ಪದ್ಯ ೩೮: ಯಾರು ಮೃತ್ಯುವಶರಾದ ರಾಜರು?

ಭರತ ಪೃಥು ಪೌರವ ಭಗೀರಥ
ವರ ಯಯಾತಿ ಮರುತ್ತ ನಹುಷೇ
ಶ್ವರ ಪುರೂರವ ರಂತಿದೇವ ಗಯಾಂಬರೀಷಕರು
ಪರಶುರಾಮ ದಿಲೀಪ ಮಾಂಧಾ
ತರು ಹರಿಶ್ಚಂದ್ರಾದಿ ಪೃಥ್ವೀ
ಶ್ವರರನಂತರು ಮೃತ್ಯುವಶವರ್ತಿಗಳು ಕೇಳೆಂದ (ದ್ರೋಣ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭರತ, ಪೃಥು, ಪೌರವ, ಭಗೀರಥ, ಯಯಾತಿ, ಮರುತ್ತ, ನಹುಷ, ಪುರೂರವ, ರಂತಿದೇವ, ಗಯ, ಅಂಬರೀಷ, ಪರಶುರಾಮ, ದಿಲೀಪ, ಮಾಂಧಾತ, ಹರಿಶ್ಚಂದ್ರ ಮೊದಲಾದ ಲೆಕ್ಕವಿಲ್ಲದಷ್ಟು ರಾಜರು ಮೃತ್ಯುವಿಗೆ ವಶವಾದರು.

ಅರ್ಥ:
ವರ: ಶ್ರೇಷ್ಠ; ಆದಿ: ಮುಂತಾದ; ಪೃಥ್ವೀಶ್ವರ: ರಾಜ; ಪೃಥ್ವಿ: ಭೂಮಿ; ಮೃತ್ಯು: ಸಾವು; ವಶ: ಅಧೀನ; ಕೇಳು: ಆಲಿಸು; ಅನಂತ: ಲೆಕ್ಕವಿಲ್ಲದಷ್ಟು;

ಪದವಿಂಗಡಣೆ:
ಭರತ +ಪೃಥು +ಪೌರವ+ ಭಗೀರಥ
ವರ +ಯಯಾತಿ +ಮರುತ್ತ +ನಹುಷೇ
ಶ್ವರ +ಪುರೂರವ +ರಂತಿದೇವ +ಗಯ+ಅಂಬರೀಷಕರು
ಪರಶುರಾಮ +ದಿಲೀಪ +ಮಾಂಧಾ
ತರು +ಹರಿಶ್ಚಂದ್ರ+ಆದಿ +ಪೃಥ್ವೀ
ಶ್ವರರ್+ಅನಂತರು +ಮೃತ್ಯುವಶವರ್ತಿಗಳು+ ಕೇಳೆಂದ

ಅಚ್ಚರಿ:
(೧) ಈಶ್ವರ ಪದದ ಬಳಕೆ – ನಹುಷೇಶ್ವರ, ಪೃಥ್ವೀಶ್ವರ