ನಡೆದಳಾ ಗಾಂಧಾರಿ ಶೋಕದ
ಕಡಲೋಳೇಳುತ ಮುಳುಗುತಂಘ್ರಿಯ
ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ
ಅಡಗಿನಲಿ ಕಾಲೂರಿ ಸಿಲುಕಿದ
ರೊಡನೆ ಹರಿ ನೆಗಹುವನು ನರವಿನ
ತೊಡಕ ಬಿಡಿಸುತ ಹೊಕ್ಕಳಂಗನೆ ಹೆಣನ ಮಧ್ಯದಲಿ (ಗದಾ ಪರ್ವ, ೧೨ ಸಂಧಿ, ೭ ಪದ್ಯ)
ತಾತ್ಪರ್ಯ:
ಗಾಂಧಾರಿಯು ಶೋಕ ಸಮುದ್ರದಲ್ಲಿ ಮುಳುಗುತ್ತಾ ಏಳುತ್ತಾ, ಮೊಣಕಾಲೆತ್ತರದ ರಕ್ತದ ಮಡುವಿನಲ್ಲಿ ಕಾಲಿಟ್ಟು ರಕ್ತವನ್ನು ಕೊಡವಿಕೊಳ್ಳುತ್ತಾ ಮಾಂಸದ ನಡುವೆ ಕಾಲು ಸಿಕ್ಕಿಸಿಕೊಳ್ಳುತ್ತಾ ಬಂದಳು. ಆಗ ಶ್ರೀಕೃಷ್ಣನು ಅವಳನ್ನು ಮೇಲೆತ್ತುವನು. ನರಗಳು ಕಾಲಿಗೆ ಸಿಕ್ಕಿಕೊಂಡಾಗ ತೊಡಕನ್ನು ಬಿಡಿಸಿಕೊಳ್ಳುತ್ತಾ ಗಾಂಧಾರಿಯು ಹೆಣಗಳ ನಡುವೆ ಸಾಗಿದಳು.
ಅರ್ಥ:
ನಡೆ: ಚಲಿಸು; ಶೋಕ: ದುಃಖ; ಕಡಲು: ಸಾಗರ; ಏಳು: ಹತ್ತು; ಮುಳುಗು: ನೀರಿನಲ್ಲಿ ಮೀಯು; ಅಂಘ್ರಿ: ಪಾದ; ಕೊಡಹು: ಒದರು, ಜಾಡಿಸು; ಅರುಣಾಂಬ: ಕೆಂಪನೆಯ ನೀರು (ರಕ್ತ); ಹೊನಲು: ಪ್ರಕಾಶ; ಜಾನು: ಮಂಡಿ, ಮೊಳಕಾಲು; ಜಾನುದಘ್ನ: ಮೊಳಕಾಲಿನವರೆಗೆ ಮುಳುಗಿದವನು; ಅಡಗು: ಮಾಂಸ; ಕಾಲು: ಪಾದ; ಊರು: ಭದ್ರವಾಗಿ ನಿಲ್ಲಿಸು; ಸಿಲುಕು: ಬಂಧನಕ್ಕೊಳಗಾದುದು; ಹರಿ: ವಿಷ್ಣು; ನೆಗಹು: ಮೇಲೆತ್ತು; ನರ: ತಂತು, ಸೆರೆ, ತಂತಿ; ತೊಡಕು: ಸಿಕ್ಕು, ಗೋಜು; ಬಿಡಿಸು: ಸಡಲಿಸು; ಹೊಕ್ಕು: ಸೇರು; ಅಂಗನೆ: ಹೆಣ್ಣು; ಹೆಣ: ಜೀವವಿಲ್ಲದ ಶರೀರ; ಮಧ್ಯ: ನಡುವೆ;
ಪದವಿಂಗಡಣೆ:
ನಡೆದಳಾ+ ಗಾಂಧಾರಿ +ಶೋಕದ
ಕಡಲೋಳ್+ಏಳುತ +ಮುಳುಗುತ್+ಅಂಘ್ರಿಯ
ಕೊಡಹುತ್+ಅರುಣಾಂಬುಗಳ +ಹೊನಲಿನ +ಜಾನುದಘ್ನಗಳ
ಅಡಗಿನಲಿ+ ಕಾಲೂರಿ +ಸಿಲುಕಿದರ್
ಒಡನೆ +ಹರಿ +ನೆಗಹುವನು +ನರವಿನ
ತೊಡಕ +ಬಿಡಿಸುತ +ಹೊಕ್ಕಳ್+ಅಂಗನೆ +ಹೆಣನ +ಮಧ್ಯದಲಿ
ಅಚ್ಚರಿ:
(೧) ರೂಪಕದ ಪ್ರಯೋಗ – ಶೋಕದಕಡಲೋಳೇಳುತ ಮುಳುಗುತಂಘ್ರಿಯ ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ