ಪದ್ಯ ೭೩: ಕೃಷ್ಣನು ಅರ್ಜುನನಿಗೆ ಏನೆಂದು ಉಪದೇಶಿಸಿದನು?

ತೀರಿತಾತನ ಶಕ್ತಿ ಚಾಪದ
ನಾರಿ ಬೆಸಲಾಗಲಿ ಮಹಾಸ್ತ್ರವ
ನಾರುಭಟೆಯಲಿ ಗಜವ ಮುರಿ ಕೆಡೆಯೆಸು ಮಹೀಸುತನ
ಹೋರದಿರು ಹೊಗು ಬವರಕೆನಲಸು
ರಾರಿಯಂಘ್ರಿಯೊಳೆರಗಿ ಕರುಣಾ
ವಾರಿಧಿಯೊಳಭಯವನು ಪಡೆದನು ತುಡುಕಿದನು ಧನುವ (ದ್ರೋಣ ಪರ್ವ, ೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ನುಡಿಯನ್ನು ಮುಂದುವರೆಸುತ್ತಾ, ಭಗದತ್ತನ ಶಕ್ತಿ ಕೊನೆಗೊಂಡಿತು, ಇನ್ನು ನಿನ್ನ ಧನುಸ್ಸಿನ ಹೆದೆಯನ್ನೇರಿಸಿ ಮಹಾಸ್ತ್ರವನ್ನು ತೊಡಿಸು. ಸುಪ್ರತೀಕವನ್ನು ಮುರಿದು ಭಗದತ್ತನನ್ನು ಬೀಳಿಸು. ನನ್ನೊಡನೆ ಮಾತಿನ ಹೋರಾಟದಲ್ಲಿ ತೊಡಗದೆ ಯುದ್ಧವನ್ನಾರಂಭಿಸು ಎಂದು ಹೇಳಲು, ಅರ್ಜುನನು ಅವನ ಪಾದಗಳಿಗೆ ನಮಸ್ಕರಿಸಿ, ಕೃಪಾಸಾಗರನಿಂದ ಅಭಯವನ್ನು ಪಡೆದು ಗಾಂಡೀವವನ್ನು ಹಿಡಿದನು.

ಅರ್ಥ:
ತೀರು: ಮುಗಿಸು; ಶಕ್ತಿ: ಬಲ; ಚಾಪ: ಬಿಲ್ಲು; ನಾರಿ: ಹೆಣ್ಣು; ಚಾಪದನಾರಿ: ಬಿಲ್ಲಿನ ಹೆದೆ; ಬೆಸ: ಕೆಲಸ, ಕಾರ್ಯ; ಮಹಾಸ್ತ್ರ: ದೊಡ್ಡ ಶಸ್ತ್ರ; ಆರುಭಟೆ: ಆರ್ಭಟ, ಗರ್ನಜೆ; ಗಜ: ಆನೆ; ಮುರಿ: ಸೀಳು; ಕೆಡೆ: ಬೀಳು, ಕುಸಿ; ಮಹೀ: ಭೂಮಿ; ಸುತ:ಮಗ; ಹೋರು: ಧರಿಸು; ಹೊಗು: ಬವರ: ಕಾಳಗ, ಯುದ್ಧ; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ); ಅಂಘ್ರಿ: ಪಾದ; ಎರಗು: ಬಾಗು, ನಮಸ್ಕರಿಸು; ಕರುಣ: ದಯೆ; ವಾರಿಧಿ: ಸಮುದ್ರ; ಅಭಯ: ರಕ್ಷಣೆ; ಪಡೆ: ದೊರಕು; ತುಡುಕು: ಹೋರಾಡು, ಸೆಣಸು; ಧನು: ಚಾಪ;

ಪದವಿಂಗಡಣೆ:
ತೀರಿತ್+ಆತನ +ಶಕ್ತಿ +ಚಾಪದ
ನಾರಿ +ಬೆಸಲಾಗಲಿ +ಮಹಾಸ್ತ್ರವನ್
ಆರುಭಟೆಯಲಿ+ ಗಜವ +ಮುರಿ +ಕೆಡೆ+ಎಸು+ ಮಹೀಸುತನ
ಹೋರದಿರು +ಹೊಗು +ಬವರಕ್+ಎನಲ್+ಅಸು
ರಾರಿ+ಅಂಘ್ರಿಯೊಳ್+ಎರಗಿ +ಕರುಣಾ
ವಾರಿಧಿಯೊಳ್+ಅಭಯವನು +ಪಡೆದನು +ತುಡುಕಿದನು +ಧನುವ

ಅಚ್ಚರಿ:
(೧) ಭಗದತ್ತನನ್ನು ಮಹೀಸುತ ಎಂದು ಕರೆದಿರುವುದು
(೨) ಅಸುರಾರಿ, ಕರುಣಾವಾರಿಧಿ – ಕೃಷ್ಣನನ್ನು ಕರೆದ ಪರಿ