ಪದ್ಯ ೩೬: ನಾರದರು ಕಂಪನನನ್ನು ಹೇಗೆ ಸಂತೈಸಿದರು?

ಆ ಮಹಾಮೃತ್ಯುವನು ಹುಟ್ಟಿಸಿ
ದಾ ಮಹಾದೇವಾದಿ ದೇವರು
ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು
ಭೂಮಿಪತಿ ನಿಜಸುತನ ಮೃತಿಯು
ದ್ದಾಮ ತಾಪವ ಕಳೆಯಬೇಕೆಂ
ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ (ದ್ರೋಣ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಆ ಮಹಾ ಮೃತ್ಯುವನ್ನು ಹುಟ್ಟಿಸಿದ ಮಹಾದೇವನೇ ಮೊದಲಾದವರು ಅವಳನ್ನು ಕಳುಹಿಸಿ ಕೊಡಲಾರರು. ನಿನ್ನ ಮಗನ ಮರಣದ ತಾಪವನ್ನು ಕಳೆದುಕೋ ಎಂದು ಹೇಳಿ ಕಂಪನನನ್ನು ಸಂತೈಸಿದನು.

ಅರ್ಥ:
ಮೃತ್ಯು: ಸಾವು; ಹುಟ್ಟು: ಜನಿಸು; ಆದಿ: ಮುಂತಾದ; ದೇವ: ಭಗವಂತ; ಕಾಮಿನಿ: ಹೆಣ್ಣು; ಕಳುಹು: ಕಳಿಸು; ಬೋಧಿಸು: ತಿಳಿಸು; ಭೂಮಿಪತಿ: ರಾಜ; ಸುತ: ಮಗ; ಮೃತಿ: ಸಾವು; ಉದ್ದಾಮ: ಶ್ರೇಷ್ಠ; ತಾಪ: ಬಿಸಿ, ಬೇನೆ; ಕಳೆ: ನಿವಾರಿಸು; ಮುನಿ: ಋಷಿ; ಸಂತವಿಡು: ಸಂತೈಸು; ಭೂಪತಿ: ರಾಜ;

ಪದವಿಂಗಡಣೆ:
ಆ +ಮಹಾ+ಮೃತ್ಯುವನು +ಹುಟ್ಟಿಸಿದ
ಆ+ ಮಹಾದೇವಾದಿ +ದೇವರು
ಕಾಮಿನಿಯ +ಕಳುಹಲ್ಕೆ+ ಬಾರದೆನುತ್ತ+ ಬೋಧಿಸಲು
ಭೂಮಿಪತಿ +ನಿಜಸುತನ +ಮೃತಿ+
ಉದ್ದಾಮ +ತಾಪವ+ ಕಳೆಯಬೇಕೆಂದ್
ಆ+ ಮುನೀಶ್ವರ +ಸಂತವಿಟ್ಟನು +ಕಂಪ+ಭೂಪತಿಯ

ಅಚ್ಚರಿ:
(೧) ಭೂಮಿಪತಿ, ಭೂಪತಿ – ಸಮಾನಾರ್ಥಕ ಪದ
(೨) ಮಹಾಮೃತ್ಯು, ಮಹಾದೇವ – ಮಹಾ ಪದದ ಬಳಕೆ

ಪದ್ಯ ೩: ದೂತರು ಕೀಚಕನ ವಧೆಯ ಬಗ್ಗೆ ಏನು ಹೇಳಿದರು?

ತಂದು ಹರಹಿದ ಕೀಚಕನ ಮೃತಿ
ಯಂದವನು ನೃಪ ಕೇಳಿ ದೂತಂ
ಗೆಂದ ಮಡುಹಿದ ವೀರನಾವನು ಮರ್ತ್ಯಜಾತಿಯಲಿ
ಇಂದುಮುಖಿಯನು ಕೆಣಕಲಾಗಲೆ
ಬಂದು ಗಂಧರ್ವಕರು ಕೀಚಕ
ವೃಂದವನು ಸವರಿದರು ಕೌರವರಾಯ ಚಿತ್ತೈಸು (ವಿರಾಟ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ದೂತರು ಕೀಚಕನ ವಧೆಯ ವೃತ್ತಾಂತವನ್ನು ಕೇಳಿ, ಕೀಚಕನನ್ನು ಕೊಂದ ವೀರನಾರು ಎಂದು ಕೇಳಲು, ದೂತನು ಉತ್ತರಿಸುತ್ತಾ, ಕೀಚಕನು ಒಬ್ಬ ಹೆಂಗಸನ್ನು ಕೆಣಕಿದನು, ಆ ಕ್ಷಣದಲ್ಲೇ ಗಂಧರ್ವರು ಬಂದು ಕೀಚಕರ ವಂಶವನ್ನೇ ಸಂಹರಿಸಿದರು ಎಂದು ಹೇಳಿದನು.

ಅರ್ಥ:
ತಂದು: ಬಂದು, ಆಗಮಿಸು; ಹರಹು: ಪ್ರವಹಿಸು; ಮೃತಿ: ಸಾವು; ನೃಪ: ರಾಜ; ಕೇಳಿ: ಆಲಿಸು; ದೂತ: ಸೇವಕ, ಚರ; ಮಡುಹು: ಕೊಲ್ಲು, ಸಾಯಿಸು; ವೀರ: ಶೂರ, ಪರಾಕ್ರಮಿ; ಮರ್ತ್ಯ: ಮನುಷ್ಯ; ಜಾತಿ: ವಂಶ, ಕುಲ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಸುಂದರಿ; ಕೆಣಕು: ರೇಗಿಸು; ಗಂಧರ್ವ: ಖಚರ, ದೇವತೆಗಳ ಒಂದು ವರ್ಗ; ವೃಂದ: ಗುಂಪು; ಸವರು: ನಾಶಮಾಡು; ರಾಯ: ರಾಜ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ತಂದು +ಹರಹಿದ+ ಕೀಚಕನ +ಮೃತಿ
ಯಂದವನು +ನೃಪ +ಕೇಳಿ+ ದೂತಂಗ್
ಎಂದ +ಮಡುಹಿದ +ವೀರನಾವನು +ಮರ್ತ್ಯ+ಜಾತಿಯಲಿ
ಇಂದುಮುಖಿಯನು +ಕೆಣಕಲ್+ಆಗಲೆ
ಬಂದು +ಗಂಧರ್ವಕರು +ಕೀಚಕ
ವೃಂದವನು +ಸವರಿದರು+ ಕೌರವರಾಯ +ಚಿತ್ತೈಸು

ಅಚ್ಚರಿ:
(೧) ಮೃತಿ, ಮಡುಹು, ಸವರು; ನೃಪ, ರಾಯ – ಸಾಮ್ಯಾರ್ಥಪದಗಳು