ಪದ್ಯ ೫: ಅರ್ಜುನನು ಯಾರ ಶಿಷ್ಯನೆಂದು ಬೇಡನಿಗೆ ಹೇಳಿದನು?

ಕಟಕಿಯೇಕೆ ಪುಳಿಂದ ನಾವು
ಬ್ಬಟೆಯ ತಪಸಿಗಳೆಂಬುದಿದು ಪರಿ
ಸ್ಫುಟವಲೇ ತಪ್ಪೇನು ನಿನ್ನೊಡನೆಂದು ಫಲವೇನು
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನುಶರ ಖಡ್ಗದಲಿ ಧೂ
ರ್ಜಟಿಯಿಹನು ನಾವವರ ಶಿಷ್ಯರು ಶಬರ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಎಲವೋ ಶಬರ ಕೇಳು, ಚುಚ್ಚುಮಾತುಗಳನ್ನೇಕೆ ನುಡಿಯುವೇ? ನಾನು ಉತ್ತಮ ತಪಸ್ವಿಯೆಂಬುದು ಅತಿ ಸ್ಪಷ್ಟವಾಗಿದೆಯಲ್ಲವೇ? ಜಟೆ, ಕೃಷ್ಣಾಜಿನ, ಭಸ್ಮಗಳೊಡನೆ ಬಿಲ್ಲು ಬಾಣ, ಖಡ್ಗಗಳನ್ನು ಧರಿಸಿದ ಶಿವನಿದ್ದಾನೆ, ನಾನು ಅವರ ಶಿಷ್ಯ ಎಂದು ಅರ್ಜುನನು ಹೇಳಿದನು.

ಅರ್ಥ:
ಕಟಕಿ:ವ್ಯಂಗ್ಯ, ಚುಚ್ಚು ಮಾತು; ಪುಳಿಂದ: ಬೇಡ; ಉಬ್ಬಟೆ: ಅತಿಶಯ, ಹಿರಿಮೆ; ತಪಸಿ: ಋಷಿ; ಸ್ಫುಟ: ಅರಳಿದುದು, ವಿಕಸಿತವಾದುದು; ತಪ್ಪು: ಸರಿಯಲ್ಲದ; ಒಡನೆ: ಜೊತೆ; ಫಲ: ಪ್ರಯೋಜನ; ಜಟೆ: ಕೂದಲು; ಮೃಗಾಜಿನ: ಜಿಂಕೆಯ ಚರ್ಮ; ಭಸ್ಮ: ವಿಭೂತಿ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಧನು: ಧನಸ್ಸು; ಶರ: ಬಾಣ; ಖಡ್ಗ: ಕತ್ತಿ; ಧೂರ್ಜಟಿ: ಶಿವ; ಶಿಷ್ಯ: ವಿದ್ಯಾರ್ಥಿ; ಶಬರ: ಬೇಟೆಗಾರ; ಕೇಳು: ಆಲಿಸು;

ಪದವಿಂಗಡಣೆ:
ಕಟಕಿಯೇಕೆ +ಪುಳಿಂದ +ನಾವ್
ಉಬ್ಬಟೆಯ +ತಪಸಿಗಳ್+ಎಂಬುದ್+ಇದು +ಪರಿ
ಸ್ಫುಟವಲೇ +ತಪ್ಪೇನು +ನಿನ್ನೊಡನೆಂದು +ಫಲವೇನು
ಜಟೆ +ಮೃಗಾಜಿನ +ಭಸ್ಮದೊಡನ್
ಉತ್ಕಟದ +ಧನುಶರ +ಖಡ್ಗದಲಿ +ಧೂ
ರ್ಜಟಿಯಿಹನು +ನಾವ್+ಅವರ +ಶಿಷ್ಯರು +ಶಬರ+ ಕೇಳೆಂದ

ಅಚ್ಚರಿ:
(೧) ಪುಳಿಂದ, ಶಬರ – ಸಮನಾರ್ಥಕ ಪದ
(೨) ಶಿವನನ್ನು ವರ್ಣಿಸುವ ಪರಿ – ಜಟೆ ಮೃಗಾಜಿನ ಭಸ್ಮದೊಡನುತ್ಕಟದ ಧನುಶರ ಖಡ್ಗದಲಿ ಧೂ
ರ್ಜಟಿಯಿಹನು