ಪದ್ಯ ೩೧: ಭೀಮನು ಹೇಗೆ ಗಾಯಗೊಂಡನು?

ಸುಳಿದು ಹರಿ ಮೇಖಲೆಯ ಮೋಹರ
ದೊಳಗೆ ಮುಗ್ಗಿದಿರೈ ಮಹಾ ಮಂ
ಡಳಿಕರಿರ ಫಡ ಹೋಗಿರೈ ನೀವೆನುತ ಖಾತಿಯಲಿ
ಬಿಲುದುಡುಕಿ ಪವಮಾನ ನಂದನ
ನಳವಿಗೊಟ್ಟನು ಹೂಣೆ ಹೊಕ್ಕರಿ
ಬಲವನಿರಿದನು ಘಾಯವಡೆದನು ಘೋರ ಸಮರದಲಿ (ದ್ರೋಣ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಎಲೈ ಮಾಂಡಲಿಕರೇ, ಇಂದ್ರಜಾಲದ ಈ ಸೈನ್ಯದಲ್ಲಿ ಸೊತು ಹಿಂದಿರುಗಿದಿರಲ್ಲವೇ? ನೀವು ಹೋಗಿರಿ ಎಂದು ಮೂದಲಿಸಿ ಭೀಮನು ಬಿಲ್ಲು ಹಿಡಿದು ಶತ್ರುಸೈನ್ಯದಲ್ಲಿ ನುಗ್ಗಿ ಹೊಡೆದು ಘೋರವಾದ ಯುದ್ಧದಲ್ಲಿ ಗಾಯಗೊಂಡನು.

ಅರ್ಥ:
ಸುಳಿ: ಕಾಣಿಸಿಕೊಳ್ಳು; ಹರಿ: ಕುದುರೆ ; ಮೇಖಲೆ: ಒಡ್ಯಾಣ; ಮೋಹರ: ಯುದ್ಧ; ಮುಗ್ಗು: ಬಾಗು, ಮಣಿ; ಮಂಡಳಿಕ: ಸಾಮಂತರಾಜ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಖಾತಿ: ಕೋಪ; ಬಿಲು: ಬಿಲ್ಲು; ತುಡುಕು: ಹೋರಾಡು, ಸೆಣಸು; ಪವಮಾನ: ವಾಯು; ನಂದನ: ಮಗ; ಅಳವು: ಶಕ್ತಿ, ಸಾಮರ್ಥ್ಯ; ಹೂಣೆ: ಸ್ಪರ್ಧೆ, ಪ್ರತಿಜ್ಞೆ; ಹೊಕ್ಕು: ಸೇರು; ಅರಿ: ವೈರಿ; ಬಲ: ಸೈನ್ಯ; ಇರಿ: ಚುಚ್ಚು; ಘಾಯ: ಪೆಟ್ಟು; ಘೋರ: ಉಗ್ರವಾದ; ಸಮರ: ಯುದ್ಧ;

ಪದವಿಂಗಡಣೆ:
ಸುಳಿದು +ಹರಿ +ಮೇಖಲೆಯ +ಮೋಹರ
ದೊಳಗೆ+ ಮುಗ್ಗಿದಿರೈ+ ಮಹಾ +ಮಂ
ಡಳಿಕರಿರ+ ಫಡ+ ಹೋಗಿರೈ +ನೀವೆನುತ +ಖಾತಿಯಲಿ
ಬಿಲು+ತುಡುಕಿ+ ಪವಮಾನ+ ನಂದನನ್
ಅಳವಿ+ಕೊಟ್ಟನು +ಹೂಣೆ +ಹೊಕ್ಕ್+ಅರಿ
ಬಲವನ್+ಇರಿದನು+ ಘಾಯವಡೆದನು +ಘೋರ +ಸಮರದಲಿ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮೇಖಲೆಯ ಮೋಹರದೊಳಗೆ ಮುಗ್ಗಿದಿರೈ ಮಹಾ ಮಂಡಳಿಕರಿರ

ಪದ್ಯ ೯: ವಟುಗಳೇಕೆ ಓಡಿದರು?

ರಾಯರೆಂಬುವರಿಲ್ಲಲಾ ಸ್ವಾ
ಧ್ಯಾಯ ಕೆಟ್ಟುದು ಮುಟ್ಟಿದರು ಪಾ
ಧ್ಯಾಯರನು ಶೂದ್ರೆಯರು ಸೆಳೆದರು ಮೌಂಜಿಮೇಖಲೆಯ
ಹಾಯಿದರು ಯಜ್ಞೋಪವೀತಕೆ
ಬಾಯಲೆಂಜಲಗಿಡಿಯ ಬಗೆದರ
ಲಾಯೆನುತ ಬಿಟ್ಟೋಡಿದರು ಸುಬ್ರಹ್ಮಚಾರಿಗಳು (ಅರಣ್ಯ ಪರ್ವ, ೧೯ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜರೆಂಬುವರು ಇಲ್ಲವಾದರು, ನಮ್ಮ ಸ್ವಾಧ್ಯಾಯ ಕೆಟ್ಟು ಹೋಯಿತು. ಶೂದ್ರಿಯರು ನಮ್ಮ ಉಪಾಧ್ಯಾಯರನ್ನು ಮುಟ್ಟಿದರು. ಉಡಿದಾರವನ್ನೆಳೆದರು. ಬಾಯಲ್ಲಿ ಎಂಜಲನ್ನು ಹಾಕಲು ಯತ್ನಿಸಿದರು ಎಂದು ಒರಲುತ್ತಾ ಬ್ರಹ್ಮಚಾರಿಗಳು ಓಡಿ ಹೋದರು.

ಅರ್ಥ:
ರಾಯ: ರಾಜ; ಸ್ವಾಧ್ಯಾಯ: ಸ್ವಂತ ಓದುವಿಕೆ; ಕೆಟ್ಟು: ಹಾಳು; ಮುಟ್ಟು: ತಗುಲು; ಉಪಾಧ್ಯಾಯ: ಗುರು; ಶೂದ್ರೆ: ಗಣಿಕೆ; ಸೆಳೆ: ಆಕರ್ಷಿಸು; ಮೌಂಜಿ: ಮುಂಜೆ ಹುಲ್ಲಿನಿಂದ ಮಾಡಿದ ಉಡಿದಾರ, ಕಟಿಸೂತ್ರ; ಮೇಖಲೆ: ಮಂಜೆಹುಲ್ಲಿನ ಉಡಿದಾರ, ನಡುಕಟ್ಟು; ಹಾಯಿ: ಮೇಲೆಬೀಳು, ಚಾಚು; ಯಜ್ಞೋಪವೀತ: ಜನಿವಾರ; ಎಂಜಲು: ಬಾಯಿಂದ ಹೊರಬರುವ ರಸ; ಬಗೆ:ಕ್ರಮ, ಉಪಾಯ; ಓಡು: ಧಾವಿಸು; ಬ್ರಹ್ಮಚಾರಿ: ವಟು;

ಪದವಿಂಗಡಣೆ:
ರಾಯರೆಂಬುವರ್+ಇಲ್ಲಲಾ +ಸ್ವಾ
ಧ್ಯಾಯ +ಕೆಟ್ಟುದು +ಮುಟ್ಟಿದರ್+ಉಪಾ
ಧ್ಯಾಯರನು +ಶೂದ್ರೆಯರು +ಸೆಳೆದರು +ಮೌಂಜಿ+ಮೇಖಲೆಯ
ಹಾಯಿದರು +ಯಜ್ಞೋಪವೀತಕೆ
ಬಾಯಲ್+ಎಂಜಲ+ಕಿಡಿಯ +ಬಗೆದರ
ಲಾ+ಎನುತ +ಬಿಟ್ಟೋಡಿದರು +ಸುಬ್ರಹ್ಮಚಾರಿಗಳು

ಅಚ್ಚರಿ:
(೧) ಮುತ್ತು ನೀಡಿದರು ಎಂದು ಹೇಳುವ ಪರಿ – ಬಾಯಲೆಂಜಲಗಿಡಿಯ ಬಗೆದರಲಾ