ಪದ್ಯ ೫೯: ಭೀಮನು ಹೇಗೆ ಹಿಂದಿರುಗಿದನು?

ತಿರಿದು ತಾವರೆವನವ ಕಕ್ಷದೊ
ಳಿರುಕಿ ಗದೆಯನು ಕೊಂಡು ಸರಸಿಯ
ಹೊರವಳಯದಲಿ ನಿಮ್ದು ಕಾಹಿನ ಯಕ್ಷರಾಕ್ಷಸರ
ಒರಲಿ ಕರೆದನು ನಿಮ್ಮ ಕೊಳನಿದೆ
ಬರಿದೆ ದೂರದಿರೆಮ್ಮನೆನುತಾ
ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ (ಅರಣ್ಯ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ತಾವರೆಯ ವನದಲ್ಲಿ ತನಗಿಷ್ಟ ಬಂದಷ್ಟನ್ನು ತೆಗೆದುಕೊಂಡು ಕಂಕುಳಿನಲ್ಲಿಟ್ಟುಕೊಂಡು, ಗದೆಯನ್ನು ತೆಗೆದುಕೊಂಡು ಸರೋವರದ ಹೊರಕ್ಕೆ ಬಂದು, ಕಾವಲಿದ್ದ ಯಕ್ಷರಾಕ್ಷಸರಿಗೆ ಭೀಮನು, ಇದೋ ನಿಮ್ಮ ಸರೋವರವು ಹಾಗೇ ಇದೆ, ನಮ್ಮನ್ನು ವೃಥಾ ದೂರಬೇಡಿ ಎಂದು ಹೇಳಿ ಹಿತದ ಮಾತನ್ನು ನುಡಿದು ಸಂತೋಷದಿಂದ ಹಿಂದಿರುಗಿ ಹೊರಟನು.

ಅರ್ಥ:
ತಿರಿ: ಸುತ್ತಾಡು, ತಿರುಗಾಡು; ತಾವರೆ: ಕಮಲ; ವನ: ಕಾಡು; ಕಕ್ಷ: ಕಂಕಳು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಗದೆ: ಮುದ್ಗರ; ಸರಸಿ: ಸರೋವರ; ಹೊರವಳಯ: ಆಚೆ, ಹೊರಭಾಗ; ಕಾಹು: ಸಂರಕ್ಷಣೆ; ಒರಲು: ಅರಚು, ಕೂಗಿಕೊಳ್ಳು; ಕರೆ: ಬರೆಮಾಡು; ಕೊಳ: ಸರೋವರ; ದೂರ: ಆಚೆ; ಸರಿ: ಮಳೆ; ಮಾತು: ವಾಣಿ; ನಲವು: ಸಂತೋಷ; ಮರಳು: ಹಿಂದಿರುಗು; ಕಲಿ: ಶೂರ;

ಪದವಿಂಗಡಣೆ:
ತಿರಿದು +ತಾವರೆ+ವನವ +ಕಕ್ಷದೊಳ್
ಇರುಕಿ +ಗದೆಯನು +ಕೊಂಡು +ಸರಸಿಯ
ಹೊರವಳಯದಲಿ+ ನಿಂದು+ ಕಾಹಿನ +ಯಕ್ಷ+ರಾಕ್ಷಸರ
ಒರಲಿ+ ಕರೆದನು+ ನಿಮ್ಮ +ಕೊಳನಿದೆ
ಬರಿದೆ +ದೂರದಿರ್+ಎಮ್ಮನ್+ ಎನುತಾ
ಸರಿನ+ ಮಾತಿನ +ನಲವಿನಲಿ +ಮರಳಿದನು +ಕಲಿ+ಭೀಮ

ಅಚ್ಚರಿ:
(೧) ಭೀಮನು ಹಿಂದಿರುಗಿದ ಪರಿ – ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ