ಪದ್ಯ ೮: ವ್ಯಾಧರ ಕೇರಿಯು ಹೇಗಿತ್ತು?

ಬಸೆನೆಣನ ಸುಂಟಗೆಯ ಹರಹಿದ
ಹಸಿಯತೊಗಲಿನ ತಳಿತ ಖಂಡದ
ಹಸರದುರುಗಲ ಕಾಳಿಜದ ಜಂಗಡೆಯ ಗಳಿಗೆಗಳ
ಬಸೆಯ ಹರವಿಯ ಸಾಲತೊರಳೆಗೆ
ಬೆಸಳಿಗೆಯ ಕುರಿದಲೆಯ ಹಂತಿಯ
ಕುಸುರಿದೆಲುವಿನ ಕೋದ ಮೀನಂಗಡಿಯಲೈತಂದ (ಅರಣ್ಯ ಪರ್ವ, ೧೬ ಸಂಧಿ, ೮ ಪದ್ಯ)

ತಾತ್ಪರ್ಯ:
ನೀರು ಬಸಿಯುತ್ತಿರುವ ಕೊಬ್ಬು, ಪ್ರಾಣಿಯ ಹೃದಯ, ಹರಡಿದ ಚರ್ಮಗಳು, ಮಾಂಸಖಂಡಗಳು, ಕೊಬ್ಬಿನ ಬುಟ್ಟಿಗಳು, ಬಸಿಯುವ ಪುಟ್ಟಿಗಳು, ಗಲ್ಮಾದಿಗಳನ್ನು ಹುರಿಯುವ ಅಗ್ಗಿಷ್ಟಿಕೆ, ಕುರಿದಲೆಗಳು, ಮೀನಿನ ಅಂಗಡಿಗಳನ್ನು ನೋಡುತ್ತಾ ಬ್ರಹ್ಮಚಾರಿಯು ವ್ಯಾಧರ ಕೇರಿಯಲ್ಲಿ ಬಂದನು.

ಅರ್ಥ:
ಬಸೆ: ಕೊಬ್ಬು; ಸುಂಟಗೆ: ಹೃದಯದ ಮಾಂಸ; ಹರಹು: ಹಬ್ಬುವಿಕೆ, ಪ್ರಸರ; ಹಸಿ: ಬಯಸು; ತೊಗಲು: ಚರ್ಮ, ತ್ವಕ್ಕು; ತಳಿತ:ಚಿಗುರಿದ; ಖಂಡ: ತುಂಡು, ಚೂರು; ಹಸರ: ಹರಡುವಿಕೆ; ಉರುಗ: ; ಕಾಳಿಜ: ಪಿತ್ತಾಶಯ; ಜಂಗಡೆ: ಮೀನಖಂಡ, ಮಾಂಸದ ರಾಶಿ; ಗಳಿಗೆ: ಮಡಿಕೆ; ಹರವಿ: ಗಡಿಗೆ; ಸಾಲ: ಸುತ್ತುಗೋಡೆ, ಪ್ರಾಕಾರ; ತೊರಳೆ: ಗುಲ್ಮ, ಪ್ಲೀಹ; ಬೆಸಳಿಗೆ: ಬಾಣಲಿಗೆ, ತವೆ; ಕುರಿ: ಆಡು; ತಲೆ: ಶಿರ; ಹಂತಿ: ಸಾಲು; ಪಂಕ್ತಿ; ಕುಸುರಿ: ತುಂಡು; ಎಲುಬು: ಮೂಳೆ; ಕೋದು: ಸೇರಿಸು; ಮೀನು:ಮತ್ಸ್ಯ; ಅಂಗಡಿ: ವಸ್ತುಗಲನ್ನು ಮಾರುವ ಸ್ಥಳ; ಐತರು: ಬಂದು ಸೇರು;

ಪದವಿಂಗಡಣೆ:
ಬಸೆ+ನೆಣನ +ಸುಂಟಗೆಯ +ಹರಹಿದ
ಹಸಿಯ+ತೊಗಲಿನ +ತಳಿತ +ಖಂಡದ
ಹಸರದ್+ಉರುಗಲ +ಕಾಳಿಜದ +ಜಂಗಡೆಯ +ಗಳಿಗೆಗಳ
ಬಸೆಯ +ಹರವಿಯ +ಸಾಲ+ತೊರಳೆಗೆ
ಬೆಸಳಿಗೆಯ +ಕುರಿ+ತಲೆಯ+ ಹಂತಿಯ
ಕುಸುರಿದ್+ಎಲುವಿನ +ಕೋದ +ಮೀನಂಗಡಿಯಲ್+ಐತಂದ

ಅಚ್ಚರಿ:
(೧) ಬೇಡರ ಬೀದಿಯನ್ನು ವಿವರಿಸುವ ಪದ್ಯ – ತೊಗಲು, ಖಂಡ, ಕಾಳಿಜ, ಜಂಗಡೆ, ಕುರಿತಲೆ, ಹಂತಿ, ಮೀನು – ಪದಗಳ ಬಳಕೆ