ಪದ್ಯ ೧೪: ಧರ್ಮಜನು ಕೃಷ್ಣನಿಗೆ ಏನು ಹೇಳಿದ?

ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆದನವಂಗೆ ತುಸುವ
ಲ್ಲಾ ವಿರಿಂಚಾದ್ಯಮರ ಪದವಿದು ನಿಗಮಸಿದ್ಧವಲೆ
ನಾವು ಸಾಕ್ಷಾದ್ಯಜ್ಞಮೂರ್ತಿ ಸು
ಧಾವಸೇಚನ ಧೂತ ಕಲ್ಬಿಷ
ಭಾವರರಿದೇ ಬೊಪ್ಪನವರಿಗೆ ಶಕ್ರಪದವೆಂದ (ಸಭಾ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮಜನು ಶ್ರೀಕೃಷ್ಣನಿಗೆ, ದೇವ ನಿಮ್ಮ ಪಾದಕಮಲಗಳನ್ನು ನೆನೆಯುವವರು ಬ್ರಹ್ಮನೇ ಮೊದಲಾದ ದೇವತೆಗಳ ಪದವಿಯನ್ನು ಪಡೆಯುವುದು ಬಹು ಸುಲಭ. ನಾವಾದರೋ ಸಾಕ್ಷಾತ್ ಯಜ್ಞಮೂರ್ತಿಯಾದ ನಿನ್ನ ಕರುಣೆಯೆಂಬ ಅಮೃತದಿಂದ ನೆನೆದು ಪಾಪವನ್ನು ಕಳೆದುಕೊಂಡವರು. ನಮ್ಮ ತಂದೆಗೆ ಇಂದ್ರಲೋಕವಉ ಸಿಕ್ಕದ್ದು ದೊಡ್ಡದೇನೂ ಅಲ್ಲ ಎಂದು ಧರ್ಮಜನು ಹೇಳಿದನು.

ಅರ್ಥ:
ದೇವ: ಭಗವಂತ; ಅಂಘ್ರಿ: ಪಾದ; ಕಮಲ: ಪದ್ಮ; ನೆನೆ: ಮನನ, ಜ್ಞಾಪಿಸು; ತುಸು: ಸ್ವಲ್ಪ; ವಿರಿಂಚಿ: ಬ್ರಹ್ಮ; ಆದಿ: ಮುಂತಾದ; ಪದ: ಪದವಿ, ಸ್ಥಾನ; ನಿಗಮ: ಶೃತಿ; ಸಿದ್ಧ: ಸಾಧಿಸಿದವನು; ಸಾಕ್ಷ್ಯ: ಸಾಕ್ಷಿ, ರುಜುವಾತು, ಪುರಾವೆ; ಆದಿ: ಮೂಲ; ಯಜ್ಞ: ಕ್ರತು, ಅಧ್ವರ; ಸುಧಾ: ಅಮೃತ; ಸೇಚನೆ: ಚಿಮುಕಿಸುವಿಕೆ; ಧೂತ:ನಿರ್ಧೂತ; ಕಿಲ್ಭಿಷ: ಕಳಂಕ, ಪಾಪ; ಭಾವ: ಮನೋಧರ್ಮ, ಭಾವನೆ; ಅರಿ: ತಿಳಿ; ಬೊಪ್ಪ: ಒಡೆಯ, ಸ್ವಾಮಿ; ಶಕ್ರ: ಇಂದ್ರ;

ಪದವಿಂಗಡಣೆ:
ದೇವ+ ನಿಮ್ಮಡಿ+ಅಂಘ್ರಿ +ಕಮಲವನ್
ಆವ +ನೆನೆದನ್+ಅವಂಗೆ +ತುಸುವಲ್
ಆ +ವಿರಿಂಚ+ಆದಿ+ಅಮರ+ ಪದವಿದು+ ನಿಗಮ+ಸಿದ್ಧವಲೆ
ನಾವು +ಸಾಕ್ಷ+ಆದಿ+ಯಜ್ಞಮೂರ್ತಿ +ಸು
ಧಾವ+ಸೇಚನ+ ಧೂತ +ಕಲ್ಬಿಷ
ಭಾವರರಿದೇ +ಬೊಪ್ಪನವರಿಗೆ +ಶಕ್ರ+ಪದವೆಂದ