ದೇವಿಯೆಂದಳು ಸತ್ಯಭಾಮಾ
ದೇವಿಯರು ಮುಗುದೆಯರಲಾ ನಾ
ನಾವ ಮಂತ್ರದ ತಂತ್ರ ತೊಡಕಿನ ತೋಟಿಯುಳ್ಳವಳು
ಭಾವಶುದ್ಧಿಯಲೈವರನು ಸಂ
ಭಾವಿಸುವೆನವರವರ ಚಿತ್ತದ
ಭಾವವರಿದುಪಚರಿಸುವೆನು ಚತುರತೆಯ ಚಾಳಿಯಲಿ (ಅರಣ್ಯ ಪರ್ವ್, ೧೬ ಸಂಧಿ, ೨೨ ಪದ್ಯ)
ತಾತ್ಪರ್ಯ:
ದ್ರೌಪದಿಯು, ಸತ್ಯಭಾಮೆ, ನೀನು ಮುಗ್ಧೆ! ನನಗೆ ಯಾವ ಮಂತ್ರ, ತಂತ್ರಗಳೂ ಗೊತ್ತಿಲ್ಲ. ಭಾವಶುದ್ಧಿಯಿಂದ ಅವರವರ ಮನಸ್ಸಿನ ಭಾವವನ್ನರಿತು ಉಪಚರಿಸಿ ತೃಪ್ತಿಗೊಳಿಸುತ್ತೇನೆ. ಇದು ಕೇವಲ ಸಹಜ ಚಾತುರ್ಯ ಎಂದು ಚತುರವಾಗಿ ಉತ್ತರಿಸಿದಳು.
ಅರ್ಥ:
ದೇವಿ: ಹೆಣ್ಣು, ಸ್ತ್ರೀ; ಎಂದಳು: ಹೇಳಿದಳು; ಮುಗುದೆ: ಕಪಟವರಿಯದವಳು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ತಂತ್ರ: ಇಂದ್ರಜಾಲ; ತೊಡಕು: ತೊಂದರೆ; ತೋಟಿ: ಕಲಹ, ಜಗಳ; ಭಾವ: ಮನೋಧರ್ಮ; ಶುದ್ಧ: ನಿರ್ಮಲ; ಸಂಭಾವಿಸು: ಧ್ಯಾನ ಮಾಡು, ಯೋಚಿಸು; ಚಿತ್ತ: ಮನಸ್ಸು; ಅರಿ: ತಿಳಿ; ಉಪಚರಿಸು: ಪೋಷಿಸು, ಸೇವೆ, ಶುಶ್ರೂಷೆ; ಚತುರೆ: ಬುದ್ಧಿವಂತೆ; ಚಾಳಿ: ನಡವಳಿಕೆ;
ಪದವಿಂಗಡಣೆ:
ದೇವಿ+ಎಂದಳು +ಸತ್ಯಭಾಮಾ
ದೇವಿಯರು +ಮುಗುದೆಯರಲಾ+ ನಾನ್
ಆವ +ಮಂತ್ರದ +ತಂತ್ರ +ತೊಡಕಿನ+ ತೋಟಿಯುಳ್ಳವಳು
ಭಾವಶುದ್ಧಿಯಲ್+ಐವರನು +ಸಂ
ಭಾವಿಸುವೆನ್+ಅವರವರ +ಚಿತ್ತದ
ಭಾವವ್+ಅರಿದ್+ಉಪಚರಿಸುವೆನು +ಚತುರತೆಯ +ಚಾಳಿಯಲಿ
ಅಚ್ಚರಿ:
(೧) ಸತ್ಯಭಾಮೆಯನ್ನು ಸ್ನೇಹಭಾವದಲ್ಲಿ ಕರೆದ ಪರಿ – ಸತ್ಯಭಾಮಾದೇವಿಯರು ಮುಗುದೆಯರಲಾ
(೨) ಗಂಡನನ್ನು ಸಲಹುವ ಪರಿ – ಭಾವಶುದ್ಧಿಯಲೈವರನು ಸಂಭಾವಿಸುವೆನವರವರ ಚಿತ್ತದ
ಭಾವವರಿದುಪಚರಿಸುವೆನು