ಪದ್ಯ ೨೯: ಭೀಮನು ಹೇಗೆ ಹೋರಾಡಿದನು?

ಮುರಿದು ಮರನನು ಭೀಮನಹಿತರ
ನೊರಸಿದನು ಮಲೆತಾನೆಗಳ ಹೊ
ಕ್ಕುರುಬಿದನು ತುರುಗಿದನು ಭಟ್ಟರಭ್ರದ ವಿಮಾನದಲಿ
ಜುರಿತಡಗಿನಿಂಡೆಗಳ ಮೆದುಳಿನ
ನಿರಿಗರುಳ ನೆಣವಸೆಗಳಲಿ ಜಿಗಿಯಲಿ
ಮೆರೆದುದಾಮರನಲ್ಲಿ ತಳಿತುದು ಹೂತುದೆಂಬಂತೆ (ಅರಣ್ಯ ಪರ್ವ, ೨೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ಮರವನ್ನು ಮುರಿದು ಶತ್ರು ಸೈನಿಕರನ್ನು ನಾಶ ಮಾಡಿದನು. ಎದುರಾದ ಆನೆಗಳನ್ನು ಬಡಿದು ಕೊಂದನು. ಶತ್ರುಗಳನ್ನು ದೇವತೆಗಳ ವಿಮಾನದಲ್ಲಿ ತುರುಕಿದನು. ಮಾಂಸದ ತುಂಡುಗಳು, ಮೆದುಳು ಕರುಳುಗಳ ವಸೆ, ಕೊಬ್ಬುಗಳು ಆ ಮರದಲ್ಲಿ ಹೂಬಿಟ್ಟಿತೆಂಬಂತೆ ಕಾಣುತ್ತಿತ್ತು.

ಅರ್ಥ:
ಮುರಿ: ಸೀಳು; ಮರ: ತರು; ಅಹಿತರ: ವೈರಿ; ಒರಸು: ನಾಶಮಾಡು; ಮಲೆತ: ಪ್ರತಿಭಟಿಸಿದ; ಆನೆ: ಗಜ; ಹೊಕ್ಕು: ಓತ; ಉರುಬು: ಅತಿಶಯವಾದ ವೇಗ; ತುರುಗು: ಸಂದಣಿ, ದಟ್ಟಣೆ; ಭಟ: ಸೈನಿಕ; ಅಭ್ರ: ಆಗಸ; ವಿಮಾನ: ಗಾಳಿಯಲ್ಲಿ ಹಾರುವ ವಾಹನ; ಮೆದುಳು: ಮಸ್ತಿಷ್ಕ; ಕರುಳು: ಪಚನಾಂಗ; ಮೆರೆ: ಪ್ರಕಾಶಿಸು; ಮರ: ತರು; ತಳಿತ: ಚಿಗುರು; ಹೂ: ಪುಷ್ಪ; ಅಡಗು: ಮಾಂಸ; ಆಮರ: ದೇವತೆ; ಇಂಡೆ: ಚೂರು, ತುಣುಕು; ಇರಿ: ಜಿನುಗು;

ಪದವಿಂಗಡಣೆ:
ಮುರಿದು+ ಮರನನು+ ಭೀಮನ್+ಅಹಿತರನ್
ಒರಸಿದನು+ ಮಲೆತ+ಆನೆಗಳ+ ಹೊಕ್ಕ್
ಉರುಬಿದನು+ ತುರುಗಿದನು +ಭಟ್ಟರ್+ಅಭ್ರದ+ ವಿಮಾನದಲಿ
ಜುರಿತ್+ಅಡಗಿನ್+ಇಂಡೆಗಳ+ ಮೆದುಳಿನನ್
ಇರಿ+ಕರುಳ +ನೆಣವಸೆಗಳಲಿ+ ಜಿಗಿಯಲಿ
ಮೆರೆದುದ್+ಅಮರನಲ್ಲಿ +ತಳಿತುದು +ಹೂತುದೆಂಬಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜುರಿತಡಗಿನಿಂಡೆಗಳ ಮೆದುಳಿನ ನಿರಿಗರುಳ ನೆಣವಸೆಗಳಲಿ ಜಿಗಿಯಲಿ ಮೆರೆದುದಾಮರನಲ್ಲಿ ತಳಿತುದು ಹೂತುದೆಂಬಂತೆ