ಪದ್ಯ ೧೨: ಬೆಳಗಿನ ಜಾವ ಹೇಗೆ ಕಂಡಿತು?

ಎಲೆ ಮಿಡುಕದೆರಡೊಡ್ಡು ಲೆಪ್ಪದ
ಬಲದವೊಲು ನಿದ್ರಾಸಮುದ್ರವ
ಮುಳುಗಿ ಝೊಮ್ಮಿನ ಝಾಡಿಯಲಿ ಝೊಂಪಿಸಿದುದರೆ ಜಾವ
ತಳಿತ ಮರವೆಯ ಪಾಳೆಯದ ಕ
ಗ್ಗೊಲೆಗೆ ಕವಿವ ಗುರೂಪದೇಶಾ
ವಳಿಯವೊಲು ಮೈದೋರುದುವು ಹಿಮರುಚಿಯ ರಶ್ಮಿಗಳು (ದ್ರೋಣ ಪರ್ವ, ೧೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರ್ಧಯಾಮದ ಕಾಲ, ಎರಡೂ ಪಡೆಗಳು ಗೊಂಬೆಗಳಂತೆ ನಿದ್ದೆಯಲ್ಲಿ ಮುಳುಗಿದ್ದವು. ತಾನಾರೆಂಬ ಅಜ್ಞಾನದ ಪಾಳೆಯಕ್ಕೆ ಗುರೂಪದೇಶದ ದಾಳಿ ಕವಿಯುವಂತೆ ಬೆಳದಿಂಗಳು ಮೈದೋರಿತು.

ಅರ್ಥ:
ಲೆಪ್ಪ: ಬಳಿಯುವ ವಸ್ತು, ಲೇಪನ, ಎರಕ; ಬಲ: ಬಿಗಿ, ಗಟ್ಟಿ; ನಿದ್ರೆ: ಶಯನ; ಸಮುದ್ರ: ಸಾಗರ; ಮುಳುಗು: ಮಿಂದು; ಝೊಮ್ಮು:ಪುಳುಕ; ಝಾಡಿ: ಕಾಂತಿ; ಝೊಂಪಿಸು: ನಿದ್ರಿಸು; ಜಾವ: ಗಳಿಗೆ, ಸಮಯ; ತಳಿತ: ಚಿಗುರಿದ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಪಾಳೆಯ: ಬೀಡು, ಶಿಬಿರ; ಕಗ್ಗೊಲೆ: ಹತ್ಯೆ; ಕವಿ: ಆವರಿಸು; ಗುರು: ಆಚಾರ್ಯ; ಉಪದೇಶ: ಬೋಧಿಸುವುದು; ಆವಳಿ: ಸಾಲು; ಮೈದೋರು: ಕಾಣಿಸು; ಹಿಮ: ಮಂಜಿನ ಹನಿ; ರಶ್ಮಿ: ಕಿರಣ;

ಪದವಿಂಗಡಣೆ:
ಎಲೆ +ಮಿಡುಕದ್+ಎರಡ್+ಒಡ್ಡು +ಲೆಪ್ಪದ
ಬಲದವೊಲು +ನಿದ್ರಾ+ಸಮುದ್ರವ
ಮುಳುಗಿ +ಝೊಮ್ಮಿನ +ಝಾಡಿಯಲಿ +ಝೊಂಪಿಸಿದುದರೆ+ ಜಾವ
ತಳಿತ +ಮರವೆಯ +ಪಾಳೆಯದ +ಕ
ಗ್ಗೊಲೆಗೆ +ಕವಿವ +ಗುರು+ಉಪದೇಶ
ಆವಳಿಯವೊಲು +ಮೈದೋರುದುವು +ಹಿಮರುಚಿಯ +ರಶ್ಮಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಲೆ ಮಿಡುಕದೆರಡೊಡ್ಡು ಲೆಪ್ಪದ ಬಲದವೊಲು; ತಳಿತ ಮರವೆಯ ಪಾಳೆಯದ ಕಗ್ಗೊಲೆಗೆ ಕವಿವ ಗುರೂಪದೇಶಾವಳಿಯವೊಲು

ಪದ್ಯ ೯: ಕುದುರೆಗಳು ಹೇಗೆ ಮಲಗಿದ್ದವು?

ಬಾಯ ಲೋಳೆಗಳಿಳಿಯೆ ಮೈಹಳು
ವಾಯಿ ಮಿಗೆ ತುದಿ ಖುರವನೂರಿ ನ
ವಾಯಿ ಮಿಗಲರೆನೋಟದಾಲಿಯ ಮಿಡುಕದವಿಲಣದ
ಲಾಯದಲಿ ಲಂಬಿಸಿದವೊಲು ವಾ
ನಾಯುಜದ ಸಾಲೆಸೆದುದೊರಗಿದ
ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ (ದ್ರೋಣ ಪರ್ವ, ೧೭ ಸಂಧಿ, ೯ ಪದ್ಯ)

ತಾತ್ಪರ್ಯ:
ಬಾಯಿಂದ ನೊರೆಯಿಳಿಯುತ್ತಿರಲು, ಮೈ ಬೆಂಡಾಗಿ ತುದಿಗೊರಸನ್ನೂರಿ ಕಣ್ಣನ್ನು ಅರೆತೆರೆದು ಲಾಯದಲ್ಲಿ ಮಲಗಿದಂತೆ ಕುದುರೆಗಳ ಸಾಲು ಮಲಗಿತ್ತು. ರಾವುತರ ಕಿರೀಟಗಳು ಮರಗೋಡಿನ ಮೇಲಿದ್ದವು.

ಅರ್ಥ:
ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಇಳಿ: ಕೆಳಕ್ಕೆ ಬೀಳು; ಮೈ: ತನು; ಹಳುವ: ಕಾಡು; ಮಿಗೆ: ಅಧಿಕ; ತುದಿ: ಕೊನೆ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಊರು: ಮೆಟ್ಟು; ನವಾಯಿ: ಹೊಸರೀತಿ, ಠೀವಿ; ಮಿಗಲು: ಹೆಚ್ಚು; ಅರೆ: ಅರ್ಧ; ನೋಟ: ದೃಷ್ಥಿ; ಆಲಿ: ಕಣ್ಣು; ಮಿಡುಕು: ಅಲುಗಾಟ, ಚಲನೆ; ಲಾಯ: ಕುದುರೆಗಳನ್ನು ಕಟ್ಟುವ ಸ್ಥಳ, ಅಶ್ವಶಾಲೆ; ಲಂಬಿಸು: ತೂಗಾಡು, ಜೋಲಾಡು; ವಾನಾಯುಜ: ಕುದುರೆ; ಸಾಲು: ಆವಳಿ; ಒರಗು: ಮಲಗು, ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಣಿ: ಬೆಲೆಬಾಳುವ ರತ್ನ; ಮಕುಟ: ಕಿರೀಟ; ಮರಗೋಡು: ಕುದುರೆಯ ನೆತ್ತಿಗೆ ಕಟ್ಟಿದ ಲೋಹದ ರಕ್ಷೆ; ಓಲೈಸು: ಸೇವೆಮಾಡು, ಉಪಚರಿಸು;

ಪದವಿಂಗಡಣೆ:
ಬಾಯ +ಲೋಳೆಗಳ್+ಇಳಿಯೆ +ಮೈಹಳು
ವಾಯಿ +ಮಿಗೆ +ತುದಿ +ಖುರವನ್+ಊರಿ +ನ
ವಾಯಿ +ಮಿಗಲ್+ಅರೆನೋಟದ್+ಆಲಿಯ +ಮಿಡುಕದವಿಲಣದ
ಲಾಯದಲಿ +ಲಂಬಿಸಿದವೊಲು+ ವಾ
ನಾಯುಜದ +ಸಾಲೆಸೆದುದ್+ಒರಗಿದ
ರಾಯ +ರಾವ್ತರ+ ಮಣಿಮಕುಟ+ ಮರಗೋಡನ್+ಓಲೈಸೆ

ಅಚ್ಚರಿ:

(೧) ವಾನಾಯುಜ – ಕುದುರೆಗಳನ್ನು ಕರೆದ ಪರಿ
(೨) ಲಾಯ, ಬಾಯ, ರಾಯ – ಪ್ರಾಸ ಪದಗಳು
(೩) ಕುದುರೆಗಳು ಮಲಗಿದ ಪರಿ – ವಾನಾಯುಜದ ಸಾಲೆಸೆದುದೊರಗಿದ ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ

ಪದ್ಯ ೨೧: ಭೀಮನೇಕೆ ಮರುಗಿದನು?

ಮಿಡುಕದದು ಮಹಿಯಿಂದ ಭೀಮನ
ಕಡುಹು ನಿಮ್ದುದು ಬಾಲದಲಿ ತುದಿ
ನಡುಗದನಿಲಜನಂಗವಟ್ಟದ ಕಡುಹು ಕಂಪಿಸದು
ತೊಡಕೆ ಕೆಟ್ಟುದು ಕಾರ್ಯ ದುರ್ಬಲ
ನೊಡನೆ ಭಂಗವ್ಯಾಪ್ತಿ ತನ್ನನು
ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಹನುಮನ ಬಾಲವು ಭೂಮಿಯಿಂದ ಒಂದು ಚೂರು ಅಲುಗಾಡಲಿಲ್ಲ. ಭೀಮನ ಶಕ್ತಿಯು ಅದರೆದುರು ನಿಂತು ಹೋಯಿತು. ಬಾಲದ ತುದಿಯೂ ನಡುಗಲಿಲ್ಲ. ಭೀಮನ ಸರ್ವಶಕ್ತಿಯ ಪ್ರಯೋಗವೂ ನಿಷ್ಫಲವಾಯಿತು. ಆಗ ಭೀಮನು ಕಾರ್ಯದಲ್ಲಿ ತೊಡಗಿ ಕೆಟ್ಟು ಹೋದೆ, ದುರ್ಬಲನ ಜೊತೆ ಹೋರಿ ಅವಮಾನಿತನಾದೆ, ಹೀಗೆ ಯತ್ನದಲ್ಲಿ ಸೋತ ನನ್ನನ್ನು ಸುಡಬೇಕು ಎಂದುಕೊಂಡು ಹಿಂದಕ್ಕೆ ಸರಿದು ತುಂಬ ತಳಮಳಗೊಂಡನು.

ಅರ್ಥ:
ಮಿಡುಕು: ಅಲುಗಾಟ, ಚಲನೆ; ಮಹಿ: ಭೂಮಿ; ಕಡುಹು: ಸಾಹಸ, ಹುರುಪು; ನಿಂದು: ನಿಲ್ಲು; ಬಾಲ: ಪುಚ್ಛ; ತುದಿ: ಅಗ್ರಭಾಗ; ನಡುಗು: ನಡುಕ, ಕಂಪನ; ಅನಿಲಜ: ವಾಯುಪುತ್ರ (ಭೀಮ); ಅಂಗವಟ್ಟ: ಶರೀರ; ಕಂಪಿಸು: ಅಲುಗಾಡು; ತೊಡಕು: ಗೋಜು, ಗೊಂದಲ; ಕೆಟ್ಟು: ಸರಿಯಿಲ್ಲದ; ಕಾರ್ಯ: ಕೆಲಸ; ದುರ್ಬಲ: ಶಕ್ತಿಹೀನ; ಭಂಗ: ಚೂರು, ಮುರಿಯುವಿಕೆ; ವ್ಯಾಪ್ತಿ: ಹರಹು; ಸುಡು: ದಹಿಸು; ಹಿಮ್ಮೆಟ್ಟು: ಹಿಂದೆಸರಿ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ;

ಪದವಿಂಗಡಣೆ:
ಮಿಡುಕದದು +ಮಹಿಯಿಂದ +ಭೀಮನ
ಕಡುಹು +ನಿಂದುದು +ಬಾಲದಲಿ+ ತುದಿ
ನಡುಗದ್+ಅನಿಲಜನ್+ಅಂಗವಟ್ಟದ +ಕಡುಹು +ಕಂಪಿಸದು
ತೊಡಕೆ +ಕೆಟ್ಟುದು +ಕಾರ್ಯ +ದುರ್ಬಲ
ನೊಡನೆ +ಭಂಗವ್ಯಾಪ್ತಿ +ತನ್ನನು
ಸುಡಲೆನುತ +ಹಿಮ್ಮೆಟ್ಟಿ +ಮಮ್ಮಲ +ಮರುಗಿದನು +ಭೀಮ

ಅಚ್ಚರಿ:
(೧) ಭಿಮನು ಕೊರಗಿದ ಪರಿ – ತೊಡಕೆ ಕೆಟ್ಟುದು ಕಾರ್ಯ ದುರ್ಬಲ ನೊಡನೆ ಭಂಗವ್ಯಾಪ್ತಿ ತನ್ನನು ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ