ಎಲವೊ ನೆರೆ ಗಂಡಹೆ ಕಣಾ ನೀ
ಮಲೆತು ನಿಂದುದು ಸಾಲದೇ ಸುರ
ರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು
ಕಲಿತನಕೆ ಮೆಚ್ಚಿದೆನು ಸತ್ತರೆ
ಮೊಳೆಯದಿಹುದೇ ಕೀರ್ತಿ ರಿಪುಬಲ
ದೊಳಗೆ ದಿಟ್ಟನು ಕರ್ಣ ನೀನೆನುತಸುರ ಮಾರಾಂತ (ದ್ರೋಣ ಪರ್ವ, ೧೬ ಸಂಧಿ, ೩೨ ಪದ್ಯ)
ತಾತ್ಪರ್ಯ:
ಎಲೋ ಕರ್ಣ, ನೀಣು ಭಾರೀ ಗಂಡಸು. ನನ್ನನ್ನು ಎದುರಿಸಿ ನಿಂತದ್ದೇ ಸಾಕು, ಮಹಾಪರಾಕ್ರಮಿಗಳಾದ ದೇವತೆಗಳನ್ನೂ ಸೀಳಿಹಾಕಬಲ್ಲೆ. ಮನುಷ್ಯರ ಪಾಡೇನು? ನಿನ್ನ ಪರಾಕ್ರಮಕ್ಕೆ ಮೆಚ್ಚಿದೆ, ಯುದ್ಧದಲ್ಲಿ ಸತ್ತರೂ ಕೀರ್ತಿ ಬರುತ್ತದೆ. ವೈರಿಸೈನ್ಯದಲ್ಲಿ ನೀನು ದಿಟ್ಟ ಎಂದು ಇದಿರಾದನು.
ಅರ್ಥ:
ನೆರೆ: ಗುಂಪು; ಗಂಡು: ಗಂಡಸು, ಪರಾಕ್ರಮಿ; ಮಲೆ: ಉದ್ಧಟತನದಿಂದ ಕೂಡಿರು; ಸುರ: ದೇವತೆ; ಸಿತಗ: ಕಾಮುಕ, ಜಾರ; ಸೀಳು: ಚೂರು, ತುಂಡು; ಮಾನವ: ನರ; ಪಾಡು: ರೀತಿ, ಬಗೆ; ಕಲಿ: ಶೂರ; ಮೆಚ್ಚು: ಒಲುಮೆ, ಪ್ರೀತಿ; ಸತ್ತರೆ: ಮರಣ ಹೊಂದಿದರೆ; ಮೊಳೆ: ಚಿಗುರು, ಅಂಕುರಿಸು; ಕೀರ್ತಿ: ಖ್ಯಾತಿ; ರಿಪು: ವೈರಿ; ದಿಟ್ಟ: ಧೈರ್ಯಶಾಲಿ; ಅಸುರ: ರಾಕ್ಷಸ; ಮಾರಾಂತು: ಎದುರಾಗಿ, ಯುದ್ಧಕ್ಕೆ ನಿಂತು;
ಪದವಿಂಗಡಣೆ:
ಎಲವೊ +ನೆರೆ +ಗಂಡಹೆ +ಕಣಾ +ನೀ
ಮಲೆತು +ನಿಂದುದು +ಸಾಲದೇ +ಸುರ
ರೊಳಗೆ +ಸಿತಗರ +ಸೀಳುವೆನು +ಮಾನವರ +ಪಾಡೇನು
ಕಲಿತನಕೆ +ಮೆಚ್ಚಿದೆನು +ಸತ್ತರೆ
ಮೊಳೆಯದಿಹುದೇ +ಕೀರ್ತಿ +ರಿಪುಬಲ
ದೊಳಗೆ +ದಿಟ್ಟನು +ಕರ್ಣ +ನೀನೆನುತ್+ಅಸುರ +ಮಾರಾಂತ
ಅಚ್ಚರಿ:
(೧) ಘಟೋತ್ಕಚನ ಹಿರಿಮೆ – ಸುರರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು