮಲೋಕ
ಬಿಡದೆ +ನಾಯಕವಾಡಿ+ ಚೂಣಿಯ
ಹಿಡಿದು +ಕಾದಿತ್ +ಉಭಯ+ರಾಯರು
ದಡಿಯಕೈ+ಅವರಿಂದ +ಕವಿಸಿದರ್+ಅಂದು +ಸಬಳಿಗರ

ಅಚ್ಚರಿ:
(೧) ಆಯುಧಗಳ ಹೆಸರು – ಖಡುಗ, ತೋಮರ, ಪರಶು, ಕಕ್ಕಡಿ, ಕುಂತ, ಪಿಂಡಿವಾಳ
(೨) ಬಹಳ ಜನ ಸತ್ತರು ಎಂದು ಹೇಳಲು -ತಗ್ಗಿದುದು ಯಮಲೋಕ