ಸುರರು ಕೊಂಡಾಡಿದರು ಸುರಮುನಿ
ವರರ ಪರಮಾಶೀರ್ವಚೋ ವಿ
ಸ್ತರಕೆ ಫಲವಿದೆಲಾ ಭವತ್ಕರುಣಾಂಬಕಾಲೋಕ
ಅರಿಸುಭಟ ಸಂತೋಷಮಯ ಸಾ
ಗರವ ಸುರಿಯವೆ ಸರಳು ವಡಬ
ಸ್ಫುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ (ಅರಣ್ಯ ಪರ್ವ, ೧೩ ಸಂಧಿ, ೬೦ ಪದ್ಯ)
ತಾತ್ಪರ್ಯ:
ದೇವತೆಗಳು ನನ್ನ ವಿಜಯವನ್ನು ಕೊಂಡಾಡಿದರು, ದೇವರ್ಷಿಗಳು ನನ್ನನ್ನು ಆಶೀರ್ವದಿಸಿದರು, ನಿಮ್ಮ ಕರುಣ ಕಟಾಕ್ಷಗಳ ಬಲದಿಂದ ಶತ್ರುಗಳ ಸಂತೋಷ ಸಾಗರವನ್ನು ನನ್ನ ಬಾಣಗಳು ವಡಬಾಗ್ನಿಯಂತೆ ಕರಿನಾಲಗೆಯಿಂದ ಕುಡಿದು ಹಾಕದೆ ಬಿದುವುದೇ? ಎಂದು ಅರ್ಜುನನು ಯುಧಿಷ್ಠಿರನಿಗೆ ಹೇಳಿದನು.
ಅರ್ಥ:
ಸುರ: ದೇವತೆ; ಕೊಂಡಾಡು: ಹೊಗಳು; ಸುರಮುನಿ: ದೇವರ್ಷಿ; ಆಶೀರ್ವಾದ: ಹರಕೆ, ಶುಭನುಡಿ; ವಿಸ್ತರ; ಹರಹು; ಫಲ: ಪ್ರಯೋಜನ; ಭವತ್: ನಿಮ್ಮ; ಕರುಣ: ದಯೆ; ಅಂಬಕ: ಕಣ್ಣು; ಆಲೋಕ: ನೋಟ; ಅರಿ: ವೈರಿ; ಸುಭಟ: ಸೈನಿಕ; ಸಂತೋಷ: ಹರ್ಷ; ಸಾಗರ: ಸಮುದ್ರ; ಸುರಿ: ವರ್ಷಿಸು; ಸರಳು: ಬಾಣ; ವಡಬ: ಸಮುದ್ರದಲ್ಲಿರುವ ಬೆಂಕಿ; ಸ್ಫುರಣ: ಹೊಳಪು; ಮೇಘ: ಮೋಡ; ಜ್ವಾಲೆ: ಬೆಂಕಿ; ಜಾಲ: ಬಲೆ; ಕರಾಳ: ಭಯಂಕರ; ಜಿಹ್ವೆ: ನಾಲಗೆ;
ಪದವಿಂಗಡಣೆ:
ಸುರರು +ಕೊಂಡಾಡಿದರು+ ಸುರಮುನಿ
ವರರ +ಪರಮ+ಆಶೀರ್ವಚೋ+ ವಿ
ಸ್ತರಕೆ+ ಫಲವಿದೆಲಾ+ ಭವತ್+ಕರುಣಾಂಬಕ+ಆಲೋಕ
ಅರಿ+ಸುಭಟ+ ಸಂತೋಷಮಯ +ಸಾ
ಗರವ+ ಸುರಿಯವೆ+ ಸರಳು+ ವಡಬ
ಸ್ಫುರಣ+ ಮೇಘಜ್ವಾಲೆ +ಜಾಲ +ಕರಾಳ +ಜಿಹ್ವೆಯಲಿ
ಅಚ್ಚರಿ:
(೧) ಶತ್ರುಗಳ ನಾಶವಾದರು ಎಂದು ಹೇಳುವ ಪರಿ – ಅರಿಸುಭಟ ಸಂತೋಷಮಯ ಸಾ
ಗರವ ಸುರಿಯವೆ ಸರಳು ವಡಬಸ್ಫುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ