ಪದ್ಯ ೧೧: ಭೀಮನ ಗರ್ಜನೆ ಹೇಗಿತ್ತು?

ಬಿರಿದವದ್ರಿಗಳನಿಲಸುತನು
ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ
ಶರಭ ಶಾರ್ದೂಲಂಗಳಿಲ್ಲ ವಿಲೋಚನಾಂತ್ಯದಲಿ
ಮರಗಿರನ ಮೃಗಗಿಗನ ಪಾಡೇ
ನರಸ ಭೀಮನ ದನಿಗೆ ಬೆಚ್ಚದೆ
ಗಿರಿಗುಹೆಗಳೇ ಮಲೆತು ನಿಂತವು ದನಿಗೆ ದನಿಗೂಡುತ (ಅರಣ್ಯ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನ ಬೊಬ್ಬೆಗೆ ಬೆಟ್ಟಗಳು ಬಿರಿದವು. ಶರಭ, ಹುಲಿ ಮೊದಲಾದ ಪ್ರಾಣಿಗಳು ಕಣ್ಣಿಗೆ ಕಾಣದಂತೆ ಓಡಿದವು. ಜನಮೇಜಯ ರಾಜ ಇನ್ನು ಮರಗಿರ, ಮೃಗಗಿಗಳ ಪಾಡೇನು? ಭೀಮನ ಗರ್ಜನೆಗೆ ಬೆಟ್ಟದ ಗುಹೆಗಳೇ ಪ್ರತಿಧ್ವನಿಸುತ್ತಾ ನಿಂತವು.

ಅರ್ಥ:
ಬಿರಿ: ಬಿರುಕು, ಸೀಳು; ಅದ್ರಿ: ಬೆಟ್ಟ; ಅನಿಲಸುತ: ವಾಯುಪುತ್ರ (ಭೀಮ); ಉಬ್ಬರ: ಅತಿಶಯ; ಬೊಬ್ಬೆ: ಕೂಗು; ಮಿಕ್ಕ: ಉಳಿದ ಮೃಗ: ಪ್ರಾಣಿ; ತತಿ: ಗುಂಪು; ಶರಭ:ಎಂಟು ಕಾಲುಗಳುಳ್ಳ ಒಂದು ವಿಲಕ್ಷಣ ಪ್ರಾಣಿ; ಶಾರ್ದೂಲ: ಹುಲಿ, ವ್ಯಾಘ್ರ; ವಿಲೋಚನ: ಕಣ್ಣು; ಅಂತ: ಕೊನೆ; ಮರ: ತರು, ವೃಕ್ಷ; ಮೃಗ: ಪ್ರಾಣಿ; ಪಾಡು: ಅವಸ್ಥೆ; ಅರಸ: ರಾಜ; ದನಿ: ಧ್ವನಿ, ಶಬ್ದ; ಬೆಚ್ಚು: ಹೆದರು; ಗಿರಿ: ಬೆಟ್ಟ; ಗುಹೆ: ಗವಿ; ಮಲೆ: ಎದುರಿಸು; ನಿಲ್ಲು: ಸ್ಥಿತವಾಗಿರು; ಕೂಡು: ಜೊತೆಯಾಗು;

ಪದವಿಂಗಡಣೆ:
ಬಿರಿದವ್+ಅದ್ರಿಗಳ್+ಅನಿಲಸುತನ್
ಉಬ್ಬರದ +ಬೊಬ್ಬೆಗೆ +ಮಿಕ್ಕ +ಮೃಗ+ತತಿ
ಶರಭ+ ಶಾರ್ದೂಲಂಗಳಿಲ್ಲ +ವಿಲೋಚನ+ಅಂತ್ಯದಲಿ
ಮರಗಿರನ +ಮೃಗಗಿಗನ+ ಪಾಡೇನ್
ಅರಸ+ ಭೀಮನ +ದನಿಗೆ +ಬೆಚ್ಚದೆ
ಗಿರಿ+ಗುಹೆಗಳೇ +ಮಲೆತು +ನಿಂತವು+ ದನಿಗೆ+ ದನಿಗೂಡುತ

ಅಚ್ಚರಿ:
(೧) ಭೀಮನಿಗೆ ಎದುರು ನಿಂತವರಾರು – ಭೀಮನ ದನಿಗೆ ಬೆಚ್ಚದೆ ಗಿರಿಗುಹೆಗಳೇ ಮಲೆತು ನಿಂತವು ದನಿಗೆ ದನಿಗೂಡುತ