ಮಳೆಗೆ ಮೊಗದಿರುಹುವುದೆ ಬಡಬಾ
ನಳನೆಲವೊ ನಿನ್ನಂಬು ತಾಕಿದ
ರಳುಕುವೆನೆ ತಾನೆನುತ ರವಿಸುತನೆಚ್ಚನತಿರಥನ
ಹಿಳುಕು ಕವಿದವು ಭಟನ ಕೈ ಮೈ
ಗಳಲಿ ಮಿನುಗಿದವಿರುಳು ಮರನಲಿ
ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ (ದ್ರೋಣ ಪರ್ವ, ೫ ಸಂಧಿ, ೫೬ ಪದ್ಯ)
ತಾತ್ಪರ್ಯ:
ಸಮುದ್ರದ ಜಲದಲ್ಲೇ ಇರುವ ಬಡಬಾಗ್ನಿಯು ಮಳೆಗೆ ಹೆದರೀತೇ? ನಿನ್ನ ಬಾಣಗಳು ನೆಟ್ಟರೆ ನಾನು ಅಳುಕುವೆನೇ ಎನ್ನುತ್ತಾ ಕರ್ಣನು ಅಭಿಮನ್ಯುವನ್ನು ಬಾಣಗಳಿಂದ ಕವಿಯಲು ಅವಉ ರಾತ್ರಿಯಹೊತ್ತು ಮಿಂಚುಹುಳುಗಳು ಮರವನ್ನು ಮುತ್ತುವಂತೆ ಅಭಿಮನ್ಯುವಿನ ಮೈಯನ್ನು ಮುತ್ತಿದವು.
ಅರ್ಥ:
ಮಳೆ: ವರ್ಷ; ಮೊಗ: ಮುಖ; ಬಡಬಾನಳ: ಸಮುದ್ರದಲ್ಲಿರುವ ಬೆಂಕಿ; ಅಂಬು: ಬಾಣ; ತಾಗು: ಮುಟ್ಟು; ಅಳುಕು: ಹೆದರು; ರವಿ: ಸೂರ್ಯ; ಸುತ: ಮಗ; ಎಚ್ಚು: ಬಾಣ ಪ್ರಯೋಗ ಮಾಡು; ಅತಿರಥ: ಪರಾಕ್ರಮಿ; ಹಿಳುಕು: ಬಾಣದ ಗರಿ; ಕವಿ: ಆವರಿಸು; ಭಟ: ಸೈನಿಕ; ಮೈ: ತನು; ಮಿನುಗು: ಹೊಳಪು; ಇರುಳು: ರಾತ್ರಿ; ಮರ: ತರು; ಹೊಳೆ: ಪ್ರಕಾಶಿಸು; ಮುತ್ತು: ಆವರಿಸು; ಮಿಂಚುಬುಳು: ಮಿಂಚಿನ ಹುಳು; ಮಿನುಗು: ಹೊಳಪು;
ಪದವಿಂಗಡಣೆ:
ಮಳೆಗೆ +ಮೊಗದಿರುಹುವುದೆ +ಬಡಬಾ
ನಳನ್+ಎಲವೊ +ನಿನ್ನಂಬು +ತಾಕಿದರ್
ಅಳುಕುವೆನೆ +ತಾನೆನುತ +ರವಿಸುತನ್+ಎಚ್ಚನ್+ಅತಿರಥನ
ಹಿಳುಕು +ಕವಿದವು +ಭಟನ +ಕೈ +ಮೈ
ಗಳಲಿ+ ಮಿನುಗಿದವ್+ಇರುಳು +ಮರನಲಿ
ಹೊಳೆದು+ ಮುತ್ತಿದ+ ಮಿಂಚುಬುಳುವಿನ +ಮಿನುಗಿನಂದದಲಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ಮಳೆಗೆ ಮೊಗದಿರುಹುವುದೆ ಬಡಬಾನಳ; ಮಿನುಗಿದವಿರುಳು ಮರನಲಿ
ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ