ಪದ್ಯ ೫೮: ದುರ್ಯೊಧನನು ಕೃಪ, ಅಶ್ವತ್ಥಾಮರಿಗೆ ಏನು ಹೇಳಿದನು?

ಹದುಳಿಸಿರೆ ಸಾಕೇಳಿ ಸಾಕಿ
ನ್ನಿದರಲಿನ್ನೇನಹುದು ದೈವದ
ಕದಡು ಮನಗಾಣಿಸಿತು ನಮಗೀ ಕಂಟಕವ್ಯಥೆಯ
ಉದಯದಲಿ ನಾವೀ ಶರೀರವ
ನೊದೆದು ಹಾಯ್ವೆವು ನೀವು ನಿಜಮಾ
ರ್ಗದಲಿ ಬಿಜಯಂಗೈವುದೆಂದನು ನಗುತ ಕುರುರಾಯ (ಗದಾ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಕೌರವನು ಕೃಪ, ಅಶ್ವತ್ಥಾಮ, ಕೃತವರ್ಮರ ಅಳಲನ್ನು ನೋಡಿ ನಗುತ್ತಾ, ನೀವೆಲ್ಲರೂ ಸಮಾಧಾನ ತಂದುಕೊಂಡು ಏಳಿರಿ. ಈ ದುಃಖ ಇನ್ನು ಸಾಕು. ದೈವದ ಮನೋಕ್ಷೋಭೆಯು ನಮಗೆ ಈ ಕಂಟಕದ ವ್ಯಥೆಯನ್ನು ತಮ್ದಿತು. ನಾವು ನಾಳೆ ಉದಯ ಕಾಲದಲ್ಲಿ ಈ ಶರೀರವನ್ನು ಒದೆದು ಹಾಯುತ್ತೇವೆ. ನಿಮ್ಮ ದಾರಿಯಲ್ಲಿ ನೀವು ಬಿಜಯಂಗೈಯಿರಿ ಎಂದು ಹೇಳಿದನು.

ಅರ್ಥ:
ಹದುಳ: ಉತ್ಸಾಹ, ಹುರುಪು; ಸಾಕು: ನಿಲ್ಲು; ದೈವ: ಭಗವಂತ; ಕದಡು: ಕ್ಷೋಭೆಗೊಳಿಸು, ಕಲಕು; ಮನ: ಮನಸ್ಸು; ಕಾಣಿಸು: ತೋರು; ಕಂಟಕ: ತೊಂದರೆ; ವ್ಯಥೆ: ನೋವು; ಉದಯ: ಹುಟ್ಟು; ಶರೀರ: ದೇಹ; ಒದೆ: ನೂಕು; ಹಾಯ್ವು: ನೆಗೆ, ಹಾರು; ಮಾರ್ಗ: ದಾರಿ; ಬಿಜಯಂಗೈ: ದಯಮಾಡಿಸಿ, ತೆರಳಿ; ನಗು: ಹರ್ಷ;

ಪದವಿಂಗಡಣೆ:
ಹದುಳಿಸಿರೆ +ಸಾಕೇಳಿ +ಸಾಕಿನ್
ಇದರಲ್+ಇನ್ನೇನ್+ಅಹುದು +ದೈವದ
ಕದಡು +ಮನಗಾಣಿಸಿತು +ನಮಗೀ +ಕಂಟಕ+ವ್ಯಥೆಯ
ಉದಯದಲಿ +ನಾವೀ +ಶರೀರವನ್
ಒದೆದು +ಹಾಯ್ವೆವು+ ನೀವು +ನಿಜ+ಮಾ
ರ್ಗದಲಿ +ಬಿಜಯಂಗೈವುದ್+ಎಂದನು +ನಗುತ +ಕುರುರಾಯ

ಅಚ್ಚರಿ:
(೧) ದುರ್ಯೋಧನ ತನ್ನ ಸಾವಿನ ಬಗ್ಗೆ ಹೇಳುವ ಪರಿ – ಉದಯದಲಿ ನಾವೀ ಶರೀರವನೊದೆದು ಹಾಯ್ವೆವು

ಪದ್ಯ ೧೪: ದ್ರೋಣರು ಭೀಮನಿಗೆ ಯಾವ ಮಾರ್ಗ ಸೂಚಿಸಿದರು?

ಆದರೆಲವೋ ಭೀಮ ಪಾರ್ಥನ
ಹಾದಿಯಲಿ ಗಮಿಸುವರೆ ಸಾತ್ಯಕಿ
ಹೋದವೊಲು ನೀನೆಮಗೆ ವಂದಿಸಿ ಮಾರ್ಗವನು ಪಡೆದು
ಹೋದಡೊಪ್ಪುವುದಲ್ಲದೇ ಬಿರು
ಸಾದಡಹುದೇ ಬೀಳು ಚರಣಕೆ
ಕಾದುವರೆ ಹಿಡಿ ಧನುವನೆಂದನು ದ್ರೋಣನನಿಲಜನ (ದ್ರೋಣ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹಾಗದರೆ ಎಲವೋ ಭೀಮ, ಅರ್ಜುನನ ಬಳಿಗೆ ಈಗಾಗಲೇ ಸಾತ್ಯಕಿ ಹೋಗಿದ್ದಾನೆ ಅವನು ನನಗೆ ನಮಸ್ಕರಿಸಿ ದಾರಿ ಪಡೆದ ರೀತಿ ನೀನು ಸಹ ನನಗೆ ನಮಸ್ಕರಿಸು ಆಗ ನಿನಗ ದಾರಿ ಸಿಗುತ್ತದೆ, ಬಿರುಸಿನ ಮಾತು ಒರಟು ನಡೆಗಳಿಂದ ನಿನ್ನ ಕೆಲಸವಾಗದು, ನನ್ನ ಕಾಲಿಗೆ ಶರಣಾಗತನಾಗಿ ಬೀಳು, ವ್ಯೂಹದೊಳಕ್ಕೆ ಹೋಗು, ಇಲ್ಲವೋ ಯುದ್ಧಬೇಕಾದರೆ ಧನುಸ್ಸನ್ನು ಹಿಡಿ ಎಂದು ದ್ರೋಣರು ನುಡಿದರು.

ಅರ್ಥ:
ಹಾದಿ: ಮಾರ್ಗ; ಗಮಿಸು: ನಡೆ, ಚಲಿಸು; ಹೋಗು: ತೆರಳು; ವಂದಿಸು: ನಮಸ್ಕರಿಸು; ಮಾರ್ಗ: ದಾರಿ; ಪಡೆ: ದೊರಕು; ಒಪ್ಪು: ಸರಿಯಾದುದು; ಬಿಉಸು: ವೇಗ; ಬೀಳು: ಎರಗು; ಚರಣ: ಪಾದ; ಕಾದು: ಹೋರಾಡು; ಹಿಡಿ: ಗ್ರಹಿಸು; ಧನು: ಬಿಲ್ಲು; ಅನಿಲಜ: ವಾಯುಪುತ್ರ;

ಪದವಿಂಗಡಣೆ:
ಆದರ್+ಎಲವೋ +ಭೀಮ +ಪಾರ್ಥನ
ಹಾದಿಯಲಿ +ಗಮಿಸುವರೆ+ ಸಾತ್ಯಕಿ
ಹೋದವೊಲು +ನೀನೆಮಗೆ +ವಂದಿಸಿ +ಮಾರ್ಗವನು +ಪಡೆದು
ಹೋದಡ್+ಒಪ್ಪುವುದ್+ಅಲ್ಲದೇ +ಬಿರು
ಸಾದಡ್+ಅಹುದೇ +ಬೀಳು +ಚರಣಕೆ
ಕಾದುವರೆ +ಹಿಡಿ +ಧನುವನ್+ಎಂದನು +ದ್ರೋಣನ್+ಅನಿಲಜನ

ಅಚ್ಚರಿ:
(೧) ಭೀಮ, ಅನಿಲಜ – ಭೀಮನನ್ನು ಕರೆದ ಪರಿ
(೨) ವಂದಿಸು, ಬೀಳು ಚರಣಕೆ – ಸಮಾನಾರ್ಥಕ ಪದ

ಪದ್ಯ ೨: ದ್ರೋಣನ ಆಕ್ರಮಣ ಹೇಗಿತ್ತು?

ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಜೀಯಾ ಏನು ಹೇಳಲಿ, ಕಾಳ್ಗಿಚ್ಚು ಅಡವಿಯಲ್ಲಿ ಹಬ್ಬಿದಂತೆ ದ್ರೋಣನು ಪ್ರಖ್ಯಾತರಾದ ಭಟರನ್ನು ಸಂಹರಿಸಿದನು. ಅವನು ಹೋದ ದಾರಿಯಲ್ಲಿ ಪಾಂಡವಸೇನೆ ಕಲುಕಿತು. ಕಡಲು ಬತ್ತಿದರೆ ಮೀನುಗಳು ಮರುಗುವಂತೆ ವೀರರು ಮರುಗಿದರು. ದ್ರೋಣನು ಧರ್ಮಪುತ್ರನ ಬೆನ್ನು ಹತ್ತಿ ಹೋದನು

ಅರ್ಥ:
ಹೇಳು: ತಿಳಿಸು; ಜೀಯ: ಒಡೆಯ; ಕೃಶಾನು: ಅಗ್ನಿ, ಬೆಂಕಿ; ಅಡವಿ: ಕಾದು; ನಿರೂಢಿ: ವಿಶೇಷ ರೂಢಿಯಾದ, ಸಾಮಾನ್ಯ; ಭಟ: ಸೈನಿಕ; ಮುರಿ: ಸೀಳು; ಮಾರ್ಗ: ದಾರಿ; ಸೇನೆ: ಸೈನ್ಯ; ಕಲಕು: ಅಲ್ಲಾಡಿಸು; ಬತ್ತು: ಒಣಗು, ಆರು; ಉದಧಿ: ಸಾಗರ; ಮೀನು: ಮತ್ಸ್ಯ; ಮರುಗು: ತಳಮಳ, ಸಂಕಟ; ಭಟರು: ಸೈನಿಕ; ನರೇಂದ್ರ: ರಾಜ; ಅಳವಿ: ಶಕ್ತಿ; ಬೆಂಬತ್ತು: ಹಿಂಬಾಲಿಸು;

ಪದವಿಂಗಡಣೆ:
ಏನ+ ಹೇಳಲುಬಹುದು +ಜೀಯ +ಕೃ
ಶಾನುವ್+ಅಡವಿಯಲಾಡಿದಂದದಿನ್
ಆ +ನಿರೂಢಿಯ+ ಭಟರ+ ಮುರಿದನು +ಮುರಿದ+ ಮಾರ್ಗದಲಿ
ಸೇನೆ +ಕಲಕಿತು +ಬತ್ತಿದ್+ಉದಧಿಯ
ಮೀನಿನಂತಿರೆ +ಮರುಗಿದರು +ಭಟರ್
ಆ+ ನರೇಂದ್ರನನ್+ಅಳವಿಯಲಿ +ಬೆಂಬತ್ತಿದನು +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೃಶಾನುವಡವಿಯಲಾಡಿದಂದದಿ; ಬತ್ತಿದುದಧಿಯ ಮೀನಿನಂತಿರೆ ಮರುಗಿದರು ಭಟರ್

ಪದ್ಯ ೧೪: ಕೌಶಿಕನನ್ನು ಬೇಟೆಗಾರರು ಏನು ಕೇಳಿದರು?

ವನದೊಳೊಬ್ಬನು ಕೌಶಿಕಾಹ್ವಯ
ಮುನಿ ತಪಶ್ಚರಿಯದಲಿ ಸತ್ಯವೆ
ತನಗೆ ಸುವ್ರತವೆಂದು ಬಟ್ಟೆಯೊಲಿದ್ದನೊಂದುದಿನ
ವನಚರರು ಬೇಹಿನಲಿ ಭೂಸುರ
ಜನವ ಬೆಂಬತ್ತಿದರು ಕೌಶಿಕ
ಮುನಿಯ ಬೆಸಗೊಂಡರು ಮಹೀಸುರ ಮಾರ್ಗಸಂಗತಿಯ (ಕರ್ಣ ಪರ್ವ, ೧೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧರ್ಮದ ಬಗ್ಗೆ ತಿಳಿಸಲು ಒಂದು ಪ್ರಸಂಗವನ್ನು ಹೇಳಲು ಪ್ರಾರಂಭಿಸಿದನು. ಹಿಂದೆ ಕೌರ್ಶಿಕನೆಂಬ ಮುನಿಯೊಬ್ಬನು ಕಾಡಿನಲ್ಲಿ ತಪಸ್ಸನ್ನು ಮಾಡುತ್ತಿದ್ದನು. ಸತ್ಯವೇ ವ್ರತವೆಂದು ಕೈಗೊಂಡಿದ್ದನು. ಒಂದಾನೊಂದು ದಿನ ಕಾಡಿನ ಜರನು ಬ್ರಾಹ್ಮಣರ ಬೆನ್ನುಹತ್ತಿ ಬರುತ್ತಾ, ಕೌಶಿಕನನ್ನು ಬ್ರಾಹ್ಮಣರು ಎತ್ತ ಹೋದರೆಂದು ಕೇಳಿದರು.

ಅರ್ಥ:
ವನ: ಅರಣ್ಯ; ಆಹ್ವಯ: ಕರೆಯುವಿಕೆ; ಮುನಿ: ಋಷಿ; ತಪಸ್ಸು: ಧ್ಯಾನ; ಸತ್ಯ: ದಿಟ, ನೈಜ; ಸುವ್ರತ: ಒಳ್ಳೆಯ ಆಚಾರ, ನಿಯಮ; ಬಟ್ಟೆ: ಹಾದಿ, ಮಾರ್ಗ; ದಿನ: ದಿವಸ; ವನಚರರು: ಬೇಟೆಗಾರರು; ಬೇಹು: ಗುಪ್ತಚಾರಿಕೆ; ಭೂಸುರ: ಬ್ರಾಹ್ಮಣ; ಜನ: ಮನುಷ್ಯರು; ಬೆಂಬತ್ತು: ಹಿಂಬಾಲಿಸು; ಬೆಸಗೊಳ್: ಕೇಳು; ಮಹೀಸುರ: ಬ್ರಾಹ್ಮಣ; ಮಾರ್ಗ: ದಾರಿ; ಸಂಗತಿ: ವಿಚಾರ;

ಪದವಿಂಗಡಣೆ:
ವನದೊಳ್+ಒಬ್ಬನು +ಕೌಶಿಕ+ಆಹ್ವಯ
ಮುನಿ +ತಪಶ್ಚರಿಯದಲಿ +ಸತ್ಯವೆ
ತನಗೆ +ಸುವ್ರತವೆಂದು +ಬಟ್ಟೆಯೊಲಿದ್ದನ್+ಒಂದುದಿನ
ವನಚರರು +ಬೇಹಿನಲಿ +ಭೂಸುರ
ಜನವ +ಬೆಂಬತ್ತಿದರು +ಕೌಶಿಕ
ಮುನಿಯ +ಬೆಸಗೊಂಡರು +ಮಹೀಸುರ +ಮಾರ್ಗ+ಸಂಗತಿಯ

ಅಚ್ಚರಿ:
(೧) ಭೂಸುರ, ಮಹೀಸುರ – ಬ್ರಾಹ್ಮಣ – ಸಮನಾರ್ಥಕ ಪದ
(೨) ಜೋಡಿ ಪದಗಳು: ಬೇಹಿನಲಿ ಭೂಸುರ; ಮಹೀಸುರ ಮಾರ್ಗಸಂಗತಿಯ