ಪದ್ಯ ೭: ಜನಮೇಜಯ ರಾಜನಿಗೆ ಯಾವ ಪ್ರಶ್ನೆ ಕಾಡಿತು?

ಎಲೆಮುನೀಶ್ವರ ಪೂರ್ವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ (ಗದಾ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಆಗ ಜನಮೇಜಯನು ವೈಶಂಪಾಯನ ಮುನೀಶ್ವರನೇ, ಈ ಹಿಂದೆ ಯಾದವ ಬಲವನ್ನು ಭಾಗಮಾಡಿದಾಗ ಪಾಂಡವರ ಕಡೆಗೆ ಶ್ರೀಕೃಷ್ಣನೂ ಸಾತ್ಯಕಿಯೂ ಬಂದರು. ಕೌರವನ ಕಡೆಗೆ ಬಲರಾಮನೂ, ಕೃತವರ್ಮನೂ ಹೋದರು. ಹೀಗಿದ್ದು ಬಲರಾಮನು ಕೌರವನ ಕಡೆಗೆ ನಿಂತು ಯುದ್ಧವನ್ನು ಮಾಡಲಿಲ್ಲವೇಕೆ ಎಂದು ಕೇಳಿದನು.

ಅರ್ಥ:
ಮುನಿ: ಋಷಿ; ಪೂರ್ವ: ಹಿಂದೆ; ಬಲ: ಸೈನ್ಯ, ಶಕ್ತಿ; ವಿಭಾಗ: ಪಾಲು; ದೆಸೆ: ದಿಕ್ಕು; ಹಲಧರ: ಬಲರಾಮ; ಅಸುರಾರಿ: ಕೃಷ್ಣ; ಬಳಿಕ: ನಂತರ; ಹಸುಗೆ: ವಿಭಾಗ; ಸ್ಖಲಿತ: ಜಾರಿಬಿದ್ದ; ಬಿಡು: ತೊರೆ; ನುಡಿ: ಮಾತಾಡು;

ಪದವಿಂಗಡಣೆ:
ಎಲೆ+ಮುನೀಶ್ವರ+ ಪೂರ್ವದಲಿ +ಯದು
ಬಲ +ವಿಭಾಗದಲ್+ಇವರ +ದೆಸೆಯಲಿ
ಹಲಧರನು +ಕೃತವರ್ಮನ್+ಆ+ ಪಾಂಡವರಿಗ್+ಅಸುರಾರಿ
ಬಳಿಕ +ಸಾತ್ಯಕಿ+ ಈ+ ಹಸುಗೆಯ
ಸ್ಖಲಿತವ್+ಇದರಲಿ +ರಾಮನ್+ಈ+ ಕುರು
ಬಲವ +ಬಿಟ್ಟನದೇಕ್+ಎನುತ +ಜನಮೇಜಯನು +ನುಡಿದ

ಅಚ್ಚರಿ:
(೧) ಕೃಷ್ಣನನ್ನು ಅಸುರಾರಿ, ಬಲರಾಮನನ್ನು ಹಲಧರ, ರಾಮ ಎಂದು ಕರೆದಿರುವುದು

ಪದ್ಯ ೫೪: ಮುನಿವರ್ಯರು ಯಾರಿಗೆ ಕಾಣಿಸಿಕೊಂಡರು?

ವರಮುನೀಶ್ವರರವನಿಯಲಿ ಮೂ
ವರಿಗೆ ಗೋಚರವಾದರಿತ್ತಲು
ಮುರವಿರೋಧಿಗೆ ನರಗೆ ಕುರುಸೇನಾಧಿನಾಥಂಗೆ
ಅರಿಯರುಳಿದವರೀತನಿಂ ಸ
ತ್ಕರಿಸಿಕೊಂಡರು ನುಡಿದರಾ ಮುನಿ
ವರರು ಕಡಿದರು ಕೌರವಾನ್ವಯ ಕಲ್ಪಭೂರುಹವ (ದ್ರೋಣ ಪರ್ವ, ೧೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ರಣಭೂಮಿಯಲ್ಲಿದವರಲ್ಲಿ ಮೂವರಿಗೆ ಮಾತ್ರ ಇವರು ಕಾಣಿಸಿಕೊಂಡರು. ಶ್ರೀಕೃಷ್ಣ, ಅರ್ಜುನ ಮತ್ತು ದ್ರೋಣರಿಗೆ. ಉಳಿದವರಿಗೆ ಇದು ತಿಳಿಯದು. ದ್ರೋಣನ ಸತ್ಕಾರವನ್ನು ಸ್ವೀಕರಿಸಿ ಅವನೊಡನೆ ಮಾತಾಡಿ ಅವರು ಕೌರವ ವಂಶವೆಂಬ ಕಲ್ಪವೃಕ್ಷವನ್ನು ಕಡಿದು ಹಾಕಿದರು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ಅವನಿ: ಭೂಮಿ; ಗೋಚರ: ಕಾಣು; ವಿರೋಧಿ: ವೈರಿ; ಮುರವಿರೋಧಿ: ಕೃಷ್ಣ; ನರ: ಅರ್ಜುನ; ಸೇನಾಧಿನಾಥ: ಸೇನಾಪತಿ; ಅರಿ: ತಿಳಿ; ಉಳಿದ: ಮಿಕ್ಕ; ಸತ್ಕರಿಸು: ಗೌರವಿಸು; ನುಡಿ: ಮಾತಾಡು; ಮುನಿ: ಋಷಿ; ಕಡಿ: ಸೀಳು; ಅನ್ವಯ: ವಂಶ; ಕಲ್ಪಭೂರುಹ: ಕಲ್ಪವೃಕ್ಷ;

ಪದವಿಂಗಡಣೆ:
ವರ+ಮುನೀಶ್ವರರ್+ಅವನಿಯಲಿ +ಮೂ
ವರಿಗೆ +ಗೋಚರವಾದರ್+ಇತ್ತಲು
ಮುರವಿರೋಧಿಗೆ +ನರಗೆ +ಕುರು+ಸೇನಾಧಿನಾಥಂಗೆ
ಅರಿಯರ್+ಉಳಿದವರ್+ಈತನಿಂ +ಸ
ತ್ಕರಿಸಿಕೊಂಡರು +ನುಡಿದರಾ +ಮುನಿ
ವರರು +ಕಡಿದರು +ಕೌರವಾನ್ವಯ +ಕಲ್ಪಭೂರುಹವ

ಅಚ್ಚರಿ:
(೧) ಕೃಷ್ಣನನ್ನು ಮುರವಿರೋಧಿ, ದ್ರೋಣರನ್ನು ಕುರುಸೇನಾಧಿನಾಥ ಎಂದು ಕರೆದಿರುವುದು
(೨) ಕ ಕಾರದ ತ್ರಿವಳಿ ಪದ – ಕಡಿದರು ಕೌರವಾನ್ವಯ ಕಲ್ಪಭೂರುಹವ

ಪದ್ಯ ೩೬: ನಾರದರು ಕಂಪನನನ್ನು ಹೇಗೆ ಸಂತೈಸಿದರು?

ಆ ಮಹಾಮೃತ್ಯುವನು ಹುಟ್ಟಿಸಿ
ದಾ ಮಹಾದೇವಾದಿ ದೇವರು
ಕಾಮಿನಿಯ ಕಳುಹಲ್ಕೆ ಬಾರದೆನುತ್ತ ಬೋಧಿಸಲು
ಭೂಮಿಪತಿ ನಿಜಸುತನ ಮೃತಿಯು
ದ್ದಾಮ ತಾಪವ ಕಳೆಯಬೇಕೆಂ
ದಾ ಮುನೀಶ್ವರ ಸಂತವಿಟ್ಟನು ಕಂಪಭೂಪತಿಯ (ದ್ರೋಣ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಆ ಮಹಾ ಮೃತ್ಯುವನ್ನು ಹುಟ್ಟಿಸಿದ ಮಹಾದೇವನೇ ಮೊದಲಾದವರು ಅವಳನ್ನು ಕಳುಹಿಸಿ ಕೊಡಲಾರರು. ನಿನ್ನ ಮಗನ ಮರಣದ ತಾಪವನ್ನು ಕಳೆದುಕೋ ಎಂದು ಹೇಳಿ ಕಂಪನನನ್ನು ಸಂತೈಸಿದನು.

ಅರ್ಥ:
ಮೃತ್ಯು: ಸಾವು; ಹುಟ್ಟು: ಜನಿಸು; ಆದಿ: ಮುಂತಾದ; ದೇವ: ಭಗವಂತ; ಕಾಮಿನಿ: ಹೆಣ್ಣು; ಕಳುಹು: ಕಳಿಸು; ಬೋಧಿಸು: ತಿಳಿಸು; ಭೂಮಿಪತಿ: ರಾಜ; ಸುತ: ಮಗ; ಮೃತಿ: ಸಾವು; ಉದ್ದಾಮ: ಶ್ರೇಷ್ಠ; ತಾಪ: ಬಿಸಿ, ಬೇನೆ; ಕಳೆ: ನಿವಾರಿಸು; ಮುನಿ: ಋಷಿ; ಸಂತವಿಡು: ಸಂತೈಸು; ಭೂಪತಿ: ರಾಜ;

ಪದವಿಂಗಡಣೆ:
ಆ +ಮಹಾ+ಮೃತ್ಯುವನು +ಹುಟ್ಟಿಸಿದ
ಆ+ ಮಹಾದೇವಾದಿ +ದೇವರು
ಕಾಮಿನಿಯ +ಕಳುಹಲ್ಕೆ+ ಬಾರದೆನುತ್ತ+ ಬೋಧಿಸಲು
ಭೂಮಿಪತಿ +ನಿಜಸುತನ +ಮೃತಿ+
ಉದ್ದಾಮ +ತಾಪವ+ ಕಳೆಯಬೇಕೆಂದ್
ಆ+ ಮುನೀಶ್ವರ +ಸಂತವಿಟ್ಟನು +ಕಂಪ+ಭೂಪತಿಯ

ಅಚ್ಚರಿ:
(೧) ಭೂಮಿಪತಿ, ಭೂಪತಿ – ಸಮಾನಾರ್ಥಕ ಪದ
(೨) ಮಹಾಮೃತ್ಯು, ಮಹಾದೇವ – ಮಹಾ ಪದದ ಬಳಕೆ

ಪದ್ಯ ೮: ಧರ್ಮಜನು ವ್ಯಾಸರನ್ನು ಹೇಗೆ ಬರೆಮಾಡಿಕೊಂಡನು?

ಹಾ ಮಹಾದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ (ಅರಣ್ಯ ಪರ್ವ, ೫ ಸಂಧಿ, ೮ ಪದ್ಯ)

ತಾತ್ಪರ್ಯ:
ಅಲ್ಲಿ ನೆರೆದಿದ್ದ ಋಷಿಮುನಿಗಳು ವ್ಯಾಸರನ್ನು ನೋಡಿ, ಹಾ ಭಗವಂತ, ಮಹಾದೇವ, ಇವರಾರು, ಇವರು ಮಹಾ ಮುನಿಗಳಂತೆ ತೋರುತ್ತಿರುವವರು ಎಂದು ತಿಳಿದು ಅಲ್ಲಿದ್ದ ಮುನಿಗಳ ಗುಂಪು ಎದ್ದು ನಿಂತರು. ಧರ್ಮಜನು ವ್ಯಾಸರ ಬಳಿ ತೆರಳಿ ಮುಖಾಮುಖಿಯಾದನು. ಪ್ರೇಮದಿಂದ ರೋಮಾಂಚನಗೊಂಡು, ಸಂತಸದ ಕಣ್ಣೀರಿನ ಹನಿಯನ್ನು ಹೊರಹಾಕುತ್ತಾ, ಸತ್ಯವೇ ಭಾವವಾಗಿದ್ದ ಧರ್ಮಜನು ವ್ಯಾಸರ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಮಹಾ: ಶ್ರೇಷ್ಠ; ಮುನಿ: ಋಷಿ; ಈಶ್ವರ: ಒಡೆಯ, ಪ್ರಭು; ಸ್ತೋಮ: ಗುಂಪು; ಎದ್ದು: ಮೇಲೇಳು; ನಂದನ: ಮಗ; ಇದಿರು: ಎದುರು; ಪ್ರೇಮ: ಒಲವು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಸಲಿಲ: ನೀರು; ನಯನ: ಕಣ್ಣು; ರೋಮ: ಕೂದಲು; ಹರ್ಷ: ಸಂತಸ; ಸತ್ಯ: ನಿಜ; ಭಾವ: ಭಾವನೆ; ಭೂಮಿಪತಿ: ರಾಜ; ಮೈಯಿಕ್ಕು: ನಮಸ್ಕರಿಸು; ವರ: ಶ್ರೇಷ್ಠ; ಚರಣ: ಪಾದ;

ಪದವಿಂಗಡಣೆ:
ಹಾ +ಮಹಾದೇವಾ+ಇದಾರು +ಮ
ಹಾ +ಮುನೀಶ್ವರರ್+ಎನುತ+ ಮುನಿಪ
ಸ್ತೋಮವ್+ಎದ್ದುದು +ಧರ್ಮನಂದನನ್+ಅವರಿಗ್+ಇದಿರಾಗಿ
ಪ್ರೇಮ +ಪುಳಕದ +ನಯನ +ಸಲಿಲದ
ರೋಮಹರ್ಷದ+ ಸತ್ಯಭಾವದ
ಭೂಮಿಪತಿ+ ಮೈಯಿಕ್ಕಿದನು +ಮುನಿವರನ +ಚರಣದಲಿ

ಅಚ್ಚರಿ:
(೧) ರೋಮಾಂಚನದ ವರ್ಣನೆ – ಪ್ರೇಮ ಪುಳಕದ ನಯನ ಸಲಿಲದ ರೋಮಹರ್ಷದ
(೨) ನಮಸ್ಕರಿಸಿದನು ಎಂದು ಹೇಳಲು – ಮೈಯಿಕ್ಕಿದನು ಪದದ ಬಳಕೆ
(೩) ಮ ಕಾರದ ಸಾಲು ಪದಗಳು – ಮಹಾದೇವಾಯಿದಾರು ಮಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು

ಪದ್ಯ ೪೦: ಹಣ್ಣನ್ನು ಎಷ್ಟು ಭಾಗಗಳನ್ನಾಗಿ ಮಾಡಿದನು?

ವರ ಮುನೀಶ್ವರನಿತ್ತಫಲವನು
ಹರಿಣಲೋಚನೆಗೀಯಲಾ ಪಂ
ಕರುಹಮುಖಿ ಬಾಗಿನವನಿತ್ತಳು ಮುನಿಪಗೊಲವಿನಲಿ
ಪರಮ ಹರುಷದಿ ಹತ್ತು ಭಾಗಾಂ
ತರವ ಮಾಡಿ ಮುರಾರಿ ಕರೆಕರೆ
ಧರಣಿಸುರರನು ಸರ್ವರನು ಬರಹೇಳು ನೀನೆಂದ (ಅರಣ್ಯ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಣ್ವಮುನಿಗಳು ಕೃಷ್ಣನಿಗೆ ನೀಡಿದ ಫಲವನ್ನು ಕೃಷ್ಣನು ದ್ರೌಪದಿಗೆ ಎಲ್ಲರಿಗೂ ನೀಡಲು ಹೇಳಲು, ದ್ರೌಪದಿಯು ಆ ಹಣ್ಣನ್ನು ಬಾಗಿನವಾಗಿ ಕಣ್ವಮಹರ್ಷಿಗಳಿಗೆ ನೀಡಿದಳು. ನಂತರ ಶ್ರೀಕೃಷ್ಣನು ಆ ಹಣ್ಣನ್ನು ಹತ್ತು ಭಾಗಗಳಾಗಿ ವಿಂಗಡಿಸಿ ಬ್ರಾಹ್ಮಣರೆಲ್ಲರನ್ನೂ ಬೇಗ ಕರೆ ಎಂದು ಹೇಳಿದನು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ಇತ್ತ: ನೀಡಿದ; ಫಲ: ಹಣ್ಣು; ಹರಿಣ: ಜಿಂಕೆ; ಲೋಚನ: ಕಣ್ಣು; ಹರಿಣಲೋಚನೆ: ಜಿಂಕೆಯಂತಹ ಕಣ್ಣುಳ್ಳವಳು, ಸುಂದರಿ; ಪಂಕ: ಕೆಸರು; ಪಂಕರುಹ: ಕಮಲ; ಪಂಕರುಹಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ಬಾಗಿನ: ಮುತ್ತೈದೆಗೆ ಕೊಡುವ ಕಾಣಿಕೆ; ಒಲವು: ಪ್ರೀತಿ; ಪರಮ: ಶ್ರೇಷ್ಠ; ಹರುಷ: ಸಂತಸ; ಹತ್ತು: ದಶ; ಭಾಗ: ಚೂರು; ಅಂತರ: ಭೇದ; ಮುರಾರಿ: ಕೃಷ್ಣ; ಕರೆ: ಬರೆಮಾಡು; ಧರಣಿಸುರ: ಬ್ರಾಹ್ಮಣ; ಸರ್ವ: ಎಲ್ಲರು; ಬರಹೇಳು: ಆಗಮಿಸು, ಕರೆ;

ಪದವಿಂಗಡಣೆ:
ವರ +ಮುನೀಶ್ವರನ್+ಇತ್ತ+ಫಲವನು
ಹರಿಣಲೋಚನೆಗ್+ಈಯಲ್+ಆ+ ಪಂ
ಕರುಹಮುಖಿ +ಬಾಗಿನವನ್+ಇತ್ತಳು +ಮುನಿಪಗ್+ಒಲವಿನಲಿ
ಪರಮ +ಹರುಷದಿ+ ಹತ್ತು +ಭಾಗಾಂ
ತರವ+ ಮಾಡಿ +ಮುರಾರಿ +ಕರೆಕರೆ
ಧರಣಿಸುರರನು+ ಸರ್ವರನು +ಬರಹೇಳು +ನೀನೆಂದ

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ಹರಿಣಲೋಚನೆ, ಪಂಕರುಹಮುಖಿ

ಪದ್ಯ ೨೮: ಧರ್ಮಜನು ವ್ಯಾಸರ ಬಳಿ ಏನನ್ನು ಕೇಳಿದನು?

ಆ ಮುಕುಂದನ ನೆನಹು ನಮಗೆ ನಿ
ರಾಮಯವು ನೀವಿರಲು ಚಿಂತಾ
ವೈಮನಸ್ಯದ ವೇಧೆ ಮುರಿದುದು ಸಾಕದಂತಿರಲಿ
ಈ ಮಹೋತ್ಪಾತ ಪ್ರಬಂಧ ವಿ
ರಾಮ ಕರ್ಮವ ಬೆಸಸಿಯೆನೆ ನಗು
ತಾ ಮುನೀಶ್ವರ ನುಡಿದನವನೀಪತಿ ಶಿರೋಮಣಿಗೆ (ಸಭಾ ಪರ್ವ, ೧೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ರಾಜರಲ್ಲಿ ಶ್ರೇಷ್ಠನಾದ ಧರ್ಮಜನಿಗೆ ಋಷಿಗಳಲ್ಲಿ ಶ್ರೇಷ್ಠರಾದ ವ್ಯಾಸಮಹರ್ಷಿಗಳನ್ನು ಉದ್ದೇಶಿಸುತ್ತಾ, ನೀವು ಇರುವುದರಿಂದ ನನಗಿದ್ದ ಚಿಂತೆ, ನೋವು ಮಾಯವಾಗಿದೆ. ಶ್ರೀಕೃಷ್ಣನ ನಾಮ ಸ್ಮರಣೆಯು ನಮಗೆ ಸದಾ ನೆಮ್ಮದಿಯನ್ನುಂಟುಮಾಡುತ್ತದೆ. ಅದು ಹಾಗಿರಲಿ, ಈ ಮಹಾ ಉತ್ಪಾತಗಳ ದುಷ್ಪರಿಣಾಮವನ್ನು ನಿಲ್ಲಿಸುವ ಕರ್ಮವನ್ನು ತಿಳಿಸಿ ಎಂದನು, ವ್ಯಾಸರು ಆಗ ಧರ್ಮಜನಿಗೆ ಹೀಗೆ ಹೇಳಿದರು.

ಅರ್ಥ:
ನೆನಹು: ನೆನಪು; ನಿರಾಮಯ: ನೆಮ್ಮದಿ, ಸಂತೋಷ; ಚಿಂತೆ: ಯೋಚನೆ; ವೈಮನಸ್ಯ: ಅಪಾರವಾದ ದುಃಖ; ವೇಧೆ: ಕಷ್ಟ, ಬಾಧೆ; ಮುರಿ: ಸೀಳು; ಸಾಕು: ನಿಲ್ಲಿಸು, ತಡೆ; ಮಹಾ: ದೊಡ್ಡ; ಉತ್ಪಾತ: ಅಪಶಕುನ; ಪ್ರಬಂಧ: ಬಾಂಧವ್ಯ, ಕಟ್ಟು, ವ್ಯವಸ್ಥೆ; ವಿರಾಮ: ಬಿಡುವು, ವಿಶ್ರಾಂತಿ; ಕರ್ಮ: ಕಾರ್ಯ, ಕೆಲಸ; ಬೆಸಸು: ಹೇಳು, ಆಜ್ಞಾಪಿಸು; ನಗು: ಸಂತಸ; ಮುನಿ: ಋಷಿ; ನುಡಿ: ಮಾತಾಡು, ವಾಕ್; ಅವನೀಪತಿ: ರಾಜ; ಶಿರೋಮಣಿ: ಶ್ರೇಷ್ಠನಾದ;

ಪದವಿಂಗಡಣೆ:
ಆ+ ಮುಕುಂದನ+ ನೆನಹು +ನಮಗೆ +ನಿ
ರಾಮಯವು +ನೀವಿರಲು +ಚಿಂತಾ
ವೈಮನಸ್ಯದ+ ವೇಧೆ +ಮುರಿದುದು +ಸಾಕ್+ಅದಂತಿರಲಿ
ಈ +ಮಹ+ಉತ್ಪಾತ +ಪ್ರಬಂಧ +ವಿ
ರಾಮ +ಕರ್ಮವ +ಬೆಸಸಿಯೆನೆ+ ನಗು
ತಾ +ಮುನೀಶ್ವರ+ ನುಡಿದನ್+ಅವನೀಪತಿ+ ಶಿರೋಮಣಿಗೆ

ಅಚ್ಚರಿ:
(೧) ವ್ಯಾಸರನ್ನು ಮುನೀಶ್ವರ, ಧರ್ಮಜನನ್ನು ಅವನೀಪತಿ ಶಿರೋಮಣಿ ಎಂದು ಹೇಳಿರುವುದು
(೨) ನ ಕಾರದ ಸಾಲು ಪದ – ನೆನಹು ನಮಗೆ ನಿರಾಮಯವು ನೀವಿರಲು

ಪದ್ಯ ೧೨೧: ಯಾರು ಶ್ರೇಷ್ಠರು?

ಜಲಧಿಯೊಳು ದುಗ್ಧಾಬ್ಧಿ ತೀರ್ಥಾ
ವಳಿಗಳೊಳು ಸುರನದಿ ಮುನೀಶ್ವರ
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ
ಜಲರುಹಾಕ್ಷನು ದೈವದೊಳು ಕೇ
ಳುಳಿದ ಧರಣೀಪಾಲರೊಳಗ
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೨೧ ಪದ್ಯ)

ತಾತ್ಪರ್ಯ:
ಸಮುದ್ರಗಳಲ್ಲಿ ಕ್ಷೀರಸಮುದ್ರ, ತೀರ್ಥಗಳಲ್ಲಿ ಗಂಗಾನದಿ, ಮುನಿಗಳಲ್ಲಿ ವೇದವ್ಯಾಸ, ವ್ರತಿಗಳಲ್ಲಿ ಹನುಮಂತ, ದೇವತೆಗಳಲ್ಲಿ ವಿಷ್ಣು, ರಾಜರಲ್ಲಿ ಧರ್ಮರಾಯ ಇವರು ಶ್ರೇಷ್ಠರು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಜಲಧಿ: ಸಮುದ್ರ; ದುಗ್ಧ: ಹಾಲು; ಅಬ್ಧಿ: ಸಮುದ್ರ; ತೀರ್ಥ:ಪವಿತ್ರವಾದ ಜಲ; ಸುರನದಿ: ಗಂಗಾ; ಮುನಿ: ಋಷಿ; ವ್ರತಿ:ನಿಯಮಬದ್ಧವಾದ ನಡವಳಿಕೆಯುಳ್ಳವನು;ಜಲ: ನೀರು; ಜಲರುಹ: ಕಮಲ; ಅಕ್ಷ: ಕಣ್ಣು; ದೈವ: ದೇವತೆ; ಧರಣಿ: ಭೂಮಿ; ಧರಣೀಪಾಲ: ರಾಜ; ಅಗ್ಗ: ಶ್ರೇಷ್ಠತೆ; ಚಿತ್ತೈಸು: ಗಮನಿಸು; ಆವಳಿ: ಗುಂಪು, ಸಾಲು;

ಪದವಿಂಗಡಣೆ:
ಜಲಧಿಯೊಳು +ದುಗ್ಧ+ಅಬ್ಧಿ +ತೀರ್ಥ
ಆವಳಿಗಳೊಳು +ಸುರನದಿ+ ಮುನೀಶ್ವರ
ರೊಳಗೆ+ ವೇದವ್ಯಾಸನಾ+ ವ್ರತಿಗಳೊಳು +ಹನುಮಂತ
ಜಲರುಹಾಕ್ಷನು +ದೈವದೊಳು +ಕೇಳ್
ಉಳಿದ +ಧರಣೀಪಾಲರೊಳಗ್
ಅಗ್ಗಳೆಯನೈ+ ಧರ್ಮಜನು +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಕಮಲಕ್ಕೆ ಜಲರುಹ, ಗಂಗೆಗೆ ಸುರನದಿ ಎಂಬ ಪದದ ಬಳಕೆ

ಪದ್ಯ ೩೪: ಏಳರ ಮಹತ್ವವನ್ನರಿತವರು ಹೇಗೆ ಮುಕ್ತಿಯನ್ನು ಪಡೆಯುತ್ತಾರೆ?

ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪದಂಗಾ
ವಳಿ ಮುನೀಶ್ವರರುಗಳ ಧಾತುಗಡಣದ ವೇದಿಗಳ
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರೆಸಿಕೊಂಬರು ಮುಕ್ತಿ ಮಾರ್ಗವನು (ಉದ್ಯೋಗ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಏಳರ ಸಂಖ್ಯೇತವನ್ನು ಉಪಮಾನವನ್ನಾಗಿಸಿ ಮುಕ್ತಿಗೆ ದಾರಿಯನ್ನು ಸನತ್ಸುಜಾತರು ಸೂಚಿಸಿದ್ದಾರೆ. ಲವಣ, ಕಬ್ಬಿನಹಾಲು (ಇಕ್ಷು), ಸುರಾ, ಸರ್ಪಿ, ದಧಿ, ಕ್ಷೀರ, ನೀರು ಇವುಗಳಿರುವ ಏಳು ಸಮುದ್ರಗಳು; ಸಪ್ತ ಮಾತೃಕೆಯರಾದ ಬಾಹ್ಮಿ, ಮಾಹೇಶ್ವರಿ, ವಾರಾಹಿ, ವೈಷ್ಣವಿ, ಇಂದ್ರಾಣಿ, ಕೌಮಾರಿ, ಚಾಮುಂಡಾ; ಏಳು ವಾರಗಳಾದ ಭಾನು, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ; ಏಳು ಎತ್ತರದ ಪರ್ವತಗಳಾದ ಮಹೇಂದ್ರ, ಮಲಯ, ಸಹ್ಯ, ಶುಕ್ತಿಮತ್, ಋಕ್ಷ, ವಿಂಧ್ಯ, ಪಾರಿಯಾತ್ರ; ಸಪ್ತ ವಿಭಕ್ತಿಗಳು, ಸಪ್ತ ದ್ವೀಪಗಳಾದ ಜಂಬೂ, ಪ್ಲಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ, ಪುಷ್ಕರ; ಸಪ್ತ ಋಷಿಗಳಾದ ಅತ್ರಿ, ವಸಿಷ್ಠ, ಕಾಶ್ಯಪ, ಗೌತಮ, ಭಾರದ್ವಾಜ, ವಿಶ್ವಾಮಿತ್ರ, ಜಮದಗ್ನಿ; ದೇಹದಲ್ಲಿನ ಏಳು ಧಾತುಗಳಾದ ರಸ, ರಕ್ತ, ಮಾಂಸ, ಮೇಧಸ್ಸು, ಮಜ್ಜೆ, ಅಸ್ಥಿ, ಶುಕ್ರ, ಇವುಗಳ ಕಾಲದ ನಡೆ ರೀತಿಗಳನ್ನು ತಿಳಿದು ಯಾರು ಬಾಳುವರೋ ಅವರು ಮುಕ್ತಿಯ ಮಾರ್ಗಾವನ್ನು ಸೇರುತ್ತಾರೆ ಎಂದು ತಿಳಿಸಿದರು.

ಅರ್ಥ:
ಜಲಧಿ: ಸಮುದ್ರ, ಸಾಗರ; ಮಾತೃಕೆ: ಮಾತೆ, ತಾಯಿ; ವಾರ: ದಿನ; ಗಿರಿ: ಬೆಟ್ಟ; ಕುಲಗಿರಿ: ಎತ್ತರದ ಪರ್ವತಗಳು; ವಿಭಕ್ತಿ:ವ್ಯಾಕರಣದಲ್ಲಿ ಪ್ರಕೃತಿಗೆ ಪ್ರತ್ಯಯವು ಸೇರಿ ಸಿದ್ಧಿಸುವ ಅನ್ವಯ, ಏಳು ಎಂಬ ಸಂಕೇತ ಪದ; ದ್ವೀಪ: ಸಮುದ್ರದಿಂದ ಆವರಿಸಿದ ಭೂಭಾಗ; ಮುನೀಶ್ವರ: ಋಷಿ; ಧಾತು: ಮೂಲವಸ್ತು; ವೇದಿ:ಪಂಡಿತ, ವಿದ್ವಾಂಸ; ತಿಳಿ: ಅರಿತು; ಕಾಲ: ಸಮಯ; ಗತಿ: ಹರಿವು, ವೇಗ; ಗಮಕ: ಕ್ರಮ, ಅಣಿ; ಅರಿ: ತಿಳಿ; ನಡೆ: ಹೆಜ್ಜೆ ಹಾಕು; ನಿರ್ಮಳ: ನೆಮ್ಮದಿ, ನಿರಾಳ; ಎಡಹದೆ: ಬೀಳದೆ, ಮುಗ್ಗರಿಸದೆ; ಬೆರಸು: ಸೇರಿಸು; ಮುಕ್ತಿ: ಮೋಕ್ಷ, ಕೈವಲ್ಯ; ಮಾರ್ಗ: ದಾರಿ;

ಪದವಿಂಗಡಣೆ:
ಜಲಧಿ +ಮಾತೃಕೆ +ವಾರ +ಕುಲಗಿರಿ
ಗಳು+ ವಿಭಕ್ತಿ +ದ್ವೀಪದಂಗಾ
ವಳಿ +ಮುನೀಶ್ವರರುಗಳ +ಧಾತುಗಡಣದ+ ವೇದಿಗಳ
ತಿಳಿದು +ಕಾಲದ +ಗತಿಯ +ಗಮಕಂ
ಗಳನರಿದು +ನಡೆವವರುಗಳು +ನಿ
ರ್ಮಳದಲ್+ಎಡಹದೆ +ಬೆರೆಸಿಕೊಂಬರು +ಮುಕ್ತಿ +ಮಾರ್ಗವನು

ಅಚ್ಚರಿ:
(೧) ೭ನ್ನು ಸೂಚಿಸುವ ಪದಗಳ ಬಳಕೆ – ಜಲಧಿ, ಮಾತೃಕೆ, ವಾರ, ಕುಲಗಿರಿ, ವಿಭಕ್ತಿ, ದ್ವೀಪ, ಮುನೀಶ್ವರ, ಧಾತು