ಎಳನಗೆಯ ಬೆಳದಿಂಗಳನು ನೀ
ತಳೆದು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು
ಅಳಿಮನದ ಬಡತನವ ನಿನ್ನಯ
ಕಳಶ ಕುಚಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳೆಂದ (ವಿರಾಟ ಪರ್ವ, ೨ ಸಂಧಿ, ೨೪ ಪದ್ಯ)
ತಾತ್ಪರ್ಯ:
ಮೆಲುನಗೆಯ ಬೆಳದಿಂಗಳನ್ನು ಬೀರಿ ನನ್ನ ತಾಪವನ್ನು ಹೋಗಲಾಡಿಸು, ನನ್ನ ದಾಹವನ್ನು ಮೆಲುಮಾತಿನ ಅಮೃತದಿಂದ ಕಳೆ, ಬಯಸಿ ಅಳುಕಿರುವ ಮನಸ್ಸಿನ ಬಡತನವನ್ನು ಕಳಶೋಪಮವಾದ ಕುಚಲಕ್ಷ್ಮಿಯಿಂದ ಹೋಗಲಾಡಿಸು, ನಿನ್ನ ಒಲವನ್ನು ನನ್ನ ಕಡೆಗೆ ತಿರುಗಿಸು ಎಂದು ಕೀಚಕನು ಹೇಳಿದನು.
ಅರ್ಥ:
ಎಳನಗೆ: ಮಂದಸ್ಮಿತ; ಬೆಳದಿಂಗಳು: ಪೂರ್ಣ ಚಂದ್ರದ ದಿನ; ತಳೆ: ಪಡೆ, ಹೊಂದು; ತಾಪ: ಬಿಸಿ, ಸೆಕೆ; ಕೆಡಿಸು: ಹಾಳುಮಾಡು; ಮಧುರ: ಸಿಹಿ; ಮೆಲುನುಡಿ: ಮಧುರವಾದ ಮಾತು; ಸುಧೆ: ಅಮೃತ; ತೃಷ್ಣೆ: ನೀರಡಿಕೆ; ಅಕಟ: ಅಯ್ಯೋ; ಪರಿಹರಿಸು: ನಿವಾರಿಸು; ಅಳಿ: ನಾಶವಾಗು; ಮನ: ಮನಸ್ಸು; ಬಡತನ: ದಾರಿದ್ರ; ಕಳಶ: ಕುಂಭ; ಕುಚ: ಸ್ತನ; ಲಕ್ಷ್ಮಿ: ಐಶ್ವರ್ಯ; ಕಳೆ: ನಿವಾರಿಸು; ಒಲವು: ಪ್ರೀತಿ; ತಿದ್ದು: ಸರಿಪಡಿಸು; ಕಾಂತೆ: ಬಾಲೆ, ಚೆಲುವೆ; ಕೇಳು: ಆಲಿಸು;
ಪದವಿಂಗಡಣೆ:
ಎಳ+ನಗೆಯ +ಬೆಳದಿಂಗಳನು +ನೀ
ತಳೆದು +ತಾಪವ +ಕೆಡಿಸು +ಮಧುರದ
ಮೆಲುನುಡಿಯ +ಸುಧೆಯಿಂದ +ತೃಷ್ಣೆಯನ್+ಅಕಟ +ಪರಿಹರಿಸು
ಅಳಿಮನದ+ ಬಡತನವ+ ನಿನ್ನಯ
ಕಳಶ +ಕುಚಲಕ್ಷ್ಮಿಯಲಿ +ಕಳೆ +ಮನದ್
ಒಲವನಿತ್ತಲು +ತಿದ್ದಬೇಹುದು +ಕಾಂತೆ +ಕೇಳೆಂದ
ಅಚ್ಚರಿ:
(೧) ಉಪಮಾನದ ಪ್ರಯೋಗ – ಎಳನಗೆಯ ಬೆಳದಿಂಗಳನು ನೀತಳೆದು ತಾಪವ ಕೆಡಿಸು; ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು