ದೇವನಂಘ್ರಿಯ ಮುಸುಕಿದವು ಮುಕು
ಟಾವಳಿಗಳೈವರ ಸತಿಯ ಸಂ
ಭಾಷಣೆಯ ಮಧುರೋಕ್ತಿರಸದಲಿ ನಗುತ ಮನ್ನಿಸಿದ
ಓವಿದನು ಮುರವೈರಿ ಕಾರು
ಣ್ಯಾವ ಲೋಚನದಿಂದ ನಿನ್ನವ
ರಾವ ಭವದಲಿ ಭಜಿಸಿದರೊ ನಿಷ್ಠೆಯಲಿ ಹರಿಪದವ (ಸಭಾ ಪರ್ವ, ೧೨ ಸಂಧಿ, ೧೩ ಪದ್ಯ)
ತಾತ್ಪರ್ಯ:
ಪಂಚಪಾಂಡವರು ತಮ್ಮ ಕಿರೀಟವನ್ನು ಶ್ರೀಕೃಷ್ಣನ ಪಾದಗಳಿಗೆ ಸಮರ್ಪಿಸಿ ನಮಸ್ಕರಿಸಿದರು. ದ್ರೌಪದಿಯ ಮಧುರವಾದ ಮಾತುಗಳನ್ನು ಮನ್ನಿಸಿದನು. ಕಾರುಣ್ಯದ ದೃಷ್ಠಿಯಿಂದ ಕೃಷ್ಣನು ಎಲ್ಲರನ್ನು ಆದರಿಸಿದನು. ಎಲೈ ಜನಮೇಜಯ, ನಿನ್ನ ಪೂರ್ವಜರು ಯಾವ ಜನ್ಮದಲ್ಲಿ ಶ್ರೀಕೃಷ್ಣನನ್ನು ನಿಷ್ಠೆಯಿಂದ ಸೇವಿಸಿದ್ದರೋ ಏನೋ ತಿಳಿಯದು.
ಅರ್ಥ:
ದೇವ: ಭಗವಂತ; ಅಂಘ್ರಿ: ಪಾದ; ಮುಸುಕು: ಹೊದಿಕೆ; ಮುಕುಟ: ಕಿರೀಟ; ಆವಳಿ: ಸಾಲು; ಸತಿ: ಹೆಂಡತಿ; ಸಂಭಾಷಣೆ: ಮಾತು; ಮಧುರ: ಸಿಹಿ; ಉಕ್ತಿ: ಮಾತು, ವಾಣಿ; ರಸ: ಸಾರ; ನಗು: ಸಂತಸ; ಮನ್ನಿಸು: ಒಪ್ಪು, ಅಂಗೀಕರಿಸು; ಓವಿ: ಒಲಿದು, ಪ್ರೀತಿಯಿಂದ; ಮುರವೈರಿ: ಕೃಷ್ಣ; ಕಾರುಣ್ಯ: ದಯೆ; ಲೋಚನ:ಕಣ್ಣು; ಭವ: ಜನ್ಮ; ಭಜಿಸು: ಆರಾಧಿಸು; ನಿಷ್ಠೆ: ಸ್ಥಿತಿ; ಶ್ರದ್ಧೆ; ಹರಿ: ಕೃಷ್ಣ; ಪದ: ಪಾದ;
ಪದವಿಂಗಡಣೆ:
ದೇವನ್+ಅಂಘ್ರಿಯ +ಮುಸುಕಿದವು+ ಮುಕು
ಟಾವಳಿಗಳ್+ಐವರ +ಸತಿಯ +ಸಂ
ಭಾಷಣೆಯ +ಮಧುರೋಕ್ತಿ+ರಸದಲಿ +ನಗುತ +ಮನ್ನಿಸಿದ
ಓವಿದನು +ಮುರವೈರಿ +ಕಾರು
ಣ್ಯಾವ +ಲೋಚನದಿಂದ +ನಿನ್ನವರ್
ಆವ +ಭವದಲಿ +ಭಜಿಸಿದರೊ +ನಿಷ್ಠೆಯಲಿ +ಹರಿಪದವ
ಅಚ್ಚರಿ:
(೧) ಹರಿ, ಮುರವೈರಿ, ದೇವ – ಕೃಷ್ಣನನ್ನು ಕರೆದ ಬಗೆ
(೨) ನಮಸ್ಕರಿಸಿದರು ಎಂದು ಹೇಳಲು – ದೇವನಂಘ್ರಿಯ ಮುಸುಕಿದವು ಮುಕುಟಾವಳಿ