ಪದ್ಯ ೩೪: ಯಾವ ರೀತಿಯ ಕೂಗುಗಳು ಕೇಳಿ ಬಂದವು?

ಹಾ ಮುರಾಂತಕ ಹಾ ಯುಧಿಷ್ಠಿರ
ಹಾ ಮರುತ್ಸುತ ಹಾ ಧನಂಜಯ
ಹಾ ಮಗನೆ ಹಾ ತಂದೆ ಹಾ ಒಡವುಟ್ತಿದನೆಯೆನುತ
ಭೂಮಿ ತೆರೆಯಳೆ ಬಾಯನಕಟಕ
ಟಾ ಮಹೋದಧಿ ದೂರವಿನ್ನೇ
ನೀ ಮಹಾಸ್ತ್ರಕೆ ಸಿಕ್ಕಿದೆವೆಯೆಂದೊರಲಿತರಿಸೇನೆ (ದ್ರೋಣ ಪರ್ವ, ೧೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದಲ್ಲಿ ಹಾ ಕೃಷ್ಣಾ, ಹಾ ಯುಧಿಷ್ಠಿರ, ಹಾ ಭೀಮ, ಹಾ ಅರ್ಜುನಾ, ಅಯ್ಯೋ ಅಪ್ಪಾ, ಅಯ್ಯೋ ಅಣ್ಣಾ, ಅಯ್ಯೋ ಮಗನೇ ಎಂಬ ಕೂಗುಗಳು ಕೇಳಿ ಬಂದವು. ಹೋಗಿ ಹೊಕ್ಕೇವೆಂದರೆ ಸಮುದ್ರ ಬಹುದೂರದಲ್ಲಿದೆ, ಭೂಮಿಯಾದರೂ ಬಾಯನ್ನು ಬಿಡಬಾರದೇ? ನಾವೀ ಮಹಾಸ್ತ್ರಕ್ಕೆ ಸಿಕ್ಕು ಹಾಕಿಕೊಂಡೆವು ಎಂಬ ಕೂಗುಗಳು ಕೇಳಿ ಬಂದವು.

ಅರ್ಥ:
ಮುರಾಂತಕ: ಕೃಷ್ಣ; ಮರುತ್ಸುತ: ವಾಯುಪುತ್ರ (ಭೀಮ); ಮಗ: ಸುತ; ತಂದೆ: ಪಿತ; ಒಡವುಟ್ಟು: ಜೊತೆಯಲ್ಲಿ ಹುಟ್ಟಿದ; ಭೂಮಿ: ವಸುಧೆ; ತೆರೆ: ಬಿಚ್ಚುವಿಕೆ; ಅಕಟಕಟ: ಅಯ್ಯೋ; ಮಹೋದಧಿ: ಮಹಾ ಸಾಗರ; ದೂರ: ಅಂತರ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಸಿಕ್ಕು: ಒದಗು; ಬಂಧನ; ಒರಲು: ಅರಚು, ಕೂಗಿಕೊಳ್ಳು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಹಾ+ ಮುರಾಂತಕ +ಹಾ +ಯುಧಿಷ್ಠಿರ
ಹಾ +ಮರುತ್ಸುತ +ಹಾ +ಧನಂಜಯ
ಹಾ +ಮಗನೆ +ಹಾ +ತಂದೆ +ಹಾ +ಒಡವುಟ್ಟಿದನೆ+ಎನುತ
ಭೂಮಿ +ತೆರೆಯಳೆ +ಬಾಯನ್+ಅಕಟಕ
ಟಾ +ಮಹೋದಧಿ+ ದೂರವಿನ್ನೇನ್
ಈ ಮಹಾಸ್ತ್ರಕೆ +ಸಿಕ್ಕಿದೆವೆಂದ್+ಒರಲಿತ್+ಅರಿಸೇನೆ

ಅಚ್ಚರಿ:
(೧) ನೋವನ್ನು ಸೂಚಿಸುವ ಹಾ ಪದದ ಬಳಕೆ
(೨) ಸುತ, ಮಗ – ಸಮಾನಾರ್ಥಕ ಪದ
(೩) ಮಹಾಸ್ತ್ರ, ಮಹೋದಧಿ – ಮಹಾ ಪದದ ಬಳಕೆ

ಪದ್ಯ ೯: ಭೀಷ್ಮನನ್ನು ಕೃಷ್ಣನು ಹೇಗೆ ವರ್ಣಿಸುತ್ತಾನೆ?

ಆದಡರ್ಜುನ ನೋಡು ಸೈನ್ಯ ಮ
ಹೋದಧಿಯ ಮಧ್ಯದಲಿ ಮೆರೆವವ
ನಾ ದುರಂತ ಪರಾಕ್ರಮನು ಗಂಗಾಕುಮಾರಕನು
ಕಾದಲರಿದಪನಖಿಲಬಲ ವಿಭು
ವಾದನಿವನತಿಬಲನು ಕಾಲನ
ಸಾಧಿಸಿದ ಛಲದಂಕಮಲ್ಲನು ಭೀಷ್ಮ ನೋಡೆಂದ (ಭೀಷ್ಮ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಹಾಗಾದರೆ ಅರ್ಜುನ ನೋದು, ಕೌರವ ಸೈನ್ಯದ ಮಹಾ ಸಾಗರದ ಮಧ್ಯದಲ್ಲಿ ಅಪರಿಮಿತ, ನಿಸ್ಸೀಮ ಪರಾಕ್ರಮಿಯಾದ ಭೀಷ್ಮನಿದ್ದಾನೆ. ಅವನೊಡನೆ ಕಾದುವುದು ಅಸಾಧ್ಯ. ಅವನು ಕೌರವರ ಸೇನಾಧಿಪತಿ, ಅವನು ಅತಿಬಲ, ಯಮನನ್ನೂ ಗೆದ್ದ ಛಲದಂಕ, ನೋಡು ಭೀಷ್ಮನನ್ನು ಎಂದು ಕೃಷ್ಣನು ಹೇಳಿದನು.

ಅರ್ಥ:
ನೋಡು: ವೀಕ್ಷಿಸು; ಸೈನ್ಯ: ಸೇನೆ; ಮಹೋದಧಿ: ದೊಡ್ಡ ಸಾಗರ; ಮಧ್ಯ: ನಡುವೆ; ಮೆರೆ: ಹೊಳೆ, ಪ್ರಕಾಶಿಸು; ದುರಂತ: ಕೊನೆಯಿಲ್ಲದುದು; ಪರಾಕ್ರಮ: ಶೂರ; ಕುಮಾರ: ಮಗ; ಕಾದು: ಹೋರಾಡು; ಅರಿ: ತಿಳಿ; ಅತಿಬಲ: ಬಹಳ ಪರಾಕ್ರಮಿ; ವಿಭು: ಒಡೆಯ, ಅರಸು; ಅಖಿಲ: ಎಲ್ಲಾ; ಬಲ: ಸೈನ್ಯ; ಕಾಲ: ಸಮಯ, ಯಮ; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಛಲ: ದೃಢ ನಿಶ್ಚಯ; ಮಲ್ಲ: ಶೂರ;

ಪದವಿಂಗಡಣೆ:
ಆದಡ್+ಅರ್ಜುನ +ನೋಡು +ಸೈನ್ಯ +ಮ
ಹೋದಧಿಯ+ ಮಧ್ಯದಲಿ +ಮೆರೆವವನ್
ಆ+ ದುರಂತ +ಪರಾಕ್ರಮನು +ಗಂಗಾ+ಕುಮಾರಕನು
ಕಾದಲ್+ಅರಿದ್+ಅಪನ್+ಅಖಿಲ+ಬಲ+ ವಿಭು
ವಾದನ್+ಇವನ್+ಅತಿಬಲನು+ ಕಾಲನ
ಸಾಧಿಸಿದ +ಛಲದಂಕ+ಮಲ್ಲನು+ ಭೀಷ್ಮ +ನೋಡೆಂದ

ಅಚ್ಚರಿ:
(೧) ಭೀಷ್ಮನನ್ನು ಹೊಗಳುವ ಪರಿ: ವಿಭು ವಾದನಿವನತಿಬಲನು ಕಾಲನ ಸಾಧಿಸಿದ ಛಲದಂಕಮಲ್ಲನು ಭೀಷ್ಮ

ಪದ್ಯ ೨೧: ಲೋಕಗಳನ್ನು ಯಾರು ಸೃಷ್ಟಿಸುತ್ತಾರೆ?

ಮರಳಿ ಹೂಡಿದನೀಜಗದ ವಿ
ಸ್ತರಣವನು ಮಾಯಾ ಮಹೋದಧಿ
ಹೊರೆದನುನ್ನತ ಸತ್ವದಲಿ ಮೇಲಾದ ಲೋಕಗಳ
ಉರಿಯಲದ್ದುವನಿವನು ಲೀಲಾ
ಚರಿತವಿದು ಕೃಷ್ಣಂಗೆ ನಿನ್ನಯ
ಸಿರಿಯ ಸಿರಿ ಬಡತನವೆ ಬಡತನವೆಂದನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ತನ್ನ ಮಾಯಾಸಾಗರದಲ್ಲಿ ಮತ್ತೆ ಈ ಲೋಕಗಲನ್ನು ಅಣಿಮಾಡಿ ಸೃಷ್ಟಿಸಿದನು. ಈ ಲೋಕವನ್ನು ಮಹಾಸತ್ವನಾದ ಇವನು ಕಾಪಾಡುತ್ತಾನೆ. ಮತ್ತೆ ಸುಟ್ಟು ಹಾಕುತ್ತಾನೆ. ಇದು ಕೃಷ್ಣನ ಲೀಲೆ ಮತ್ತು ಆಚರಣೆ, ನಿನ್ನ ಕರ್ಮದ ದೆಸೆಯಿಂದಾಗುವ ಸಂಪತ್ತೇ ಸಂಪತ್ತು, ಮತ್ತು ಬಡತನವೇ ಬಡತನ ಆದರೆ ಕೃಷ್ಣನಿಗೆ ಕರ್ಮದ ಲೇಪವಿಲ್ಲ ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.

ಅರ್ಥ:
ಮರಳಿ: ಮತ್ತೆ; ಹೂಡು: ಅಣಿಗೊಳಿಸು; ಜಗ: ಜಗತ್ತು, ಪ್ರಪಂಚ; ವಿಸ್ತರಣ: ವಿಶಾಲ; ಮಾಯ: ಗಾರುಡಿ, ಇಂದ್ರಜಾಲ; ಮಹಾ: ದೊಡ್ಡ; ಉದಧಿ: ಸಾಗರ; ಹೊರೆ: ರಕ್ಷಣೆ, ಆಶ್ರಯ; ಉನ್ನತ: ಹೆಚ್ಚಿನ; ಸತ್ವ: ಶಕ್ತಿ, ಸಾರ; ಲೋಕ: ಜಗತ್ತು; ಉರಿ: ಸುಡು; ಅದ್ದು: ಮುಳುಗಿಸು; ಲೀಲೆ: ಆನಂದ, ಸಂತೋಷ; ಚರಿತ: ನಡೆದುದು, ಗತಿ; ಸಿರಿ: ಐಶ್ವರ್ಯ; ಬಡತನ: ಕೊರತೆ, ಅಭಾವ; ಮುನಿ: ಋಷಿ;

ಪದವಿಂಗಡಣೆ:
ಮರಳಿ +ಹೂಡಿದನ್+ಈ+ಜಗದ +ವಿ
ಸ್ತರಣವನು +ಮಾಯಾ +ಮಹಾ+ಉದಧಿ
ಹೊರೆದನ್+ಉನ್ನತ +ಸತ್ವದಲಿ +ಮೇಲಾದ +ಲೋಕಗಳ
ಉರಿಯಲ್+ಅದ್ದುವನ್+ಇವನು +ಲೀಲಾ
ಚರಿತವಿದು+ ಕೃಷ್ಣಂಗೆ +ನಿನ್ನಯ
ಸಿರಿಯ +ಸಿರಿ +ಬಡತನವೆ+ ಬಡತನವ್+ಎಂದನಾ +ಮುನಿಪ

ಅಚ್ಚರಿ:
(೧) ಕೃಷ್ಣನ ಲೀಲೆ – ಉರಿಯಲದ್ದುವನಿವನು ಲೀಲಾಚರಿತವಿದು ಕೃಷ್ಣಂಗೆ