ಒರಲಿ ಕೆಡೆದರು ಹಡಪಿಗರು ಸೀ
ಗುರಿಯವರು ಸತ್ತಿಗೆಯವರು ತ
ನ್ನರಮನೆಯ ವಿಶ್ವಾಸಿಗಳು ಬಿಲುಸರಳ ನೀಡುವರು
ಗುರುವಲಾ ಮುತ್ತಯ್ಯ ನಮ್ಮನು
ಹೊರೆದ ತಂದೆಗೆ ತಪ್ಪಿದರು ಕಡು
ನರಕಿಗಳು ಪಾಂಡವರು ಸುಡು ಸುಡೆನುತ್ತ ಹೊರಳಿದರು (ಭೀಷ್ಮ ಪರ್ವ, ೧೦ ಸಂಧಿ, ೧೨ ಪದ್ಯ)
ತಾತ್ಪರ್ಯ:
ಭೀಷ್ಮನ ಜೊತೆಯಲ್ಲಿದ್ದ ಸೇವಕರು, ಚಾಮರ ಛತ್ರ ಧಾರರು, ಅವನ ಮನೆಯ ವಿಶ್ವಾಸಿಕರು, ಅವನಿಗೆ ಬಿಲ್ಲು ಬಾಣಗಳನ್ನು ಕೊಡುವವರು ಚೀರಿ ಕೆಳಗೆ ಬಿದ್ದು ಹೊರಳಾಡಿ, ಭೀಷ್ಮನು ಪಿತಾಮಹನಲ್ಲವೇ? ಪಾಂಡವರನ್ನು ಸಾಕಿ ಬೆಳಸಿದನಲ್ಲವೇ? ಅವನಿಗೆ ಕೇಡು ಬಗೆದು ಪಾಂಡವರು ನಾರಕಿಗಳು, ಅವರನ್ನು ಸುಡು ಸುಡು ಎಂದು ಆಕ್ರಂದಿಸಿದರು.
ಅರ್ಥ:
ಒರಲು: ಅರಚು, ಕೂಗಿಕೊಳ್ಳು; ಕೆಡೆ: ಬೀಳು, ಕುಸಿ; ಹಡಪಿಗ: ತನ್ನ ಒಡೆಯನಿಗೆ ಅಡಕೆ ಎಲೆಯ ಚೀಲವನ್ನು ಹಿಡಿದು ಸೇವೆ ಮಾಡುವವನು; ಸೀಗುರಿ: ಚಾಮರ; ಸತ್ತಿಗೆ: ಕೊಡೆ, ಛತ್ರಿ; ಅರಮನೆ: ರಾಜರ ಆಲಯ; ವಿಶ್ವಾಸಿ: ನಂಬಿಕೆಗೆ ಪಾತ್ರವಾದುದು; ಬಿಲು: ಬಿಲ್ಲು, ಚಾಪ; ಸರಳ: ಬಾಣ; ಗುರು: ಆಚಾರ್ಯ; ಮುತ್ತಯ್ಯ: ಮುತ್ತಾತ; ಹೊರೆ:ರಕ್ಷಣೆ, ಆಶ್ರಯ; ತಂದೆ: ಪಿತ; ತಪ್ಪಿದ: ಕೈಬಿಡು; ಕಡು: ತುಂಬ, ಬಲು; ನರಕ: ಅಧೋಲೋಕ; ಸುಡು: ದಹಿಸು; ಹೊರಳು: ತಿರುವು, ಬಾಗು;
ಪದವಿಂಗಡಣೆ:
ಒರಲಿ +ಕೆಡೆದರು +ಹಡಪಿಗರು +ಸೀ
ಗುರಿಯವರು +ಸತ್ತಿಗೆಯವರು+ ತ
ನ್ನರಮನೆಯ +ವಿಶ್ವಾಸಿಗಳು+ ಬಿಲು+ಸರಳ +ನೀಡುವರು
ಗುರುವಲಾ +ಮುತ್ತಯ್ಯ +ನಮ್ಮನು
ಹೊರೆದ +ತಂದೆಗೆ +ತಪ್ಪಿದರು +ಕಡು
ನರಕಿಗಳು+ ಪಾಂಡವರು+ ಸುಡು +ಸುಡೆನುತ್ತ +ಹೊರಳಿದರು
ಅಚ್ಚರಿ:
(೧) ಭೀಷ್ಮನ ಸಾವಿಗೆ ನೊಂದವರು – ಹಡಪಿಗರು, ಸೀಗುರಿಯವರು, ಸತ್ತಿಗೆಯವರು, ವಿಶ್ವಾಸಿಗಳು