ಪದ್ಯ ೨೯: ಸಾತ್ಯಕಿಯು ಭೀಮನಲ್ಲಿ ಏನು ಹೇಳಿದನು?

ಮಿಡುಕಿದನು ಸಾತ್ಯಕಿ ವೃಕೋದರ
ನೊಡೆಯವಚಿದನು ಮತ್ತೆ ಪವನಜ
ಬಿಡು ನಿನಗೆ ನೃಪನಾಣೆ ಕುಡಿವೆನು ಖಳನ ಶೋಣಿತವ
ಬಿಡು ಬಿಡಕಟಾ ಭೀಮ ಸಾತ್ಯಕಿ
ಹಿಡಿಹಿಡಿಯ ಹಮ್ಮೈಸುವನು ಬಿಡು
ತೊಡಕಿ ನೋಡಲಿಯೆನುತ ಧೃಷ್ಟದ್ಯುಮ್ನನಳ್ಳಿರಿದ (ದ್ರೋಣ ಪರ್ವ, ೧೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸಾತ್ಯಕಿಯು ತಪ್ಪಿಸಿಕೊಳ್ಳಲು ಯತ್ನಿಸಿದನು ಭೀಮನು ಅವನನ್ನು ಮತ್ತೆ ಅವಚಿದನು. ಸಾತ್ಯಕಿಯು, ಭೀಂಅ ದೊರೆಯಾಣೆ ನನ್ನನ್ನು ಬಿಡು, ಆ ನೀಚನ ರಕ್ತವನ್ನು ಕುಡಿಯುತ್ತೇನೆ ಎಂದನು. ಧೃಷ್ಟದ್ಯುಮ್ನನು ಭೀಮಾ ಬಿಟ್ಟುಬಿಡು, ಸಾತ್ಯಕಿ ಮಿಸುಕಾಡುತ್ತಿದ್ದಾನೆ ಅವನನ್ನು ಬಿಡು, ನನ್ನೊಡನೆ ಯುದ್ಧಮಾಡಿ ನೋಡಲಿ ಎಂದನು.

ಅರ್ಥ:
ಮಿಡುಕು: ಅಲುಗಾಟ; ಒಡೆಯ: ನಾಯಕ; ಅವಚು: ಆವರಿಸು, ಅಪ್ಪಿಕೊಳ್ಳು; ಪವನಜ: ಭೀಮ; ಬಿಡು: ತೊರೆ; ನೃಪ: ರಾಜ; ಆಣೆ: ಪ್ರಮಾಣ; ಕುಡಿ: ಪಾನಮಾದು; ಖಳ: ದುಷ್ಟ; ಶೋಣಿತ: ರಕ್ತ; ಅಕಟ: ಅಯ್ಯೋ; ಹಿಡಿ: ಗ್ರಹಿಸು; ಹಮ್ಮೈಸು: ಎಚ್ಚರ ತಪ್ಪು, ಮೂರ್ಛೆ ಹೋಗು; ತೊಡಕು: ಸಿಕ್ಕು, ಗೋಜು; ಅಳ್ಳಿರಿ: ನಡುಗಿಸು, ಚುಚ್ಚು;

ಪದವಿಂಗಡಣೆ:
ಮಿಡುಕಿದನು +ಸಾತ್ಯಕಿ +ವೃಕೋದರ
ನೊಡೆ+ಅವಚಿದನು +ಮತ್ತೆ +ಪವನಜ
ಬಿಡು +ನಿನಗೆ +ನೃಪನಾಣೆ+ ಕುಡಿವೆನು+ ಖಳನ +ಶೋಣಿತವ
ಬಿಡು +ಬಿಡ್+ಅಕಟಾ +ಭೀಮ +ಸಾತ್ಯಕಿ
ಹಿಡಿಹಿಡಿಯ+ ಹಮ್ಮೈಸುವನು+ ಬಿಡು
ತೊಡಕಿ +ನೋಡಲಿ+ಎನುತ +ಧೃಷ್ಟದ್ಯುಮ್ನನ್+ಅಳ್ಳಿರಿದ

ಅಚ್ಚರಿ:
(೧) ವೃಕೋದರ, ಪವನಜ, ಭೀಮ – ಭೀಮನನ್ನು ಕರೆದ ಪರಿ
(೨) ಬಿಡು ಬಿಡಕಟಾ, ಹಿಡಿಹಿಡಿ – ಜೋಡಿ ಪದಗಳ ಬಳಕೆ

ಪದ್ಯ ೨೪: ಅರ್ಜುನನ ಮನಸ್ಸೇಕೆ ದುಃಖಿಸಿತು?

ಒಡಲನೊಡೆದಾ ಜ್ಯೋತಿ ಗಗನಕೆ
ನಡೆದುದಿತ್ತಲು ಸುರರು ಮರ್ತ್ಯರು
ಸುಡು ಸುಡೆಂದುದು ಸಾತ್ಯಕಿಯ ದುಷ್ಕರ್ಮವಾಸನೆಗೆ
ಹಿಡಿದ ದುಗುಡದಲರ್ಜುನನು ಮನ
ಮಿಡುಕಿದನು ಕುರುನೃಪರು ಶೋಕದ
ಕಡಲೊಳದ್ದರು ಬೈವುತಿರ್ದರು ಕೃಷ್ಣಫಲುಗುಣರ (ದ್ರೋಣ ಪರ್ವ, ೧೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೂರಿಶ್ರವನ ಆತ್ಮಜ್ಯೋತಿಯು ದೇಹವನ್ನು ಬಿಟ್ಟು ಆಕಾಶಕ್ಕೆ ಹೋಯಿತು. ಮನುಷ್ಯರು, ದೇವತೆಗಳು ಸಾತ್ಯಕಿಯ ದುಷ್ಕರ್ಮದ ವಾಸನೆಯನ್ನು ಸುಡು ಎಂದರು. ಅರ್ಜುನನ ಮನ ಮಿಡಿದು ದುಃಖಿಸಿದನು. ಕುರುರಾಜರು ಶೋಕಸಾಗರದಲ್ಲಿ ಮುಳುಗಿ ಕೃಷ್ಣಾರ್ಜುನರನ್ನು ಬೈದರು.

ಅರ್ಥ:
ಒಡಲು: ದೇಹ; ಒಡೆ: ಸೀಳು; ಜ್ಯೋತಿ: ಬೆಳಕು, ಕಾಂತಿ; ಗಗನ: ಆಗಸ; ನಡೆ: ಚಲಿಸು; ಸುರ: ಅಮರ; ಮರ್ತ್ಯ: ಮನುಷ್ಯ; ಸುಡು: ದಹಿಸು; ದುಷ್ಕರ್ಮ: ಕೆಟ್ಟ ಕಾರ್ಯ; ವಾಸನೆ: ಬಯಕೆ, ಆಸೆ; ಹಿಡಿ: ಗ್ರಹಿಸು; ದುಗುಡ: ದುಃಖ; ಮನ: ಮನಸ್ಸು; ಮಿಡುಕು: ಅಲುಗಾಟ, ಚಲನೆ; ನೃಪ: ರಾಜ; ಶೋಕ: ದುಃಖ; ಕಡಲು: ಸಾಗರ; ಬೈವು: ಜರಿ; ಅದ್ದು: ತೋಯು;

ಪದವಿಂಗಡಣೆ:
ಒಡಲನ್+ಒಡೆದ್+ಆ+ ಜ್ಯೋತಿ +ಗಗನಕೆ
ನಡೆದುದ್+ಇತ್ತಲು +ಸುರರು +ಮರ್ತ್ಯರು
ಸುಡು +ಸುಡೆಂದುದು +ಸಾತ್ಯಕಿಯ +ದುಷ್ಕರ್ಮ+ವಾಸನೆಗೆ
ಹಿಡಿದ +ದುಗುಡದಲ್+ಅರ್ಜುನನು +ಮನ
ಮಿಡುಕಿದನು +ಕುರು+ನೃಪರು +ಶೋಕದ
ಕಡಲೊಳ್+ಅದ್ದರು +ಬೈವುತಿರ್ದರು +ಕೃಷ್ಣ+ಫಲುಗುಣರ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಒಡಲನೊಡೆದಾ ಜ್ಯೋತಿ ಗಗನಕೆನಡೆದುದ್
(೨) ಅರ್ಜುನನ ಮನಃಸ್ಥಿತಿ – ಹಿಡಿದ ದುಗುಡದಲರ್ಜುನನು ಮನಮಿಡುಕಿದನು