ಪದ್ಯ ೧೭: ಧರ್ಮಜನು ಸುಯೋಧನನನ್ನು ಹೇಗೆ ಹಂಗಿಸಿದನು?

ಹೇಳಿದರಲಾ ಭೀಷ್ಮವಿದುರರು
ಮೇಲುದಾಯದ ತಾಗುಥಟ್ಟನು
ಕೇಳದಖಿಳಾಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ
ಕಾಳೆಗದೊಳೊಟ್ಟೈಸಿ ನೀರೊಳು
ಬೀಳುವುದು ನಿನಗಾರು ಬುದ್ಧಿಯ
ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ (ಗದಾ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಷ್ಮ, ವಿದುರರು ಮುಂದೇನಾದೀತೆಂಬ ಲೆಕ್ಕವನ್ನು ನಿನಗೆ ಅಂದೇ ಹೇಳಿದರು. ಅದನ್ನು ಕೇಳದೆ ಲೋಕದ ಅಕ್ಷೋಹಿಣಿಯ ಅಧಿಪತಿಗಳಾದ ಕ್ಷತ್ರಿಯರನ್ನು ಯುದ್ಧದಲ್ಲಿ ಕಡಿದೊಟ್ಟಿಸಿ, ನೀರಿನಲ್ಲಿ ಬಿದ್ದು ಮುಳುಗುವುದನ್ನು ಯಾರು ಹೇಳಿಕೊಟ್ಟರ? ಮಾತಾಡು ಮಾತಾಡು ಎಂದು ಧರ್ಮಜನು ಸುಯೋಧನನಿಗೆ ಹೇಳಿದನು.

ಅರ್ಥ:
ಹೇಳು: ತಿಳಿಸು; ಮೇಲುದಾಯ: ಮುಂದಾಗುವ; ತಾಗುಥಟ್ಟು: ಎದುರಿಸುವ ಸೈನ್ಯ; ಕೇಳು: ಆಲಿಸು; ಅಖಿಳ: ಎಲ್ಲಾ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ತಡೆ: ನಿಲ್ಲಿಸು; ಕಾಳೆಗ: ಯುದ್ಧ; ಒಟ್ಟೈಸು: ಕೂಡಿಸು; ನೀರು: ಜಲ; ಬೀಳು: ಎರಗು; ಬುದ್ಧಿ: ತಿಳುವಳಿಕೆ; ನುಡಿ: ಮಾತಾದು; ಭೂಪ: ರಾಜ;

ಪದವಿಂಗಡಣೆ:
ಹೇಳಿದರಲ್+ಆ+ ಭೀಷ್ಮ+ವಿದುರರು
ಮೇಲುದಾಯದ +ತಾಗುಥಟ್ಟನು
ಕೇಳದ್+ಅಖಿಳ+ಅಕ್ಷೋಹಿಣಿಯ +ಕ್ಷತ್ರಿಯರ +ತಡೆಗಡಿಸಿ
ಕಾಳೆಗದೊಳ್+ಒಟ್ಟೈಸಿ +ನೀರೊಳು
ಬೀಳುವುದು +ನಿನಗಾರು +ಬುದ್ಧಿಯ
ಹೇಳಿದರು+ ನುಡಿ+ ನುಡಿ +ಸುಯೋಧನ+ ಎಂದನಾ +ಭೂಪ

ಅಚ್ಚರಿ:
(೧) ಹೇಳಿ – ೧, ೬ ಸಾಲಿನ ಮೊದಲ ಪದ