ಪದ್ಯ ೩೬: ರಾಕ್ಷಸರು ಹೇಗೆ ಆಕ್ರಮಣ ಮಾಡಿದರು?

ತೋರು ತೋರಮರೇಂದ್ರನಾವೆಡೆ
ತೋರಿಸೈರಾವತವದೆತ್ತಲು
ತೊರಿಸುಚ್ಚೈಶ್ರವವನೆಲ್ಲಿಹರಗ್ನಿ ಯಮಗಿಮರು
ತೋರಿರೈ ಕೈಗುಣವನಸುರರ
ಗಾರುಗೆದರಿದ ಗರ್ವಿತರ ಮೈ
ದೋರ ಹೇಳಾ ಕಾಣಬಹುದೆನುತುರುಬಿದರು ಭಟರು (ಅರಣ್ಯ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ತೋರಿಸು ತೋರಿಸು ಇಂದ್ರನೆಲ್ಲಿದ್ದಾನೆ ತೋರಿಸು, ಇಂದ್ರನ ಆನೆ ಐರಾವತ, ಕುದುರೆ ಉಚ್ಚೈಶ್ರವಸುವುಗಳು ಎಲ್ಲಿವೆ ಎಂದು ತೋರಿಸು, ಅಗ್ನಿ, ಯಮಗಿಮರೆಲ್ಲಾ ಎಲ್ಲಿದ್ದಾರೆ ಸ್ವಲ್ಪ ತೋರಿಸು, ವೀರರೆ ನಿಮ್ಮ ಕೈ ಚಳಕವನ್ನು ತೋರಿಸಿರಿ, ರಾಕ್ಷಸರನ್ನು ಕೆಣಕಿದ ಆ ಹೀನ ದೇವತೆಗಳನ್ನು ಎದುರಿಗೆ ಕರೆ. ಆಗ ಅವರು ನಮ್ಮ ಕೈಯನ್ನು ನೋಡಬಹುದು ಎಂದು ರಾಕ್ಷಸರು ಮೇಲೆ ಬಿದ್ದರು.

ಅರ್ಥ:
ತೋರು: ಪ್ರದರ್ಶಿಸು; ಅಮರೇಂದ್ರ: ಇಂದ್ರ; ಐರಾವತ: ಇಂದ್ರನ ಆನೆ; ಉಚ್ಚೈಶ್ರವ: ಇಂದ್ರನ ಕುದುರೆ; ಅಗ್ನಿ: ಬೆಂಕಿ; ಕೈಗುಣ: ಹಸ್ತ ಚಳಕ; ಅಸುರ: ರಾಕ್ಷಸ; ಕೆದರು: ಹರಡು, ಚದರಿಸು; ಗರ್ವ: ಸೊಕ್ಕು; ಮೈ: ತನು; ಹೇಳು: ತಿಳಿಸು; ಕಾಣು: ತೋರು; ಉರುಬು: ಅತಿಶಯವಾದ ವೇಗ; ಭಟ: ರಾಕ್ಷಸ;

ಪದವಿಂಗಡಣೆ:
ತೋರು+ ತೋರ್+ಅಮರೇಂದ್ರನ್+ಆವೆಡೆ
ತೋರಿಸ್+ಐರಾವತವದ್+ಎತ್ತಲು
ತೊರಿಸ್+ಉಚ್ಚೈಶ್ರವವನ್+ಎಲ್ಲಿಹರ್+ಅಗ್ನಿ+ ಯಮಗಿಮರು
ತೋರಿರೈ +ಕೈಗುಣವನ್+ಅಸುರರಗ್
ಆರು+ಕೆದರಿದ +ಗರ್ವಿತರ+ ಮೈ
ತೋರ +ಹೇಳಾ +ಕಾಣಬಹುದ್+ಎನುತ್+ಉರುಬಿದರು +ಭಟರು

ಅಚ್ಚರಿ:
(೧) ಆಡು ಭಾಷೆಯ ಪ್ರಯೋಗ – ಯಮಗಿಮರು