ಪದ್ಯ ೨೩: ಭೀಷ್ಮರಿಗೆ ಕೃಷ್ಣನು ಏನು ಹೇಳಿದನು?

ಮನ್ನಿಸುವಡೀ ಉಭಯರಾಯರು
ನಿನ್ನ ಮೊಮ್ಮಂದಿರುಗಳದರೊಳು
ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು
ನಿನ್ನನೇ ನಂಬಿಹರು ನೀನೇ
ಮುನ್ನ ಶಿಶುತನದಲ್ಲಿ ಸಲಹಿದೆ
ಮನ್ನಣೆಯ ನೀ ಬಲ್ಲೆಯೆಂದನು ದಾನವಧ್ವಂಸಿ (ಭೀಷ್ಮ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ಕೌರವ ಪಾಂಡವರಿಬ್ಬರೂ ನಿನ್ನ ಮೊಮ್ಮಕ್ಕಳು. ಇವರಲ್ಲಿ ಪಾಂಡವರ ಜೀವನ ನಿನ್ನ ಕುಣಿಕೆಯಲ್ಲಿದೆ. ಅವರು ನಿನ್ನನ್ನೇ ನಂಬಿದ್ದಾರೆ, ಬಾಲ್ಯದಲ್ಲಿ ನೀನೇ ಅವರನ್ನು ಬೆಳೆಸಿದೆ, ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ನೀನೇ ಬಲ್ಲೆ, ಎಂದು ಭೀಷ್ಮನಿಗೆ ಕೃಷ್ಣನು ಹೇಳಿದನು.

ಅರ್ಥ:
ಮನ್ನಿಸು: ಗೌರವಿಸು; ಉಭಯ: ಎರಡು; ರಾಯ: ರಾಜ; ಮೊಮ್ಮಂದಿರು: ಮೊಮ್ಮಕ್ಕಳು; ಕುಣಿಕೆ: ಕೊನೆ, ತುದಿ; ಸುತ: ಮಕ್ಕಳು; ಜೀವನ: ಬದುಕು; ನಂಬು: ವಿಶ್ವಾಸವಿಡು; ಮುನ್ನ; ಮೊದಲು; ಶಿಶು: ಮಗು; ಸಲಹು: ಪೋಷಿಸು, ರಕ್ಷಿಸು; ಮನ್ನಣೆ: ಮರ್ಯಾದೆ; ಬಲ್ಲೆ: ತಿಳಿ; ದಾನವ: ರಾಕ್ಷಸ; ಧ್ವಂಸಿ: ಸಂಹಾರ ಮಾಡುವವ;

ಪದವಿಂಗಡಣೆ:
ಮನ್ನಿಸುವಡ್+ಈ+ ಉಭಯ+ರಾಯರು
ನಿನ್ನ +ಮೊಮ್ಮಂದಿರುಗಳ್+ಅದರೊಳು
ನಿನ್ನ +ಕುಣಿಕೆಯೊಳ್+ಇಹುದು+ ಕುಂತೀಸುತರ +ಜೀವನವು
ನಿನ್ನನೇ +ನಂಬಿಹರು +ನೀನೇ
ಮುನ್ನ +ಶಿಶುತನದಲ್ಲಿ+ ಸಲಹಿದೆ
ಮನ್ನಣೆಯ +ನೀ +ಬಲ್ಲೆಯೆಂದನು +ದಾನವ+ಧ್ವಂಸಿ

ಅಚ್ಚರಿ:
(೧) ಭೀಷ್ಮರನ್ನು ಭಾವನಾತ್ಮಕವಾಗಿ ಮರುಕಗೊಳಿಸುವ ಪರಿ – ನಿನ್ನ ಮೊಮ್ಮಂದಿರು, ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು, ನಿನ್ನನೇ ನಂಬಿಹರು, ನೀನೇ ಮುನ್ನ ಶಿಶುತನದಲ್ಲಿ ಸಲಹಿದೆ

ಪದ್ಯ ೭: ಕೃಷ್ಣನು ಭೀಷ್ಮರಿಗೆ ಏನು ಹೇಳಿದ?

ದೂತರನು ಕಟ್ತುವುದು ರಾಯರಿ
ಗೇತರುಚಿತವು ನಮ್ಮ ಬಿಗಿಯಲು
ಕಾತರಿಸುತಿದೆ ನಿನ್ನ ಮೊಮ್ಮಂದಿರನು ನೀ ಕರೆಸಿ
ಮಾತನಾಡಿಸಿ ನೋಡು ನಮಗಾ
ಭೀತಿ ತಾನಿಲ್ಲೆನಲು ಗಂಗಾ
ಜಾತ ಧೃತರಾಷ್ಟ್ರನಿಗೆ ನುಡಿದನು ಕೌರವನ ಹದನ (ಉದ್ಯೋಗ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಭೀಷ್ಮರನ್ನುದ್ದೇಶಿಸಿ, “ದೂತರನ್ನು ಕಟ್ಟುವುದು ರಾಜರಿಗೆ ಉಚಿತವೇ? ನಿನ್ನ ಮೊಮ್ಮಕ್ಕಳು ನನ್ನನ್ನು ಕಟ್ಟುತ್ತಾರಂತೆ ನನಗೆ ಆ ಭೀತಿಯಿಲ್ಲ ಅವರಿಗೆ ಹೇಳಿನೋಡು” ಎನ್ನಲು ಭೀಷ್ಮ ಧೃತರಾಷ್ಟ್ರನಿಗೆ ಹೀಗೆ ಹೇಳಿದ.

ಅರ್ಥ:
ದೂತ: ರಾಯಭಾರಿ; ಕಟ್ಟು: ಬಂಧಿಸು; ರಾಯ: ರಾಜ; ಏತ: ಯಾವ; ಉಚಿತ: ಸರಿಯಾದ ಕ್ರಮ; ಬಿಗಿ: ಕಟ್ಟು; ಕಾತರ: ಉತ್ಸುಕತೆ; ಮೊಮ್ಮಂದಿರು: ಮೊಮ್ಮಕ್ಕಳು; ಕರೆಸು: ಬರೆಮಾಡು; ಭೀತಿ: ಭಯ; ಜಾತ: ಹುಟ್ಟಿದ; ಹದನ: ಔಚಿತ್ಯ, ರೀತಿ;

ಪದವಿಂಗಡಣೆ:
ದೂತರನು +ಕಟ್ತುವುದು +ರಾಯರಿಗ್
ಏತರ್+ಉಚಿತವು+ ನಮ್ಮ +ಬಿಗಿಯಲು
ಕಾತರಿಸುತಿದೆ +ನಿನ್ನ +ಮೊಮ್ಮಂದಿರನು +ನೀ +ಕರೆಸಿ
ಮಾತನಾಡಿಸಿ+ ನೋಡು +ನಮಗಾ
ಭೀತಿ +ತಾನಿಲ್ಲ+ಎನಲು +ಗಂಗಾ
ಜಾತ +ಧೃತರಾಷ್ಟ್ರನಿಗೆ+ ನುಡಿದನು +ಕೌರವನ+ ಹದನ

ಅಚ್ಚರಿ:
(೧) ಭೀಷ್ಮರನ್ನು ಗಂಗಾಜಾತ ಎಂದು ಕರೆದಿರುವುದು
(೨) ಕೃಷ್ಣನ ಕಾಳಜಿ – ನಿನ್ನ ಮೊಮ್ಮಂದಿರನು ನೀ ಕರೆಸಿ ಮಾತನಾಡಿಸಿ ನೋಡು