ಪದ್ಯ ೨೫: ಪಾಂಡವರೇಕೆ ಅಳಲಿದರು?

ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು (ಗದಾ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುಲಗಿರಿಯು ಉರುಳ್ವಂತೆ ಭೀಮನು ಒಲೆದು ಬಿದ್ದನು. ಅವನ ಬಾಯಿಂದ ರಕ್ತ ಸುರಿದು ನೆಲ ನೆನೆಯಿತು. ಶಿವಶಿವಾ ಭೀಮನು ಮಡಿದನೇ! ಹಾ ಭೀಮಾ ಎಂದು ಸಾತ್ಯಕಿ ಸಂಜಯ ಮೊದಲಾದ ಪರಿವಾರದವರು ದುಃಖಿಸಿದರು.

ಅರ್ಥ:
ಒಲೆದು: ತೂಗಾಡು; ಬಿದ್ದು: ಬೀಳು; ಕುಲಗಿರಿ: ದೊಡ್ಡ ಬೆಟ್ಟ; ಮಲಗು: ನಿದ್ರಿಸು; ಇಳಿ: ಜಾರು; ಶೋಣಿತ: ರಕ್ತ; ಧಾರೆ: ವರ್ಷ; ಮಗ್ಗುಲು: ಪಕ್ಕ, ಪಾರ್ಶ್ವ; ಮುಸುಕು: ಹೊದಿಕೆ; ಯೋನಿ; ಅವನಿ: ಭೂಮಿ; ಅಳಿ: ಸಾವು; ಅಳಲು: ದುಃಖಿಸು; ಪರಿವಾರ: ಬಂಧುಜನ; ಆದಿ: ಮುಂತಾದ; ಏರ: ಆರೋಹಿಸು;

ಪದವಿಂಗಡಣೆ:
ಒಲೆದು +ಬಿದ್ದನು+ ಭೀಮ +ಕುಲಗಿರಿ
ಮಲಗುವಂದದಲ್+ಏರ+ಬಾಯಿಂ
ದಿಳಿವ +ಶೋಣಿತ+ಧಾರೆ +ಮಗ್ಗುಲ +ಮುಸುಕಿತ್+ಅವನಿಯಲಿ
ಎಲೆ +ಮಹಾದೇವಾ +ವೃಕೋದರನ್
ಅಳಿದನೇ +ಹಾ +ಭೀಮ +ಹಾಯೆಂದ್
ಅಳಲಿದುದು +ಪರಿವಾರ +ಸಾತ್ಯಕಿ+ ಸೃಂಜಯ+ಆದಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಒಲೆದು ಬಿದ್ದನು ಭೀಮ ಕುಲಗಿರಿ ಮಲಗುವಂದದಲ್

ಪದ್ಯ ೩೬: ಪಾಂಡವರ ಮೇಲೆ ಕೌರವರ ಆಕ್ರಮಣ ಹೇಗಿತ್ತು?

ಮತ್ತೆ ಹೊಕ್ಕುದು ಭಟರಮಮ ದಿಗು
ಭಿತ್ತಿ ಬಿರಿಯಲು ಮೊರೆವ ಭೇರಿಯ
ಕಿತ್ತು ನೆಲ ಹೊಡೆಮರಳೆ ಮೊಳಗುವ ಪಟಹ ಡಿಂಡಿಮದ
ಹತ್ತು ಸಾವಿರ ನೃಪರು ರಿಪುಗಳ
ಮುತ್ತಿದರು ಮುಸುಕಿದರು ಮೆಯ್ಯಲಿ
ಮೆತ್ತಿದರು ಮೊನೆಗಣೆಗಳನು ಪಾಂಡವರ ಬಲದೊಳಗೆ (ದ್ರೋಣ ಪರ್ವ, ೧೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವ ಭಟರು ಮತ್ತೆ ನುಗ್ಗಿದರು. ಭೇರಿಯ ಬಡಿತಕ್ಕೆ ದಿಕ್ಪಟಗಳು ಬಿರಿದವು. ನೆಲ ಮಗ್ಗುಲಾಗಿ ಬೀಳುವಂತೆ ಡಿಂಡಿಮ ಪಟಹಗಳನ್ನು ಬಡಿದರು. ಹತ್ತು ಸಾವಿರ ರಾಜರು ಮುತ್ತಿ ಬಾಣಗಳಿಂದ ಪಾಂಡವರ ಸೈನ್ಯದ ಯೋಧರ ಮೈಗಳನ್ನು ಮೆತ್ತಿದರು.

ಅರ್ಥ:
ಹೊಕ್ಕು: ಸೇರು; ಭಟ: ಸೈನಿಕ; ದಿಗು: ದಿಕ್ಕು; ಭಿತ್ತಿ: ಗೋಡೆ; ಬಿರಿ: ಬಿರುಕು, ಸೀಳು; ಮೊರೆ: ಧ್ವನಿ ಮಾಡು, ಝೇಂಕರಿಸು; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ; ಕಿತ್ತು: ಕಳಚು; ನೆಲ: ಭೂಮಿ; ಹೊಡೆಮರಳು: ಹಿಂದಕ್ಕೆ ತಿರುಗಿಸು; ಮೊಳಗು: ಧ್ವನಿ, ಸದ್ದು; ಪಟಹ: ನಗಾರಿ; ಡಿಂಡಿಮ: ಒಂದು ಬಗೆಯ ಚರ್ಮವಾದ್ಯ; ಸಾವಿರ: ಸಹಸ್ರ; ನೃಪ: ರಾಜ; ರಿಪು: ವೈರಿ; ಮುತ್ತು: ಆವರಿಸು; ಮುಸುಕು: ಹೊದಿಕೆ; ಯೋನಿ; ಮೆಯ್ಯಲಿ: ತನುವಿನಲ್ಲಿ; ಮೆತ್ತು: ಬಳಿ, ಲೇಪಿಸು; ಮೊನೆ: ತುದಿ, ಕೊನೆ; ಕಣೆ: ಬಾಣ; ಬಲ: ಸೈನ್ಯ;

ಪದವಿಂಗಡಣೆ:
ಮತ್ತೆ +ಹೊಕ್ಕುದು +ಭಟರ್+ಅಮಮ +ದಿಗು
ಭಿತ್ತಿ+ ಬಿರಿಯಲು +ಮೊರೆವ +ಭೇರಿಯ
ಕಿತ್ತು +ನೆಲ +ಹೊಡೆಮರಳೆ+ ಮೊಳಗುವ +ಪಟಹ +ಡಿಂಡಿಮದ
ಹತ್ತು +ಸಾವಿರ +ನೃಪರು +ರಿಪುಗಳ
ಮುತ್ತಿದರು +ಮುಸುಕಿದರು +ಮೆಯ್ಯಲಿ
ಮೆತ್ತಿದರು +ಮೊನೆಗಣೆಗಳನು +ಪಾಂಡವರ +ಬಲದೊಳಗೆ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುತ್ತಿದರು ಮುಸುಕಿದರು ಮೆಯ್ಯಲಿ ಮೆತ್ತಿದರು ಮೊನೆಗಣೆಗಳನು

ಪದ್ಯ ೮: ಅಭಿಮನ್ಯುವು ಆರು ರಥಿಕರನ್ನು ಹೇಗೆ ಹಂಗಿಸಿದನು?

ಶಿಶುತನದ ಸಾಮರ್ಥ್ಯ ಸಾಕಿ
ನ್ನೆಸದಿರೆಲವೋ ಮರಳು ಮರಳೆಂ
ದಸಮಬಲರೈದಿದರು ಷಡುರಥರೊಂದು ಮುಖವಾಗಿ
ಎಸುಗೆ ನಿಮಗೆಂದಾಯ್ತು ನಿದ್ರೆಯ
ಮುಸುಕಿನಲಿ ಗೋಗ್ರಹಣದಲಿ ಜೀ
ವಿಸಿದ ಜಾಣರು ನೀವೆನುತ್ತಿದಿರಾದನಭಿಮನ್ಯು (ದ್ರೋಣ ಪರ್ವ, ೬ ಸಂಧಿ, ೮ ಪದ್ಯ)

ತಾತ್ಪರ್ಯ:
ಎಲೋ ಶಿಶುವೇ ನಿನ್ನ ಹುಡುಗತನದ ಸಾಮರ್ಥ್ಯ ಸಾಕು, ಇನ್ನು ಬಾಣಗಳನ್ನು ಬಿಡುವುದನ್ನು ನಿಲ್ಲಿಸು, ಹಿಂದಿರುಗು, ಎಂದು ಮೂದಲಿಸುತ್ತಾ ಆರು ಜನ ರಥಿಕರೂ ಅಭಿಮನ್ಯುವಿನ ಮೇಲೆ ಬಿದ್ದರು. ಅಭಿಮನ್ಯುವು ನಿಮಗೂ ಬಾಣ ಪ್ರಯೋಗ ಗೊತ್ತಿದೆಯೇ? ಗೋಗ್ರಹಣದಲ್ಲಿ ಸಮ್ಮೋಹನಾಸ್ತ್ರದ ನಿದ್ದೆಯಿಂದ ಮಲಗಿ ಪ್ರಾಣವುಳಿಸಿಕೊಂಡ ಜಾಣರು ನೀವಲ್ಲವೇ ಎನ್ನುತ್ತಾ ಆವರಿಗಿದಿರಾದನು.

ಅರ್ಥ:
ಶಿಶು: ಬಾಲಕ; ಸಾಮರ್ಥ್ಯ: ಶಕ್ತಿ; ಸಾಕು: ನಿಲ್ಲು; ಎಸು: ಬಾಣ ಪ್ರಯೋಗ ಮಾಡು; ಮರಳು: ಹಿಂದಕ್ಕೆ ಬರು, ಹಿಂತಿರುಗು; ಅಸಮ: ಸಮವಲ್ಲದ; ಐದು: ಬಂದು ಸೇರು; ಷಡುರಥ: ಆರು ರಥ; ಮುಖ: ಆನನ; ನಿದ್ರೆ: ಶಯನ; ಮುಸುಕು: ಹೊದಿಕೆ; ಯೋನಿ; ಗೋಗ್ರಹಣ: ಗೋವುಗಳನ್ನು ಸೆರೆಹಿಡಿಯುವುದು; ಜೀವಿಸು: ಬದುಕು; ಜಾಣ: ಬುದ್ಧಿವಂತ; ಇದಿರು: ಎದುರು;

ಪದವಿಂಗಡಣೆ:
ಶಿಶುತನದ +ಸಾಮರ್ಥ್ಯ +ಸಾಕಿನ್
ಎಸದಿರ್+ಎಲವೋ +ಮರಳು +ಮರಳೆಂದ್
ಅಸಮ+ಬಲರ್+ಐದಿದರು +ಷಡುರಥರೊಂದು +ಮುಖವಾಗಿ
ಎಸುಗೆ +ನಿಮಗೆಂದಾಯ್ತು +ನಿದ್ರೆಯ
ಮುಸುಕಿನಲಿ +ಗೋಗ್ರಹಣದಲಿ+ ಜೀ
ವಿಸಿದ +ಜಾಣರು +ನೀವೆನುತ್+ಇದಿರಾದನ್+ಅಭಿಮನ್ಯು

ಅಚ್ಚರಿ:
(೧) ಅಭಿಮನ್ಯುವು ಹಂಗಿಸುವ ಪರಿ – ನಿದ್ರೆಯಮುಸುಕಿನಲಿ ಗೋಗ್ರಹಣದಲಿ ಜೀವಿಸಿದ ಜಾಣರು