ಪದ್ಯ ೧೧: ಕರ್ಣನು ಯುದ್ಧಕ್ಕೆ ಹೇಗೆ ಸಿದ್ದತೆ ಮಾಡಿಕೊಂಡನು?

ಸರಳೊಳಾಯ್ದು ಮಹಾಸ್ತ್ರವನು ಸಂ
ವರಿಸಿದನು ಬತ್ತಳಿಕೆಯಲಿ ಮಾ
ರ್ತಿರುವ ಬೆರಳಲಿ ತೀಡಿ ಕೊಪ್ಪಿನ ಬಲುಹನಾರೈದು
ತಿರುವನೇರಿಸಿ ಮಿಡಿಮಿಡಿದು ಪೊಂ
ಬರಹದವನಿನ್ನೂರು ಚಾಪವ
ನಿರಿಸಿದನು ಕೆಲದವರ ತೊಲಗಿಸಿ ವಾಮಭಾಗದಲಿ (ಕರ್ಣ ಪರ್ವ, ೨೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬಾಣಗಳಲ್ಲಿ ಮಹಾಸ್ತ್ರಗಳನ್ನು ಆಯ್ದು ತನ್ನ ಬತ್ತಳಿಕೆಯಲ್ಲಿಟ್ಟು ಕರ್ಣನು ಬಿಲ್ಲಿನ ಹಗ್ಗವನ್ನು ಬೆರಳಲ್ಲಿ ತೀಡಿ, ಬಿಲ್ಲಿನ ಕೊಪ್ಪಿನ ಬಲವನ್ನು ಪರೀಕ್ಷಿಸಿದನು. ಹೆದೆಯನ್ನೇರಿಸಿ ಅದರ ಬಲವನ್ನು ಮಿಡಿದುನೋಡಿ, ಚಿನ್ನದ ರೇಖೆಗಳನ್ನುಳ್ಳ ಇನ್ನೂರು ಬಿಲ್ಲುಗಳನ್ನು ಎಡಭಾಗದಲ್ಲಿಟ್ಟುಕೊಂಡನು.

ಅರ್ಥ:
ಸರಳ: ಬಾಣ; ಆಯ್ದು: ಆರಿಸಿ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಸಂವರಿಸು: ಸಜ್ಜು ಮಾಡು; ಬತ್ತಳಿಕೆ: ಬಾಣಗಳನ್ನು ಇಡುವ ಸ್ಥಳ; ಮಾರ್ತಿರುವು: ಮತ್ತೊಂದು ಬಿಲ್ಲಿನ ಹಗ್ಗ, ಮೌರ್ವಿ; ಬೆರಳು: ಅಂಗುಲಿ; ತೀಡಿ: ಉಜ್ಜು, ತಿಕ್ಕು, ಮಸೆ; ಕೊಪ್ಪು: ಬಿಲ್ಲಿನ ತುದಿ; ಬಲುಹು: ಬಲ, ಶಕ್ತಿ; ತಿರುವು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಏರಿಸು: ಕಟ್ಟು; ಮಿಡಿ:ತವಕಿಸು, ಆತುರಪಡು; ಪೊಂಬರಹ: ಚಿನ್ನದ ರೇಖೆ; ಚಾಪ: ಬಾಣ; ಇರಿಸು: ಇಡು; ಕೆಲ: ಪಕ್ಕ; ತೊಲಗು: ದೂರ ಸರಿ; ವಾಮ: ಎಡ;

ಪದವಿಂಗಡಣೆ:
ಸರಳೊಳ್+ಆಯ್ದು +ಮಹಾಸ್ತ್ರವನು +ಸಂ
ವರಿಸಿದನು +ಬತ್ತಳಿಕೆಯಲಿ +ಮಾ
ರ್ತಿರುವ +ಬೆರಳಲಿ +ತೀಡಿ +ಕೊಪ್ಪಿನ +ಬಲುಹನಾರೈದು
ತಿರುವನ್+ಏರಿಸಿ+ ಮಿಡಿಮಿಡಿದು +ಪೊಂ
ಬರಹದವನ್+ಇನ್ನೂರು +ಚಾಪವನ್
ಇರಿಸಿದನು +ಕೆಲದವರ +ತೊಲಗಿಸಿ +ವಾಮಭಾಗದಲಿ

ಅಚ್ಚರಿ:
(೧) ಮಾರ್ತಿರುವ, ತಿರುವ – ೩, ೪ ಸಾಲಿನ ಮೊದಲ ಪದ
(೨) ಕರ್ಣನ ತಯಾರಿ – ಪೊಂಬರಹದವನಿನ್ನೂರು ಚಾಪವ ನಿರಿಸಿದನು