ಆಲವಟ್ಟದ ಗಾಳಿಯಲಿ ಮೇ
ಘಾಳಿ ಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ (ದ್ರೋಣ ಪರ್ವ, ೧ ಸಂಧಿ, ೨೯ ಪದ್ಯ)
ತಾತ್ಪರ್ಯ:
ಬಟ್ಟೆಯ ಬೀಸಣಿಕೆಯಿಂದ ಬೀಸಿದರೆ ಕಾರ್ಮೋಡಗಳು ಹಾರಿ ಹೋದಾವೇ? ಮಿಂಚುಹುಳದ ಬೆಳಕಿಗೆ ಕತ್ತಲೆ ಸೋತೀತೇ? ಸೀಸದ ಉಳಿಯಿಂದ ಬೆಟ್ಟವನ್ನು ಕತ್ತರಿಸಲು ಸಾಧ್ಯವೇ ಶ್ರೀಕೃಷ್ಣನು ಒಲಿದ ಮನುಷ್ಯರ ಮೇಲೆ ಉಳಿದವರು ಸಿಟ್ಟಾಗಿ ಏನು ಮಾಡಲು ಸಾಧ್ಯ? ಭೀಷ್ಮ ಇದ್ ನಾವಿರುವ ಸ್ಥಿತಿ ಎಂದು ಕರ್ಣನು ಹೇಳಿದನು.
ಅರ್ಥ:
ಆಲವಟ್ಟ: ಬಟ್ಟೆಯಿಂದ ಮಾಡಿದ ಬೀಸಣಿಕೆ; ಗಾಳಿ: ವಾಯು; ಮೇಘಾಳಿ: ಮೋಡಗಳ ಸಮೂಹ; ಮುರಿ: ಸೀಳು; ಮಿಂಚು: ಹೊಳಪು, ಕಾಂತಿ; ಬುಳು: ಹುಳು; ಸೋಲು: ಪರಾಭವ; ಕತ್ತಲೆ: ಅಂಧಕಾರ; ಕಟಕ: ಗುಂಪು; ಜೀಯ: ಒಡೆಯ; ಚಿತ್ತೈಸು: ಗಮನವಿಡು; ಸೀಳು: ಚೂರು, ತುಂಡು; ಸೀಸ: ತಲೆ, ಶಿರ; ಉಳಿ: ಲೋಹವನ್ನು ಕತ್ತರಿಸಲು ಉಪಯೋಗಿಸುವ ಒಂದು ಉಪಕರಣ; ಶೈಲ: ಬೆಟ್ಟ; ಹರಿ: ಸೀಳು; ಒಲಿ: ಒಪ್ಪು; ಮನುಜ: ಮನುಷ್ಯ; ಮುನಿ: ಕೋಪ; ಏಗು: ಸಾಗಿಸು, ನಿಭಾಯಿಸು; ಕೆಲ: ಸ್ವಲ್ಪ; ಹೇಳು: ತಿಳಿಸು;
ಪದವಿಂಗಡಣೆ:
ಆಲವಟ್ಟದ+ ಗಾಳಿಯಲಿ +ಮೇ
ಘಾಳಿ +ಮುರಿವುದೆ +ಮಿಂಚುಬುಳುವಿಗೆ
ಸೋಲುವುದೆ +ಕತ್ತಲೆಯ +ಕಟಕವು +ಜೀಯ +ಚಿತ್ತೈಸು
ಸೀಳಬಹುದೇ +ಸೀಸದ್+ಉಳಿಯಲಿ
ಶೈಲವನು +ಹರಿಯೊಲಿದ+ ಮನುಜರ
ಮೇಲೆ +ಮುನಿದ್+ಏಗುವರು +ಕೆಲಬರು +ಭೀಷ್ಮ +ಹೇಳೆಂದ
ಅಚ್ಚರಿ:
(೧) ಉಪಮಾನದ ಪ್ರಯೋಗ – ಆಲವಟ್ಟದ ಗಾಳಿಯಲಿ ಮೇಘಾಳಿ ಮುರಿವುದೆ; ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು; ಸೀಳಬಹುದೇ ಸೀಸದುಳಿಯಲಿ ಶೈಲವನು