ಏಳು ಫಲುಗುಣ ಕೃಷ್ಣನೇ ಗೋ
ಪಾಲನೇಸರ ಮಾನಿಸನು ಬರ
ಹೇಳಲಾಪರೆ ಕರೆ ಸಹಾಯಕೆ ಭಾಳಲೋಚನನ
ಏಳು ಜಂಜಡವೇನು ಜೊತ್ತಿನ
ಕಾಳೆಗಕೆ ಕಲಿಯಾಗು ನಡೆಯೆನೆ
ಕೇಳುತರ್ಜುನನಿತ್ತನವರಿಗೆ ನಗುತ ವೀಳೆಯವ (ದ್ರೋಣ ಪರ್ವ, ೨ ಸಂಧಿ, ೧೬ ಪದ್ಯ)
ತಾತ್ಪರ್ಯ:
ಸಂಶಪ್ತಕರು ಅರ್ಜುನನನ್ನು ಯುದ್ಧಕ್ಕೆ ಬಾ ಎಂದು ಪ್ರೇರೇಪಿಸಿದರು. ಏಳು ಅರ್ಜುನ, ಕೃಷ್ಣನು ದನಕಾಯುವವ, ಅವನೆಂತಹ ಮನುಷ್ಯ, ಅವನೊಡನೆ ನೀನು ಬಂದರೆ ಪ್ರಯೋಜನವಿಲ್ಲ. ಸಹಾಯಕ್ಕೆ ಶಿವನನ್ನೇ ಕರೆದುಕೊಂಡು ಬಾ, ಏಕೆ ತಡ ಸಂಶಪ್ತಕರೊಡನೆ ಯುದ್ಧಕ್ಕಾಗಿ ವೀರನಾಗಿ ಬಾ ಎಂದು ಸಂಶಪ್ತಕರು ಹೇಳಲು, ಅರ್ಜುನನು ನಸುನಕ್ಕು ಅವರಿಗೆ ಹೀಗೆ ಉತ್ತರಿಸಿದನು.
ಅರ್ಥ:
ಏಳು: ಎಚ್ಚರಗೊಳ್ಳು; ಫಲುಗುಣ: ಅರ್ಜುನ; ಗೋಪಾಲ: ದನ ಕಾಯುವವ; ಏಸರ: ಏಷ್ಟು; ಮಾನಿಸ: ಮನುಷ್ಯ; ಬರ: ಕ್ಷಾಮ; ಹೇಳು: ತಿಳಿಸು; ಕರೆ: ಬರೆಮಾಡು; ಸಹಾಯ: ಆಸರೆ; ಭಾಳ: ಹಣೆ; ಲೋಚನ: ಕಣ್ಣು; ಭಾಳಲೋಚನ: ಶಿವ; ಜಂಜಡ: ತೊಂದರೆ, ಕ್ಲೇಶ; ಜೊತ್ತು: ಆಸರೆ, ನೆಲೆ; ಕಾಳೆಗ: ಯುದ್ಧ; ಕಲಿ: ಶೂರ; ನಡೆ: ಬಾ, ಚಲಿಸು; ಕೇಳು: ಆಲಿಸು; ನಗು: ಹಸನ್ಮುಖ; ವೀಳೆ: ತಾಂಬೂಲ;
ಪದವಿಂಗಡಣೆ:
ಏಳು +ಫಲುಗುಣ +ಕೃಷ್ಣನೇ +ಗೋ
ಪಾಲನ್+ಏಸರ+ ಮಾನಿಸನು +ಬರ
ಹೇಳಲಾಪರೆ +ಕರೆ +ಸಹಾಯಕೆ +ಭಾಳಲೋಚನನ
ಏಳು+ ಜಂಜಡವೇನು+ ಜೊತ್ತಿನ
ಕಾಳೆಗಕೆ +ಕಲಿಯಾಗು+ ನಡೆ+ಎನೆ
ಕೇಳುತ್+ಅರ್ಜುನನ್+ಇತ್ತನ್+ಅವರಿಗೆ+ ನಗುತ+ ವೀಳೆಯವ
ಅಚ್ಚರಿ:
(೧) ಕೃಷ್ಣನನ್ನು ಹಂಗಿಸುವ ಪರಿ – ಕೃಷ್ಣನೇ ಗೋಪಾಲನೇಸರ ಮಾನಿಸನು
(೨) ಅರ್ಜುನನನ್ನು ಹಂಗಿಸುಅ ಪರಿ – ಕರೆ ಸಹಾಯಕೆ ಭಾಳಲೋಚನನ