ಪದ್ಯ ೩೫: ಧರ್ಮಜನ ರಕ್ಷಣೆಗೆ ಯಾವ ಸೈನ್ಯವು ಬಂದಿತು?

ಪೂತುರೇ ಪಾಂಚಾಲ ಬಲ ಬಂ
ದತುಕೊಂಡುದೆ ಧರ್ಮಪುತ್ರನ
ಘಾತಿಯನು ಘಟ್ಟಿಸಿದರೇ ತುಷ್ಟಿಸಿದನೇ ನೃಪತಿ
ಈತಗಳ ಕೊಳ್ಳೆನುತ ಶರಸಂ
ಘಾತವನು ಕವಿಸಿದನು ಮಾದ್ರೀ
ಜಾತರಡಹಾಯಿದರು ಶಲ್ಯನ ರಥದ ಸಮ್ಮುಖಕೆ (ಶಲ್ಯ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭಲೇ! ಪಾಂಚಾಲ ಸೈನ್ಯವು ಸಹಾಯಕ್ಕೆ ಬಂದೀತೇ? ಧರ್ಮಜನಿಗೆ ಆಗುವ ಅಪಾಯವನ್ನು ತಪ್ಪಿಸಿದಿರೇ? ಅರಸನಿಗೆ ವಿಶ್ರಾಮ್ತಿ ಸಿಕ್ಕೀತೇ? ಇವರನ್ನು ಬಿಡಬಾರದು ಎನ್ನುತ್ತಾ ಶಲ್ಯನು ಪಾಂಚಾಲ ಬಲವನ್ನು ಬಾಣಗಳಿಂದ ಘಾತಿಸಿದನು. ಆಗ ನಕುಲ ಸಹದೇವರು ಶಲ್ಯನ ಮುಂದೆ ರಥಗಳಲ್ಲಿ ಬಂದರು.

ಅರ್ಥ:
ಪೂತು: ಭಲೇ; ಬಲ: ಸೈನ್ಯ; ಬಂದು: ಆಗಮಿಸು; ಆತು: ಸರಿಯಾಗಿ ಹಿಡಿದು; ಪುತ್ರ: ಸುತ; ಘಾತ: ಹೊಡೆತ, ಪೆಟ್ಟು; ಘಟ್ಟಿಸು: ಹೊಡೆ, ಅಪ್ಪಳಿಸು; ತುಷ್ಟಿ: ತೃಪ್ತಿ, ಆನಂದ; ನೃಪ: ರಾಜ; ಶರ: ಬಾಣ; ಸಂಘಾತ: ಗುಂಪು, ಸಮೂಹ; ಕವಿ: ಆವರಿಸು; ಮಾದ್ರೀಜಾತ: ಮಾದ್ರಿಯಲ್ಲಿ ಜನಿಸಿದ (ನಕುಲ, ಸಹದೇವ); ಅಡಹಾಯಿ: ಅಡ್ಡ ಬಂದು; ರಥ: ಬಂಡಿ; ಸಮ್ಮುಖ: ಎದುರು;

ಪದವಿಂಗಡಣೆ:
ಪೂತುರೇ +ಪಾಂಚಾಲ +ಬಲ +ಬಂದ್
ಆತುಕೊಂಡುದೆ +ಧರ್ಮ+ಪುತ್ರನ
ಘಾತಿಯನು +ಘಟ್ಟಿಸಿದರೇ +ತುಷ್ಟಿಸಿದನೇ +ನೃಪತಿ
ಈತಗಳ+ ಕೊಳ್ಳೆನುತ +ಶರ+ಸಂ
ಘಾತವನು +ಕವಿಸಿದನು +ಮಾದ್ರೀ
ಜಾತರ್+ಅಡಹಾಯಿದರು +ಶಲ್ಯನ +ರಥದ +ಸಮ್ಮುಖಕೆ

ಅಚ್ಚರಿ:
(೧) ಘಾತಿಯನು ಘಟ್ಟಿಸಿದರೇ – ಘ ಕಾರದ ಜೋಡಿ ಪದ