ಮುರಿದುದನಿಬರ ಮೋರೆ ಮಹಿಪನ
ಕೊರಲ ಕೊಂಕಿನಲಿದ್ದರಾ
ಸೋದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ
ಮರಳಿ ನೋಡಿದಳಕಟ ಗಂಗಾ
ವರ ಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೦೬ ಪದ್ಯ)
ತಾತ್ಪರ್ಯ:
ದೈನ್ಯದ ಸ್ಥಿತಿಯಲ್ಲಿ ಪಾಂಡವರ ಕಡೆ ದ್ರೌಪದಿ ನೋಡಲು, ಪಾಂಡವರು ಆಕೆಯ ಮುಖವನ್ನು ನೋಡಲಾಗದೆ, ಅವರ ಮುಖವನ್ನು ಬೇರೆ ಕಡೆಗೆ ತಿರುಗಿಸಿದರು. ಯುಧಿಷ್ಠಿರನ ಸನ್ನೆಯಂತೆ ಉಳಿದ ನಾಲ್ವರು ಸುಮ್ಮನಿದ್ದರು. ಅವಳು ಮತ್ತೆ ಹಿರಿಯರಾದ ಭೀಷ್ಮಾದಿಗಳ ಬಳಿ ಹೋಗಿ, ಭೀಷ್ಮ, ದ್ರೋಣ, ಕೃಪಾಚಾರ್ಯರೆ, ನನ್ನ ತಂದೆಗಳಿರಾ ನನ್ನ ಸೆರಗನ್ನು ಬಿಡಿಸಿರಿ ಎಂದು ಕಣ್ಣೀರಿಟ್ಟಳು.
ಅರ್ಥ:
ಮುರಿ: ತಿರುಗು; ಅನಿಬರು: ಅಷ್ಟು ಜನ; ಮೋರೆ: ಮುಖ; ಮಹಿಷ: ರಾಜ; ಕೊರಲು: ದನಿ; ಕೊಂಕು: ಹಿಂಜರಿ; ಸೋದರ: ತಮ್ಮ; ಸಾರ: ರಸ; ಕಾಣು: ನೋಡು; ಮರಳಿ: ಮತ್ತೆ; ನೋಡು: ವೀಕ್ಷಿಸು; ಅಕಟ: ಅಯ್ಯೋ; ವರ: ಶ್ರೇಷ್ಠ; ಕುಮಾರ: ಮಗ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿಸು: ಕಳಚು, ಸಡಿಲಿಸು; ತಂದೆ: ಪಿತ, ತಾತ; ಒರಲು: ಗೋಳಿಡು; ತರಳೆ: ಬಾಲೆ, ಯುವತಿ;
ಪದವಿಂಗಡಣೆ:
ಮುರಿದುದ್+ಅನಿಬರ+ ಮೋರೆ+ ಮಹಿಪನ
ಕೊರಲ+ ಕೊಂಕಿನಲ್+ಇದ್ದರಾ
ಸೋದರರು+ ಸಾರವನಲ್ಲಿ+ ಕಾಣದೆ +ಭೀಷ್ಮ +ಗುರು +ಕೃಪರ
ಮರಳಿ +ನೋಡಿದಳ್+ಅಕಟ +ಗಂಗಾ
ವರ+ ಕುಮಾರ+ ದ್ರೋಣ +ಕೃಪರ್+ಈ
ಸೆರಗ+ ಬಿಡಿಸಿರೆ +ತಂದೆಗಳಿರ್+ಎಂದ್+ಒರಲಿದಳು +ತರಳೆ
ಅಚ್ಚರಿ:
(೧) ಭೀಷ್ಮರನ್ನು ಗಂಗಾವರ ಕುಮಾರ ಎಂದು ಕರೆದಿರುವುದು
(೨) ದೈನ್ಯದ ಸ್ಥಿತಿ – ಮರಳಿ ನೋಡಿದಳಕಟ ಗಂಗಾವರ ಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ